ಸಂತೆಗೂ ತಟ್ಟಿದ ಕೊರೊನಾ ಭೀತಿ: ತರಕಾರಿ ಬೆಲೆ ಅಗ್ಗ
Team Udayavani, Mar 16, 2020, 5:30 AM IST
ಉಡುಪಿ: ನಗರದ ಅತ್ಯಧಿಕ ಜನರು ಸೇರುವ ಸಂತೆಕಟ್ಟೆಯ ರವಿವಾರದ ಸಂತೆಗೂ ಕೊರೊನಾ ವೈರಸ್ ಪರಿಣಾಮ ಬೀರಿದೆ. ಇದರಿಂದ ಗ್ರಾಹಕರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.
ಗ್ರಾಹಕರ ಕುಸಿತ – ಮಾಸ್ಕ್
ಸಂತೆಕಟ್ಟೆ ಸಂತೆ ತಡರಾತ್ರಿ 2ರಿಂದ ಬೆಳಗ್ಗೆ 11ರೊಳಗಾಗಿ ಮುಗಿದು ಹೋಗುವ ಅತ್ಯಂತ ದೊಡ್ಡ, ಅಲ್ಪಾವಧಿ ಸಂತೆ ಯಾಗಿದೆ. ವಾರಕ್ಕೊಮ್ಮೆ ನಡೆಯುವ ರವಿವಾರದ ನಗರದ ಸಂತೆಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಗ್ರಾಹಕರು ತರಕಾರಿ, ಹಣ್ಣು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸುತ್ತಾರೆ. ಮಾ. 15ರಂದು ನಡೆದ ಸಂತೆಯಲ್ಲಿ ಗ್ರಾಹಕರ ಕೊರತೆ ಎದ್ದು ಕಾಣುತ್ತಿತ್ತು. ಬೆಳಗ್ಗೆ 8.30 ಅನಂತರ ಗ್ರಾಹಕರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂದಿತ್ತು. ಕೆಲವು ಗ್ರಾಹಕರು ಮಾಸ್ಕ್ ಧರಿಸಿ ಹಣ್ಣು, ತರಕಾರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು.
ತರಕಾರಿ-ಬೆಲೆ ಇಳಿಕೆ
(ದರ ಕೆ.ಜಿ.ಗಳಲ್ಲಿ) ತೊಂಡೆಕಾಯಿ, ಎಲೆಕೋಸು, ಸೋರೆಕಾಯಿ, ಸೀಮೆಬದನೆಕಾಯಿ 30ರಿಂದ 20 ರೂ., ಆಲೂಗಡ್ಡೆ 30ರಿಂದ 25 ರೂ., ಕ್ಯಾಪ್ಸಿಕಂ, ಹೂಕೋಸು 30ರಿಂದ 20 ರೂ., ಬದನೆಕಾಯಿ, ಕ್ಯಾರೆಟ್, ಚಪ್ಪರದ ಅವರೆಕಾಯಿ, ಅಲಸಂಡೆ 30 ರೂ., ಹಾಗಲಕಾಯಿ 30 ರೂ., ಹಸಿಮೆಣಸಿನಕಾಯಿ 60 ರಿಂದ 50 ರೂ., ನುಗ್ಗೆಕಾಯಿ 40 ರೂ.ಗೆ ಇಳಿಕೆಯಾಗಿದೆ ಎಂದು ಸಂತೆ ವ್ಯಾಪಾರಿ ಮಾದೇಶ್ ತಿಳಿಸಿದರು.
ಅನನಾಸು, ಪಪ್ಪಾಯಿಗೆ ಬೇಡಿಕೆ
ದೇಹದ ಉಷ್ಣತೆ ಕಾಪಾಡಲು ಪಪ್ಪಾಯಿ, ಅನನಾಸ್ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮುಗಿ ಬಿದ್ದು ಅನನಾಸು ಹಾಗೂ ಪಪ್ಪಾಯಿ, ದಾಳಿಂಬೆ ಖರೀದಿಸುತ್ತಿರುವ ದೃಶ್ಯಗಳು ಕಂಡು ಬಂದವು. ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಕಲ್ಲಂಗಡಿ, ಕಿತ್ತಳೆಗೆ ಬೇಡಿಕೆ ತುಸು ಕಡಿಮೆಯಿತ್ತು.
ಸಂತೆಯಲ್ಲಿ ಗ್ರಾಹಕರ ಕೊರತೆ ಕಾಣುತ್ತಿದೆ. ಸಾಮಾನ್ಯವಾಗಿ ಗ್ರಾಹಕ ರಿಂದ ತುಂಬಿ ತುಳುಕುತ್ತಿತ್ತು. ವ್ಯಾಪಾರವಿಲ್ಲದ ಕಾರಣ ನಷ್ಟ ಮಾಡಿಕೊಂಡು ತರಕಾರಿ ಮಾರಾಟ ಮಾಡುತ್ತಿದ್ದೇನೆ.
-ಶಂಕರ, ತರಕಾರಿ ವ್ಯಾಪಾರಿ.
ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿದ್ದೇನೆ. ಇಷ್ಟು ದಿನ ಬೆಳಗ್ಗೆ ಬೇಗ ಬಂದು ತರಕಾರಿ ಖರೀದಿಸುತ್ತಿದ್ದೆ. ಇವತ್ತು ಮಾತ್ರ 10ಕ್ಕೆ ಬಂದು ಖರೀದಿಸುತ್ತಿದ್ದೇನೆ. ಉಷ್ಣಾಂಶ ಅಧಿಕ ಇರುವ ಸಂದರ್ಭದಲ್ಲಿ ಶೀತ, ಕೆಮ್ಮು ಕಾಯಿಲೆಗಳು ಹತ್ತಿರ ಬರುವುದಿಲ್ಲ.
-ಶುೃತಿಕಾ, ಗ್ರಾಹಕರು.
ಆರೋಗ್ಯ,ಉಷ್ಣಾಂಶವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನನಾಸು, ಪಪ್ಪಾಯ, ದಾಳಿಂಬೆ ಹಣ್ಣು ಖರೀದಿಸಿದ್ದೇನೆ. ಸಾಮಾನ್ಯ ಜ್ವರವನ್ನು ಸಹ ಕಡೆಗಣಿಸುವಂತಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಾಗ್ರತೆ ವಹಿಸುತ್ತಿದ್ದೇನೆ.
-ಪ್ರೇಮಾ, ಗ್ರಾಹಕರು.