ನಿವೃತ್ತ ನೌಕರರಿಗೆ ವಂಚಕರ ಹೊಂಚು!
Team Udayavani, Jan 20, 2022, 2:57 AM IST
ರಾಯಚೂರು: ಆನ್ಲೈನ್ ವಂಚನೆ ಪ್ರಕರಣಗಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ. ವಂಚಕರು ಈಗ ನಿವೃತ್ತ ನೌಕರರನ್ನು ಗುರಿಯಾಗಿಸಿಕೊಂಡು ತಮ್ಮ ಕೈ ಚಳಕ ತೋರಿಸಲು ಮುಂದಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಎಷ್ಟೋ ಜನ ಈ ರೀತಿ ಆನ್ಲೈನ್ನಲ್ಲಿ ಮೋಸ ಹೋಗಿ ಲಕ್ಷಾಂತರ ರೂ. ಕಳೆದುಕೊಂಡ ನಿದರ್ಶನಗಳಿವೆ.
ಈ ಪ್ರಕರಣಗಳ ಸಾಲಿಗೆ ನಿವೃತ್ತ ನೌಕರರು ಕೂಡ ಸೇರುತ್ತಿದ್ದಾರೆ. ಕರ್ತವ್ಯದಲ್ಲಿದ್ದಾಗ ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡಿರುವ ನಿಖರ ಮಾಹಿತಿ ಪಡೆದ ವಂಚಕರು, ಅಂಥವರಿಗೆ ಕರೆ ಮಾಡಿ ಬ್ಯಾಂಕ್ ವಿವರ ಕೇಳುತ್ತಿದ್ದಾರೆ. ನೀವು ಬಿಎಲ್ಒ ಆಗಿ ಕೆಲಸ ಮಾಡಿದ್ದೀರಲ್ಲವೇ? ನಾವು ಬ್ಯಾಂಕ್ನಿಂದ ಕರೆ ಮಾಡುತ್ತಿದ್ದೇವೆ. ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಿದ್ದು, ನಿಮ್ಮ ಬಾಕಿ ವೇತನ ಪಾವತಿಸಬೇಕಿದ್ದು, ಬ್ಯಾಂಕ್ ವಿವರ ಕೊಡಿ ಎಂದು ಕೇಳುತ್ತಿದ್ದಾರೆ. ಜತೆಗೆ ಎಟಿಎಂ ಕಾರ್ಡ್ ಕೊನೆ ಅವಧಿ ತಿಳಿಸಿ ಎಂದು ಕೇಳುತ್ತಿದ್ದಾರೆ.
ಕೆಲವರು ಎಚ್ಚರದಿಂದ ಮರು ಪ್ರಶ್ನೆ ಮಾಡಿದರೆಕಾಲ್ಕೂಡಲೇ ಕಡಿತಗೊಳ್ಳುತ್ತದೆ. ಇಲ್ಲವಾದರೆ, ಒಂದೊಂದಾಗಿ ಮಾಹಿತಿ ಕೇಳುತ್ತ ಖಾತೆಗೆ ಕನ್ನ ಹಾಕುವ ಯತ್ನಗಳು ನಡೆದಿವೆ. ಕನ್ನಡದಲ್ಲೇ ವ್ಯವಹಾರ: ಇಷ್ಟು ದಿನ ಆನ್ ಲೈನ್ ವಂಚನೆಗೆ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತನಾಡುವ ಕರೆಗಳು ಬರುತ್ತಿದ್ದವು. ಆದರೀಗ ಬರುತ್ತಿರುವಕರೆಗಳುಕನ್ನಡದಲ್ಲೇವ್ಯವಹರಿಸುತ್ತಿದ್ದಾರೆ. ಆರಂಭದಲ್ಲಿ ಸಂಪೂರ್ಣ ಹೆಸರು, ವಿಳಾಸ, ಕೆಲಸ ಮಾಡಿದ ಸ್ಥಳ ಇತ್ಯಾದಿ ವಿವರ ವಂಚಕರೇ ತಿಳಿಸಿ ವಿಶ್ವಾಸಾರ್ಹತೆ ಮೂಡಿಸುವ ಯತ್ನ ಮಾಡುತ್ತಾರೆ. ಕೊನೆಗೆ ಬ್ಯಾಂಕ್ ಖಾತೆಗಳ ವಿವರ ಕೇಳಲು ಶುರು ಮಾಡುತ್ತಾರೆ.
ಅವರು ಕೇಳುವ ಮಾಹಿತಿ ತಿಳಿಸಿದ್ದಲ್ಲಿ ಖಾತೆಗೆ ಕನ್ನ ಖಚಿತ ಎಂದೇ ಹೇಳಬೇಕು. ಈ ಕುರಿತು ಇಲಾಖೆ ಸಂಪರ್ಕಿಸಿದರೆ ನಾವು ಯಾವುದೇ ಮಾಹಿತಿ ಕೇಳಿಲ್ಲ. ಬ್ಯಾಂಕ್ಗಳ ಜತೆಗೂ ಸಂಪರ್ಕ ಮಾಡಿಲ್ಲ. ಖಾತೆ ವಿವರ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು. ಎಲ್ಲ ಮಾಹಿತಿ ಖಚಿತಪಡಿಸಿಕೊಂಡೇ ವ್ಯವಹಾರ ನಡೆಸಬೇಕು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು