ಸಿದ್ದು ಬಂಡಿಯೇ ಜೆಡಿಎಸ್ ಅಭ್ಯರ್ಥಿ: ಕುಮಾರಸ್ವಾಮಿ
Team Udayavani, Apr 23, 2022, 5:51 PM IST
ಲಿಂಗಸುಗೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದು ಬಂಡಿಯೇ ಜೆಡಿಎಸ್ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪಟ್ಟಣದ ಹೊರವಲಯದ ಹೆಲಿಪ್ಯಾಡ್ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದು ಬಂಡಿಯವರೇ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಯಾವುದೇ ಅನುಮಾನ ಬೇಡ. ಸಿದ್ದು ಬಂಡಿಯವರನ್ನು ಗೆಲ್ಲಿಸಿ ತರುವಲ್ಲಿ ಕಾರ್ಯಕರ್ತರು ಹೆಚ್ಚು ಶ್ರಮವಹಿಸಬೇಕು. ಜೆಡಿಎಸ್ ಅಧಿಕಾರಕ್ಕೆ ಬರುವುದು ಅಷ್ಟೇ ಖಚಿತವಾಗಿದೆ ಎಂದರು.
ಮಾನಪ್ಪ ವಜ್ಜಲ್ ಜೆಡಿಎಸ್ಗೆ ಸೇರಿಸುತ್ತಾರೆ ಎಂಬುದು ಶುದ್ಧ ಸುಳ್ಳು, ಜೆಡಿಎಸ್ನಲ್ಲಿದ್ದಾಗ ನನಗೆ ಟೋಪಿ ಹಾಕಿ ಬಹಳಷ್ಟು ಸಲ ಮೋಸ ಮಾಡಿದ್ದಾರೆ. ಮಾನಪ್ಪ ವಜ್ಜಲ್ 420. ನಾನು ಯಾವುದೇ ಕಾರಣಕ್ಕೂ ಜೆಡಿಎಸ್ಗೆ ಸೇರಿಸಿಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದರು.
ಕ್ಷೇತ್ರದ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರು ಯಾವುದೇ ಉಹಾಪೋಹಗಳಿಗೆ ಕಿವಿಗೊಡಬಾರದು ಎಂದರು.
ಜೆಡಿಎಸ್ ಮುಖಂಡ ಸಿದ್ದು ಬಂಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ನಾಗಭೂಷಣ, ಹುಲಗಪ್ಪ ನಾಯಕ ಹಾಗೂ ಇನ್ನಿತರಿದ್ದರು.