ಮಧ್ಯಾಂತರ ಅವಧಿಯಲ್ಲಿ ಶಿಕ್ಷಕರ ವರ್ಗಾವಣೆ: ಸರಕಾರಿ ಶಾಲೆಗಳು ತತ್ತರ!
Team Udayavani, Sep 21, 2018, 9:32 AM IST
ಉಡುಪಿ: ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದು, ನಗರಗಳಲ್ಲಿರುವ (ಎ ವಲಯ) ಶಾಲೆಗಳಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದವರಿಗೆ ವರ್ಗಾವಣೆ ಕಡ್ಡಾಯಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಇದೇ ವೇಳೆ ಬಿ ವಲಯ (ಅರೆ ಪಟ್ಟಣ), ಸಿ ವಲಯ (ಗ್ರಾಮಾಂತರ)ಗಳಿಂದ ಎ ವಲಯಕ್ಕೆ ವರ್ಗಾವಣೆ ಕಡ್ಡಾಯಗೊಳಿಸದ ಕಾರಣ ನಗರದ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪಾಠ ನಷ್ಟವಾಗುವ ಭೀತಿ ಎದುರಾಗಿದೆ.
ನಗರಗಳ ಶಾಲೆಗಳಲ್ಲಿ ಕೇಂದ್ರೀಕೃತರಾದ ಶಿಕ್ಷಕರು ಹಳ್ಳಿಗಳಿಗೆ ಹೋಗಲು ತಯಾರಿಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಹಳ್ಳಿಗಳ ಶಾಲೆಗಳಿಗೆ ಅನುಕೂಲವಾದರೂ ನಗರದ ಕೆಲವು ಶಾಲೆಗಳಿಗೆ ಸದ್ಯಕ್ಕೆ ತೊಂದರೆಯಾಗಲಿದೆ ಎಂದು ಅರ್ಥೈಸಲಾಗುತ್ತಿದೆ. ಈ ಮಧ್ಯೆ ನಗರಗಳಲ್ಲಿರುವವರು ನಗರಗಳಲ್ಲೇ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಹಳ್ಳಿಗಳಿಗೆ ಹೋಗಲು ಒಪ್ಪುತ್ತಿಲ್ಲ. ಈ ಶೈಕ್ಷಣಿಕ ಅಸಮತೋಲನ ಸರಿಪಡಿ ಸಲು ಇದು ಸರಿಯಾದ ಕ್ರಮ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಎ ವಲಯದಲ್ಲಿರುವ ಪ್ರಾಥಮಿಕ ಶಾಲೆಗಳಿಗೆ ಜಿಲ್ಲೆಯೊಳಗೆ, ಪ್ರೌಢಶಾಲೆಗಳಿಗೆ ವಿಭಾಗ ಮಟ್ಟದೊಳಗೆ (ಮೈಸೂರು ವಿಭಾಗದಲ್ಲಿ ಎಂಟು ಜಿಲ್ಲೆಗಳಿವೆ), ಪ.ಪೂ. ಕಾಲೇಜಿನವರಿಗೆ ರಾಜ್ಯ ಮಟ್ಟದಲ್ಲಿ ವರ್ಗಾವಣೆ ನಡೆಯುತ್ತಿದೆ. ಪ.