ಮಗನ ಕೊಂದು ತಾಯಿ ಆತ್ಮಹತ್ಯೆ
Team Udayavani, Mar 25, 2019, 12:14 PM IST
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡೆತ್ನೋಟ್ ಬರೆದಿಟ್ಟ ತಾಯಿಯೊಬ್ಬಳು, ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಬಾವಿ ಸಮೀಪದ ಕಲ್ಯಾಣನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಅಬಕಾರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಸಂತೋಷ್ ಶೆಟ್ಟಿ ಅವರ ಪತ್ನಿ ಪ್ರತಿಮಾ ಮಂಗಳ್ಳೋರರ್ (28) ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೂ ಮೊದಲು ತನ್ನ ಎರಡೂವರೆ ವರ್ಷದ ಪುತ್ರ ಸಾತ್ವಿಕ್ನನ್ನು ನೇಣುಬಿಗಿದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.
ಕಾರವಾರ ಮೂಲದ ಸಂತೋಷ್ ಶೆಟ್ಟಿ, ನಾಲ್ಕು ವರ್ಷಗಳ ಹಿಂದೆ ಯಲ್ಲಾಪುರದ ಪ್ರತಿಮಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಎರಡೂವರೆ ವರ್ಷದ ಒಂದು ಗಂಡು ಮಗು ಇತ್ತು. ಸಂತೋಷ್ ಶೆಟ್ಟಿ ಕುಟುಂಬ ಸಮೇತ ನಾಗರಬಾವಿ ಸಮೀಪದ ಕಲ್ಯಾಣನಗರದ 14ನೇ ಮುಖ್ಯರಸ್ತೆಯಲ್ಲಿರುವ ಸಂಬಂಧಿಕರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಶನಿವಾರ ಬೆಳಗ್ಗೆ ಸಂತೋಷ್ ಶೆಟ್ಟಿ ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಮಾ ಡೆತ್ನೋಟ್ ಬರೆದಿಟ್ಟು, ಪುತ್ರ ಸಾತ್ವಿಕ್ನನ್ನು ಕೊಠಡಿಯಲ್ಲಿರುವ ಫ್ಯಾನ್ಗೆ ನೇಣುಬಿಗಿದು ಕೊಂದಿದ್ದಾರೆ. ಬಳಿಕ ತಾವೂ ಅದೇ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಸಾಮಾನ್ಯವಾಗಿ ಸಂತೋಷ್ ಶೆಟ್ಟಿ ವಾರಾಂತ್ಯದಲ್ಲಿ ಕುಟುಂಬದ ಜತೆ ಪಿಕ್ನಿಕ್ ಹೋಗುತ್ತಿದ್ದರು. ಹೀಗಾಗಿ ಶನಿವಾರ ಸಂಜೆ ಐದು ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಪತ್ನಿ ಪ್ರತಿಮಾಗೆ ಹತ್ತಾರು ಬಾರಿ ಕರೆ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಹೀಗಾಗಿ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಮನೆ ಬಳಿ ಬಂದ ಸಂಬಂಧಿಕರು ಬಾಗಿಲು ಬಡಿದರೂ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೊಬೈಲ್ಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಅನುಮಾನಗೊಂಡು ಸ್ಥಳೀಯರ ನೆರವು ಪಡೆದು ಬಾಗಿಲು ಒಡೆದು ನೋಡಿದಾಗ ದುರ್ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ನಂತರ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿ ಮೃತ ದೇಹಗಳು° ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ. ಪ್ರತಿಮಾ ಪೋಷಕರು ಸಹ ಸಂತೋಷ್ ಶೆಟ್ಟಿ ವಿರುದ್ಧ ಇದುವರೆಗೂ ಯಾವುದೇ ದೂರು ನೀಡಿಲ್ಲ ಎಂದು ಚಂದ್ರಾಲೇಔಟ್ ಪೊಲೀಸರು ಹೇಳಿದರು.
ಡೆತ್ನೋಟ್ನಲ್ಲಿ ಏನಿದೆ?: “ದೇವರೇ ದಯವಿಟ್ಟು ನನ್ನನ್ನು ಕ್ಷಮಿಸು. ನನಗೆ ಬದುಕಲು ಇಷ್ಟವಿಲ್ಲ. ನಾನು ಸತ್ತ ಬಳಿಕ ನನ್ನ ಮಗ ಅನಾಥ ಆಗುತ್ತಾನೆ. ಹೀಗಾಗಿ ಮಗನನ್ನು ಕೊಂದು, ನಾನೂ ಸಾಯುತ್ತಿದ್ದೇನೆ’ ಎಂದು ಡೆತ್ನೋಟ್ನಲ್ಲಿ ಪ್ರತಿಮಾ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.