ಪಾದೂರು – ಕೂರಾಲಿನಲ್ಲಿ ಬೋನಿಗೆ ಬಿದ್ದ ಚಿರತೆ
Team Udayavani, May 31, 2021, 10:06 AM IST
ಕಾಪು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು – ಕೂರಾಲು ರೆನ್ನಿ ಕುಂದರ್ ಅವರ ಮನೆ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಚಿರತೆಯನ್ನು ಬಂಧಿಸುವ ಅರಣ್ಯ ಇಲಾಖೆಯ ಪ್ರಯತ್ನ ಸಫಲವಾಗಿದೆ.
ಪಾದೂರು – ಕೂರಾಲು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ತೊಂದರೆ ನೀಡುತ್ತಿದ್ದ ಚಿರತೆಯನ್ನು ಬಂಧಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾ.ಪಂ ಮತ್ತು ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿದ್ದರು.
ರವಿವಾರಾ ರಾತ್ರಿ ಬೇಟೆ ಅರಸಿಕೊಂಡು ಬಂದ ಚಿರತೆ ಬೋನಿಗೆ ಬಿದ್ದಿದ್ದು, ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಟಾರ್ಜನ್ ಸಿನಿಮಾ ನಟ ಲಾರಾ, ಪತ್ನಿ ಸೇರಿ ಏಳು ಮಂದಿ ಸಾವು
ನಾಲ್ಕು ವರ್ಷ ಪ್ರಾಯದ ಚಿರತೆಯನ್ನು ಸೋಮವಾರ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಶೆಟ್ಟಿ ಕೆಟರರ್ಸ್ ನ ರಂಗನಾಥ ಶೆಟ್ಟಿ ಅವರ ವಾಹನದ ಮೂಲಕ ರವಿವಾರ ಮುಂಜಾನೆ ಕೊಲ್ಲೂರು ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ, ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್ ದಾಸ್ ಶೆಟ್ಟಿ, ಗುರುರಾಜ್, ಅರಣ್ಯಾಧಿಕಾರಿಗಳಾದ ಎಚ್. ಜಯರಾಮ ಶೆಟ್ಟಿ, ಅಭಿಲಾಷ್, ಪರಶುರಾಮ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಳೆದ ಒಂದು ವರ್ಷದಲ್ಲಿ ಅರಣ್ಯ ಇಲಾಖೆಯು ಬಂಧಿಸಿದ ಮೂರನೇ ಚಿರತೆ ಇದಾಗಿದೆ.