ಜೆಡಿಎಸ್ಗೆ ಒಮ್ಮೆ ಅವಕಾಶ ಕೊಡಿ
Team Udayavani, Mar 13, 2018, 5:01 PM IST
ಮಾನ್ವಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಭೂಮಿಗೆ ನೀರು, ನಿರಂತರ ವಿದ್ಯುತ್ ಒದಗಿಸುವ ಜೊತೆಗೆ 24 ಗಂಟೆಯೊಳಗೆ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸೋಮವಾರ ನಡೆದ ಜೆಡಿಎಸ್ ವಿಕಾಸ ಪರ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಅಭಿವೃದ್ಧಿ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ವಿವಿಧ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿಧವೆಯರ ಮಾಸಾಶನವನ್ನು 2000 ರೂ.ಗೆ ಹೆಚ್ಚಿಸಲಾಗುವುದು. ವೃದ್ಧರಿಗೆ ತಿಂಗಳಿಗೆ 5000 ರೂ. ನೀಡಲಾಗುವುದು.
ತೋಟಗಾರಿಕೆ ಮತ್ತು ಅರಣ್ಯ ವಲಯ ಇಲಾಖೆಗಳ ಸಸಿ ನೆಡುವೆ ಯೋಜನೆಗಳನ್ನು ನೇರವಾಗಿ ಹಳ್ಳಿಗಳಲ್ಲಿನ ರೈತರಿಗೆ ವಹಿಸಿಕೊಡುವ ಮೂಲಕ ತಿಂಗಳಿಗೆ 5000 ರೂ. ನೀಡುವ ಯೋಜನೆ ರೂಪಿಸಿದ್ದೇನೆ. ಗರ್ಭಿಣಿಯರಿಗೆ ಹೆರಿಗೆ ಮುಂಚಿನ ಮೂರು ತಿಂಗಳು ಹಾಗೂ ನಂತರ ಮೂರು ತಿಂಗಳು ಪ್ರತಿ ತಿಂಗಳು 6000 ರೂ.ನಂತೆ 36000 ರೂ. ನೀಡುವ ಯೋಜನೆ ರೂಪಿಸಿದ್ದೇನೆ. ಇದಕ್ಕೆ ಹಣ ಹೊಂದಿಸುವ ನೀಲನಕ್ಷೆ ಕೂಡ ತಯಾರಿಸಿದ್ದೇನೆ. ಪ್ರತಿ ತಿಂಗಳು ವಿಧಾನಸೌಧಕ್ಕೆ ರೈತರನ್ನು ಕರೆಸಿಕೊಂಡು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು.
ಕೃಷಿಯಲ್ಲಿ ಸಾಧನೆ ಮಾಡಿದ ರೈತರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅವರಿಂದ ಇತರರಿಗೆ ಮಾರ್ಗದರ್ಶನ ಮಾಡಿಸಲಾಗುವುದು ಎಂದು ತಮ್ಮ ಕನಸುಗಳನ್ನು ಬಿಚ್ಚಿಟ್ಟ ಅವರು, ಕಳೆದ ಹತ್ತು ವರ್ಷಗಳಿಂದ ನಿಮ್ಮ ಆಶೀರ್ವಾದಕ್ಕಾಗಿ ಕಾಯುತ್ತಿದ್ದು, ದಯವಿಟ್ಟು ಒಮ್ಮೆ ಅವಕಾಶ ಕೊಡಿ ಎಂದು ಕೋರಿದರು.
ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ರಾಯಚೂರಿನಲ್ಲಿಯೇ ಹತ್ತಿ ಕೈಗಾರಿಕೆ
ಹಾಗೂ ಬಟ್ಟೆ ತಯಾರಿಕೆ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆಗೆ ನಿರಂತರ ವಿದ್ಯುತ್ ಹಾಗೂ ಕಾಲುವೆಗೆ ಎರಡು ಬೆಳೆಗೆ ನೀರು ಹರಿಸಲಾಗುವುದು. ಇದರಿಂದ ಇಲ್ಲಿನ ಜನತೆ ಗುಳೆ ಹೋಗುವುದನ್ನು ತಪ್ಪಿಸಬಹುದು. ದಯವಿಟ್ಟು ಒಮ್ಮೆ ಜೆಡಿಎಸ್ಗೆ ಮತ ಹಾಕಿ. ಮಾನ್ವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕರಿಗೂ ಮತ ಹಾಕಿಸಿ ಗೆಲ್ಲಿಸಿ, ನನ್ನ ಗೆಲುವು ರಾಜ್ಯದ ಜನತೆಯ ಗೆಲುವಾಗಲಿದೆ ಎಂದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು. ಪಟ್ಟಣದ ಬಸವ ವೃತ್ತದಿಂದ ಟಿಎಪಿಸಿಎಂಎಸ್ ವೇದಿಕೆವರೆಗೆ ತೆರೆದ ವಾಹನದಲ್ಲಿ ಸಾವಿರಾರು ಬೈಕ್ಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಸೇರಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಬಂಡೆಪ್ಪ ಕಾಶೆಂಪುರ, ಸಿಂಧನೂರು ಮಾಜಿ ಶಾಸಕ ವೆಂಕಟರಾವ್
ನಾಡಗೌಡ, ಪ್ರಧಾನ ಕಾರ್ಯದರ್ಶಿ ಎಚ್ .ದೇವರಾಜ, ಯುವ ಘಟಕಾಧ್ಯಕ್ಷ ಪಿ.ರವಿಕುಮಾರ ವಕೀಲ, ವಕ್ತಾರ ನಾಗರಾಜ ಭೋಗಾವತಿ, ಗೋಪಾಲ ನಾಯಕ ಹರವಿ, ಮೌಲಾಸಾಬ ಇತರರು ಇದ್ದರು.
ಕಾಂಗ್ರೆಸ್ ಸರ್ಕಾರ ತರಾಟೆಗೆ
ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಭಾಷಣದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ
ಆಡಳಿತದ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಭರವಸೆಗಳು ಕೇವಲ ಜಾಹೀರಾತಿಗೆ ಸೀಮಿತವಾಗಿವೆ.
ಜಾಹೀರಾತಿಗಾಗಿ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿ ನಿಂದ ಭ್ರಷ್ಟರಿಗೆ ರಕ್ಷಣೆ ನೀಡುತ್ತಾ ಬಂದಿದೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿರುವ ಸಿಎಂ ಸಿದ್ದರಾಮಯ್ಯನವರ
ಭರವಸೆಗಳು ಜನರನ್ನು ತಲುಪಿಲ್ಲ. ಲಕ್ಷ ಲಕ್ಷ ಆಶ್ರಯ ಮನೆಗಳು, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ವಿದ್ಯುತ್
ಉತ್ಪಾದನೆ ಮಾಡಲಾಗಿದೆ ಎಂದೆಲ್ಲಾ ಪ್ರಚಾರ ಪಡೆದುಕೊಳ್ಳಲಾಗುತ್ತಿದೆ.
ಆದರೆ ನಿಜ ಸ್ಥಿತಿ ಹಾಗಿಲ್ಲ, ರಾಜ್ಯದಲ್ಲಿ ರೈತರನ್ನು, ಮಹಿಳೆಯರನ್ನು, ದಲಿತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು