ಪೌರತ್ವ ತಿದ್ದುಪಡಿ ಕಾನೂನು ಜನಜಾಗೃತಿ
Team Udayavani, Dec 27, 2019, 2:42 PM IST
ಪಾವಗಡ: ಪೌರತ್ವ ತಿದ್ದುಪಡಿ ಕಾನೂನಿಂದ ಯಾರಿಗೂ ತೊಂದರೆ ಯಾಗುವುದಿಲ್ಲ ಎಂದು ಜಿಲ್ಲಾ ಪೌರತ್ವ ತಿದ್ದುಪಡಿ ಕಾನೂನು ಬಿಜೆಪಿ ಜನಜಾಗೃತಿ ಜಿಲ್ಲಾ ಸಂಚಾಲಕ ಸಂಪಂಗಿ ನಂದೀಶ್ ಹೇಳಿದರು. ಪಟ್ಟಣದ ಆಂಧ್ರಗಿರಿ ಭವನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಲೋಕ ಹಾಗೂ ರಾಜ್ಯಸಭೆಯಲ್ಲಿ ಬಹುಮತದಿಂದ ಅಂಗೀಕಾರವಾದ ಕಾಯ್ದೆ ವಿರೋಧಿಸುವುದು ಸರಿಯಲ್ಲ. ಸ್ವಾತಂತ್ರ್ಯ ಬಂದಾಗ ಮುಸ್ಲಿಮರಿಗೆ ಪಾಕಿಸ್ತಾನ, ಹಿಂದುಗಳಿಗೆ ಭಾರತ ಎಂದು ಇಬ್ಭಾಗ ಮಾಡಲಾಯಿತು. ಪಾಕಿಸ್ತಾನದಲ್ಲಿ ಹಿಂದುಗಳಿಗೆ ತೊಂದರೆಯಾದರೆ ಭಾರತದ ಪೌರತ್ವ ನೀಡುವ ಬಗ್ಗೆ ಅಂದೇ ಒಪ್ಪಂದವಾಗಿತ್ತು. ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ಶೇ.6ರಷ್ಟಿದ್ದ ಮುಸ್ಲಿಮರ ಸಂಖ್ಯೆ ಈಗ ಶೇ.16 ಆಗಿದೆ. ಪಾಕಿಸ್ತಾನದಲ್ಲಿ ಶೆ.13ರಷ್ಟಿದ್ದ ಹಿಂದುಗಳ ಸಂಖ್ಯೆ ಶೇ.4ಕ್ಕೆ ಇಳಿದಿದೆ. ಪೌರತ್ವ ಕಾನೂನಿಂದ 33 ಸಾವಿರ ಮಂದಿಗೆ ಲಾಭ ಸಿಗಲಿದೆ. ಬಿಜೆಪಿ ಕಾರ್ಯಕರ್ತರು ಪೌರತ್ವ ಕಾನೂನು ಬಗ್ಗೆ ತಿಳಿದುಕೊಂಡು ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ವಿಸ್ತಾರಕ ಜಯಪ್ರಕಾಶ್ ಮಾತನಾಡಿ,ತಾಲೂಕಿನ ಕಾರ್ಯಕರ್ತರು ಬೂತ್ಮಟ್ಟದಲ್ಲಿ ಜನಜಾಗೃತಿ ಸಭೆ ಮಾಡಬೇಕು. ಕಾಂಗ್ರೆಸ್ ಮತ್ತು ಕೆಲ ಕೀಡಿಗೆಡಿಗಳು ಮಾಡುತ್ತಿರುವ ಅಪಪ್ರಚಾರ ಜನತೆಗೆ ತಿಳಿಸಿ ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರವಿಶಂಕರ್ ನಾಯ್ಕ, ಜಿಲ್ಲಾ ಕಾರ್ಯದರ್ಶಿ ರವಿ, ತಾಲೂಕು ಜಾಗೃತಿ ಉಸ್ತುವಾರಿ ಒಂಕಾರ್, ತಾಲೂಕು ನಿಕಟಪೂರ್ವ ಅಧ್ಯಕ್ಷ ಗಿರೀಶ್, ಮುಖಂಡರಾದ ಕರಿಯಣ್ಣ, ಸೂರ್ಯನಾರಾಯಣ, ಪಾಂಡು ಯಾದವ್, ಬ್ಯಾಡನೂರ್ ಶಿವು, ಚಂದ್ರಶೇಖರ್ ನಾಯ್ಕ, ನವೀನ್ ಕುಮಾರ್, ಪಾಲಣ್ಣ ಇತರರಿದ್ದರು.