ಸ್ಮಾರ್ಟ್ ಕೆಲಸದಿಂದ ಮನೆ, ರಸ್ತೆಗೆ ಬಂದ ಚರಂಡಿ ನೀರು
Team Udayavani, Feb 24, 2021, 2:15 PM IST
ತುಮಕೂರು: “ಚರಂಡಿಯ ಕೊಳಚೆ ನೀರು ಮನೆ ಒಳಗೆ ನುಗ್ಗುತ್ತಿದೆ. ಮನೆಯಲ್ಲಿ ವಾಸಿಸಲು ಆಗದ ರೀತಿ ಕೆಟ್ಟವಾಸನೆ ಬರುತ್ತಿದೆ. ಈ ವಾಸನೆಯಲ್ಲಿ ನಾವು ಹೇಗೆ ಇಲ್ಲಿ ಬದುಕಬೇಕು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’.
ನಗರದ 2ನೇ ವಾರ್ಡ್ ನಾಗರಿಕರ ಮಾತಿದು. ಶಿರಾಗೇಟ್ನಿಂದ ಸತ್ಯಮಂಗಲ, ದೇವರಾಯನ ದುರ್ಗರಸ್ತೆಯಲ್ಲಿ ಕೊಳಚೆ ನೀರು ಮನೆಗಳಿಗೆ ಮತ್ತು ರಸ್ತೆಗೆ ನುಗ್ಗಿ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.ಶಿರಾಗೇಟ್ನಿಂದ ಸತ್ಯಮಂಗಲ, ದೇವರಾಯನ ದುರ್ಗ ರಸ್ತೆಯಲ್ಲಿರುವ ಎಚ್ಕೆಎಸ್ ಕಲ್ಯಾಣ ಮಂಟ ಪದ ಮುಂಭಾಗದಲ್ಲಿ ದೊಡ್ಡ ರಾಜಗಾಲುವೆ ಇದ್ದು, ಈ ರಾಜಗಾಲುವೆಯನ್ನು ಸ್ಮಾರ್ಟ್ಸಿಟಿ ಅಧಿಕಾರಿಗಳು ಮುಚ್ಚಿ, ಚರಂಡಿ ನೀರು ಸರಾಗವಾಗಿ ಹರಿಯಲುಯೋಜನೆ ರೂಪಿಸದೇ ಅವೈಜ್ಞಾನಿಕ ಕಾಮಗಾರಿ ನಿರ್ವಹಣೆ ಮಾಡಿದ್ದೇ ಈ ಸಂಕಷ್ಟಕ್ಕೆ ಕಾರಣ ಎಂದು ತಿಳಿದು ಬಂದಿದೆ.
15 ದಿನಗಳಿಂದ ಸಮಸ್ಯೆ: ಈ ಬಗ್ಗೆ ಈ ಭಾಗದ ನಾಗರೀಕರು ಸ್ಮಾರ್ಟ್ಸಿಟಿ ಅಧಿಕಾರಿಗಳನ್ನು ಕೇಳಿದರೆ, ಇದು ನಮಗೆ ಸಂಬಂಧಪಟ್ಟಿದ್ದಲ್ಲ, ವಾಟರ್ಬೋರ್ಡ್ ನವರಿಗೆ ಸಂಬಂಧಿಸಿದ್ದು. ಅವರು ದುರಸ್ತಿ ಮಾಡಬೇಕಿದೆ ಎನ್ನುತ್ತಾರೆ. ವಾಟರ್ಬೋರ್ಡ್ ನವರನ್ನು ಕೇಳಿದರೆ ಮಹಾನಗರಪಾಲಿಕೆಯ ಜೆಟ್ ಮಿಷನ್ ಸರಿಯಿಲ್ಲ, ಅದಕ್ಕೆ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿಲ್ಲ ಎಂದು ಅಧಿಕಾರಿಗಳು ಒಬ್ಬರ ಮೇಲೊಬ್ಬರು ದೂರುತ್ತಿದ್ದಾರೆಯೇ ವಿನಃ ಸಮಸ್ಯೆ ಬಗೆಹರಿಯುತ್ತಿಲ್ಲ. ಕಳೆದ 15 ದಿನಗಳಿಂದಲೂ ಈ ಭಾಗದಲ್ಲಿ ಜನರಿಗೆ ಸಮಸ್ಯೆ ತೀವ್ರವಾಗಿದೆ ಎನ್ನುತ್ತಾರೆ ನಾಗರೀಕರು.
