ಮಕ್ಕಳ ಸೈಕಲ್ ಮಾರಿದ ಮುಖ್ಯ ಶಿಕ್ಷಕಿಗೆ ತರಾಟೆ
Team Udayavani, Jul 16, 2019, 4:51 PM IST
ಮುದಗಲ್ಲ: ಛತ್ತರ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿಯೊಂದಿಗೆ ವಾಗ್ವಾದ ನಡೆಸಿದ ಯುವಕರು.
ಮುದಗಲ್ಲ: ಶಾಲೆಯಲ್ಲಿ ಉಳಿದ ಹೆಚ್ಚುವರಿ ಸೈಕಲ್ಗಳನ್ನು ಮಾರಾಟ ಮಾಡಿಕೊಂಡ ಮುಖ್ಯ ಶಿಕ್ಷಕಿಯನ್ನು ಛತ್ತರ ಗ್ರಾಮದ ಯುವಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಸಮೀಪದ ಛತ್ತರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕಾವೇರಿಬಾಯಿ ಎಂಬವರು ಶಾಲೆಯಲ್ಲಿ ಉಳಿದ 8 ಸೈಕಲ್ಗಳನ್ನು ಯಾರ ಗಮನಕ್ಕೂ ತರದೇ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ಯುವಕರು ಶಾಲೆಗೆ ತೆರಳಿ ಮುಖ್ಯಶಿಕ್ಷಕಿಗೆ ತರಾಟೆಗೆ ತಗೆದುಕೊಂಡಿದ್ದಾರೆ.
ಶಾಲೆಯಲ್ಲಿ ಸೈಕಲ್ಗಳು ಹೆಚ್ಚುವರಿಯಾಗಿ ಉಳಿದರೆ ಇಲಾಖೆಗೆ ಹಿಂದಿರುಗಿಸಬೇಕು. ಆದರೆ ಮುಖ್ಯ ಶಿಕ್ಷಕಿ ಇಲಾಖೆ ಗಮನಕ್ಕೆ ತಾರದೇ ಮಾರಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆಯಲ್ಲಿ ಎಸ್ಡಿಎಂಸಿ ರಚನೆಗೆ ಶಿಕ್ಷಕರು ಸಹಕರಿಸುತ್ತಿಲ್ಲ, ಕಾವೇರಿಬಾಯಿ ಮುಖ್ಯಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಶಾಲೆಯಲ್ಲಿ ಯಾವುದೂ ಸರಿಯಿಲ್ಲ. ಮುಖ್ಯ ಶಿಕ್ಷಕಿ ಸಮಯ ಪಾಲನೆ ಮಾಡುತ್ತಿಲ್ಲ. ತಮ್ಮ ಮನಸ್ಸಿಗೆ ತಿಳಿದಾಗ ಬರುತ್ತಾರೆ. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ವಿಚಾರಿಸಿದರೆ ಸ್ಪಂದಿಸದೇ ಒರಟಾಗಿ ಮಾತನಾಡುತ್ತಾರೆ. ಕೂಡಲೇ ಮುಖ್ಯ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಬೇಕೆಂದು ಛತ್ತರ ಗ್ರಾಮದ ಯುವಕರಾದ ನಾಗಲಾಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಶೇಖರಪ್ಪ ಪ್ಯಾಟಿ, ವಿರುಪಣ್ಣ ಕಂಬಳಿ, ಯಮನೂರ ದಾಸರ, ವಿರುಪಣ್ಣ ಪ್ಯಾಟಿ, ಬಸವರಾಜ ಹಳ್ಳಿ, ವಿರುಪಣ್ಣ ವ್ಯಾಸನಂದಿಹಾಳ, ನಾಗರಾಜ ದಾಸರ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.