ಪೂ. ಕಾಲೇಜಿನವರಿಗೆ ವರ್ಗಾವಣೆ ನಡೆದಿದ್ದು, ಪ್ರಾಥಮಿಕ, ಪ್ರೌಢಶಾಲೆಯವರಿಗೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ನಗರದೊಳಗಿನ ಕೆಲವು ಸರಕಾರಿ ಶಾಲೆಗಳು ಪ್ರತಿಷ್ಠಿತ ಖಾಸಗಿ ಶಾಲೆಗಳ ಮಟ್ಟದಲ್ಲಿವೆ. ಉದಾಹರಣೆಗೆ, ಉಡುಪಿ ವಳಕಾಡು ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಬ್ರಹ್ಮಾವರದ ಸರಕಾರಿ ಪ್ರೌಢ ಶಾಲೆ, ಸರಕಾರಿ ಬಾಲಕಿಯರ ಪ.ಪೂ. ಕಾಲೇಜು ಇತ್ಯಾದಿ. ಇಲ್ಲಿ ಒಂದೊಂದು ತರಗತಿಯಲ್ಲಿರು ವಷ್ಟು ಮಕ್ಕಳು ಗ್ರಾಮೀಣ ಭಾಗದ ಒಂದು ಶಾಲೆ ಯಲ್ಲಿರುವುದಿಲ್ಲ. ಕೆಲಸದ ಒತ್ತಡ ಇತ್ಯಾದಿ ಕಾರಣಕ್ಕೆ ಬಿ ಮತ್ತು ಸಿ ವಲಯದವರು ಎ ವಲಯಕ್ಕೆ ಬರಲು ಹಿಂದೇಟು ಹಾಕಬಹುದು. ಆಗ ಹುದ್ದೆಗಳು ಖಾಲಿಯೇ ಇರುತ್ತವೆ. ಉದಾಹರಣೆಗೆ, ಉಡುಪಿ ಸರಕಾರಿ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿಯೊಬ್ಬರು ಹೆಬ್ರಿಗೆ ವರ್ಗಾವಣೆಗೊಂಡಿದ್ದರೂ ಉಡುಪಿಯಲ್ಲಿನ ಹುದ್ದೆ ಭರ್ತಿಯಾಗಿಲ್ಲ. ಹಾಗಾಗಿ ಎ ವಲಯದಿಂದ ಕಡ್ಡಾಯ ವರ್ಗಾವಣೆಗೆ ಆದೇಶಿಸಿದಂತೆಯೇ ಬಿ ಮತ್ತು ಸಿ ವಲಯದಲ್ಲಿನ ಹತ್ತು ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸಿದವರಿಗೂ ಕಡ್ಡಾಯ ವರ್ಗಾವಣೆ ಆದೇಶ ಹೊರಡಿಸಿದರೆ ಪಾಠ ನಷ್ಟವಾಗುವ ಭೀತಿ ದೂರವಾಗಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಮೂರೂ ವಲಯಕ್ಕೂ ಆಗಲಿ
ಎ ವಲಯದ ಶಿಕ್ಷಕರಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದವರು ಬೆಂಗಳೂರಿನಲ್ಲಿ ಹೆಚ್ಚಿದ್ದಾರೆ. ಇವರಲ್ಲಿ ಬಹುತೇಕರು ರಾಜಕೀಯ ಕೃಪಾಕಟಾಕ್ಷದವರು. ಇಷ್ಟು ದಿನ ಈ ಪ್ರಕ್ರಿಯೆ ಮುಂದಕ್ಕೆ ಹೋಗಿ ಈಗ ವರ್ಗಾವಣೆ ಆದೇಶ ಹೊರಬಿದ್ದಿದೆ. ಹೀಗೆ ಮಾಡಿದರೆ ಗ್ರಾಮಾಂತರದ ಶಾಲೆಗಳಿಗೆ ಅನುಕೂಲವಾದರೂ ನಗರದ ಶಾಲೆಗಳಿಗೆ ಸಮಸ್ಯೆಯಾಗಲಿದೆ. ವರ್ಗಾವಣೆ ಆದೇಶ ಮೂರೂ ವಲಯಗಳಿಗೂ ಮಾಡಬೇಕು. ಈ ಬಗ್ಗೆ ಶಿಕ್ಷಕರ ಸಂಘಟನೆ ಹೋರಾಟ ನಡೆಸುತ್ತಿದೆ.
ಶಶಿಧರ ಶೆಟ್ಟಿ ಆಲೂರು
ರಾಜ್ಯ ಪ್ರಾ. ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರು
ಅನಿವಾರ್ಯ ಒಪ್ಪಿಗೆ
ವರ್ಗಾವಣೆ ