ಸಮೀಕ್ಷೆಗಳು ಪೂರ್ಣ ಸತ್ಯವಲ್ಲ: ಸಿದ್ದರಾಮಯ್ಯ
Team Udayavani, May 14, 2018, 6:35 AM IST
ಮೈಸೂರು: “ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ್ದು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಬರುವ ಸಾಧ್ಯತೆಗಳ ಬಗ್ಗೆ ಹೇಳುತ್ತಿವೆ. ಇದು ಸ್ವಲ್ಪಮಟ್ಟಿನ ಸತ್ಯ. ಆದರೆ, ಅದೇ ಪೂರ್ಣ ಸತ್ಯವಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, 2019ರ ಲೋಕಸಭೆ ಚುನಾವಣೆ ವೇಳೆಗೆ ದೇಶದ ರಾಜಕೀಯ ಚಿತ್ರಣ ಬದಲಾಗಲಿದೆ ಎಂದರು.
ಮುಖ್ಯಮಂತ್ರಿ ಆಗಲು ನಾನು ಯಾವತ್ತೂ ಸಂಚು ನಡೆಸುವುದು,ವಾಮಮಾರ್ಗ ಹಿಡಿದಿಲ್ಲ. ಕಾಂಗ್ರೆಸ್ಸಿಗರಲ್ಲಿ
ಕೆಲವರಿಗೆ ಮುಖ್ಯಮಂತ್ರಿ ಆಗುವ ಆಸೆಯಿದೆ. ಆಸೆ ಪಡುವುದು ತಪ್ಪಲ್ಲ. ನನಗೆ ಅಂಥವರ ಬಗ್ಗೆ ಬೇಸರವಿಲ್ಲ.
ಆದರೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕ್ರಿಮಿನಲ್ ಚಟುವಟಿಕೆ ನಡೆಸಬಾರದು ಎಂದರು.
ಮುಖ್ಯಮಂತ್ರಿಯಾಗಿ ಇಂದಿಗೆ(ಮೇ 13) ನನ್ನ ಆಡಳಿತಾವಧಿಯ ಐದು ವರ್ಷ ಪೂರ್ಣಗೊಂಡಿದೆ. ರಾಜ್ಯಕ್ಕೆ ಸ್ಥಿರ ಸರ್ಕಾರ ನೀಡಿದ್ದೇನೆ ಎಂದರು.
ಚುನಾವಣೆ ನಿವೃತ್ತಿ: ಈಗಾಗಲೇ ಹೇಳಿರುವಂತೆ ಇದೇ ನನ್ನ ಕಡೇ ಚುನಾವಣೆ. ಇನ್ನು ಬ್ರಹ್ಮನೇ ಬಂದು ಹೇಳಿದರೂ ನಾನು ಚುನಾವಣೆಗೆ ನಿಲ್ಲಲ್ಲ. ಈ ಬಾರಿಯೇ ಚುನಾವಣೆಗೆ ಸ್ಪರ್ಧಿಸಬಾರದು ಅಂದುಕೊಂಡಿದ್ದೆ. ಆದರೆ ಒಬ್ಬ ಮುಖ್ಯಮಂತ್ರಿಯಾಗಿ ಚುನಾವಣೆಯಿಂದ ಪಲಾಯನ ಮಾಡಿದರು ಎಂಬ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಸ್ಪರ್ಧಿಸಿದ್ದೇನೆ ಎಂದರು.
ಅಂತರ ಕಡಿಮೆ ಆದರೂ ಗೆಲುವು ನನ್ನದೇ: ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ನನ್ನ ಗೆಲುವು
ಖಚಿತ. ಆದರೆ, ಚಾಮುಂಡೇಶ್ವರಿಯಲ್ಲಿ ಗೆಲುವಿನ ಅಂತರ ಕಡಿಮೆ ಆಗಬಹುದು,ಜೆಡಿಎಸ್ನವರು ವಿಪರೀತ ಹಣ ಹಂಚಿದ್ದಾರೆ. ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತೋ ಗೊತ್ತಿಲ್ಲ. ಆದರೂ ನಮ್ಮ ಜನ ಹಣಕ್ಕೆ ಮನ್ನಣೆ ಕೊಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸಿಎಂ ಆಗಿ ಐದು ವರ್ಷ ಆಡಳಿತ ನಡೆಸಲು ಅವಕಾಶ ಸಿಕ್ಕಿದ್ದಕ್ಕೆ ನನ್ನ ಎಲ್ಲ ಶಾಸಕರು, ಸಚಿವರು ಹಾಗೂ ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