ಪರ್ಯಾಯ ಯೋಜನೆ ರೂಪಿಸಬೇಕಿತ್ತು: ಸ್ಮಾರ್ಟ್ಸಿಟಿ ಅಧಿಕಾರಿಗಳು ರಾಜಗಾಲುವೆ ಮುಚ್ಚಬೇಕಾದರೆ ಆ ರಾಜಗಾಲುವೆಗೆ ಪರ್ಯಾಯವಾಗಿ ಯೋಜನೆ ರೂಪಿಸಿ ಚರಂಡಿ ಕೊಳಚೆ ನೀರು ಸರಾಗವಾಗಿ ಬೇರೆಡೆ ಹರಿಯಲು ಮಾರ್ಗಸೂಚಿ ಮಾಡಿಲ್ಲ. ಹೀಗಾಗಿ ನಾಗರೀಕರ ಮನೆಗಳಿಗೆ, ಮನೆಗಳ ಮುಂದೆ ಇರುವ ತೊಟ್ಟಿಗಳಿಗೆ, ಕಲುಷಿತ ಚರಂಡಿ ನೀರು ಮಿಶ್ರಣ ಗೊಂಡು, ಕಲುಷಿನ ನೀರನ್ನೇ ಬಳಸುವ ಪರಿಸ್ಥಿತಿ ಎದುರಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿ :
ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕಿರುವ ಅಧಿಕಾರಿಗಳು ಶಿರಾಗೇಟ್ ಎಚ್ಕೆಎಸ್ ಕಲ್ಯಾಣ ಮಂಟಪದ ಮುಂಭಾಗ ದೊಡ್ಡ ರಾಜಗಾಲುವೆ ಮುಚ್ಚಿ, ಅವೈಜ್ಞಾನಿಕ ಕಾಮಗಾರಿ ನಿರ್ವಹಣೆಮಾಡಿದ್ದರಿಂದ ಡ್ರೈನೇಜ್ ನೀರು ಮನೆಗಳಿಗೆ ನುಗ್ಗಿ, ಕಲುಷಿತ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಕಳೆದ 3-4 ದಿನಗಳಿಂದ ಕಲುಷಿತ ಚರಂಡಿ ನೀರು ಮನೆಗಳಿಗೆ ಮತ್ತು ಮನೆಗಳ ಮುಂದೆ ಇರುವ ತೊಟ್ಟಿಗಳಿಗೆ ಹರಿಯುತ್ತಿದ್ದು,ರಸ್ತೆಯಲ್ಲೂ ಕಲುಷಿತ ನೀರು ಹರಿಯುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪ್ರತಿಭಟಿಸುವ ಮುನ್ನ ಕೂಡಲೇ ಸಂಬಂಧಪಟ್ಟಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದುವಾರ್ಡಿನ ಮುಖಂಡರಾದ ಶ್ರೀನಿವಾಸ್, ಗಣೇಶ್, ಶಿವಣ್ಣ, ರಾಜಣ್ಣ, ಚಿಕ್ಕಸಿದ್ದಯ್ಯ, ನರಸೇಗೌಡ ಮತ್ತಿತರರು ಒತ್ತಾಯಿಸಿದ್ದಾರೆ.
ಶಿರಾಗೇಟ್ ನಿಂದ ಸತ್ಯಮಂಗಲ, ದೇವರಾಯನದುರ್ಗ ರಸ್ತೆಯ ಎಚ್ಕೆಎಸ್ ಕಲ್ಯಾಣ ಮಂಟಪದ ಮುಂಭಾಗದ ರಾಜಗಾಲುವೆಮುಚ್ಚಬೇಕಾದರೆ ಅದಕ್ಕೆ ಪರ್ಯಾಯ ಯೋಜನೆ ರೂಪಿಸಿ ಚರಂಡಿಯಲ್ಲಿ ಹರಿಯುವ ಕೊಳಚೆ ನೀರು ಬೇರೆಡೆ ತಿರುಗಿಸಲು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ಕಾರ್ಯ ನಡೆದಿಲ್ಲ. ಸಮಸ್ಯೆಬಗೆಹರಿಸಬೇಕಾದ ಸ್ಮಾರ್ಟ್ಸಿಟಿ ಅಧಿಕಾರಿಗಳು ಮನಸೋ ಇಚ್ಚೆ ಕಾಮಗಾರಿ ನಿರ್ವಹಿಸಿ ಅವರೇ ಸುಪ್ರೀಂ ಎನ್ನುವಂತೆ ವರ್ತಿಸುತ್ತಿದ್ದಾರೆ. –ಮಂಜುನಾಥ್, ಮಹಾ ನಗರಪಾಲಿಕೆ ಸದಸ್ಯರು, 2ನೇ ವಾರ್ಡ್, ಶಿರಾಗೇಟ್