ಸ್ಥಳ ಮಂಜೂರು ಮಾಡಲು ಆಗ್ರಹ
Team Udayavani, Apr 26, 2022, 2:43 PM IST
ರಾಯಚೂರು: ಸಿದ್ರಾಮಪುರ ಗ್ರಾಮದ ವ್ಯಾಪ್ತಿಯಲ್ಲಿ ಮಾಜಿ ಸೈನಿಕರ ಸಂಘದ ಕಚೇರಿಗೆ, ವಸತಿಗಾಗಿ 2013ರಲ್ಲಿ ಮಂಜೂರಾದ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ರದ್ದುಪಡಿಸಿರುವ ಕ್ರಮ ಖಂಡಿಸಿ ಸೋಮವಾರ ರಾಯಚೂರು ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರು ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸಿದ್ರಾಂಪುರದ ಸರ್ವೇ ನಂ 106ರ ವಿಸ್ತೀರ್ಣ 25 ಎಕರೆಯಲ್ಲಿ 3 ಎಕರೆ ಜಮೀನು ಮಂಜೂರು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಜಿಲ್ಲಾಧಿಕಾರಿ ಆದೇಶದಂತೆ 2013 ರಲ್ಲಿ ಸಂಘಕ್ಕೆ ಮಂಜೂರಾದ 3 ಎಕರೆ ಜಮೀನನ್ನು 2018ರಲ್ಲಿ ರದ್ದುಪಡಿಸಿರುವುದು ಖಂಡನೀಯ. 2021 ಸೆ.14ರಂದು ಈಗಾಗಲೇ ಸರ್ವೇ ಮತ್ತು ಇತರೆ ನಿಯಮ ಕಾರ್ಯಗಳು ಮುಗಿದಿವೆ. ಆದ್ದರಿಂದ ಮಾಜಿ ಸೈನಿಕರ 10 ವರ್ಷಗಳ ಬೇಡಿಕೆಯಂತೆ ಮಂಜೂರಾದ ಭೂಮಿಯನ್ನು ಮತ್ತು ಸಂಬಂಧಪಟ್ಟ ಕಾಗದ ಪತ್ರಗಳನ್ನು ಜಿಲ್ಲೆಯ ಎಲ್ಲ ಸೈನಿಕರ ಹಸ್ತಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ದುಡಿದು ಜಿಲ್ಲೆ ಮತ್ತು ತಾಲೂಕು ಪ್ರದೇಶಗಳಲ್ಲಿ ವಾಸವಾಗಿರುವ ಸೈನಿಕರಿಗೆ ಜಮೀನಿನಲ್ಲಿ ವಾಸಿಸಲು ನಿವೇಶನಗಳ ಹಕ್ಕು ಪತ್ರಗಳನ್ನು ನೀಡಿ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಸೈನಿಕರ ಸಂಘದ ಸದಸ್ಯರಾದ ಡಾ| ಶಿವಾನಂದ, ಕಿಶನ್ ಪ್ರಸಾದ್, ಕೆ.ಎಸ್.ರಾವ್, ಮನೋಹರ ಸಿಂಗ್, ಶೇಖಪ್ಪ, ನರಸಿಂಹಲು, ಚನ್ನಾರೆಡ್ಡಿ, ಶಿವಶಂಕರ, ಡಿ.ಜಾನ್, ರೈತರ ಸಂಘದ ಮುಖಂಡರು ಹೋರಾಟ ಬೆಂಬಲಿಸಿ ಭಾಗವಹಿಸಿದ್ದರು.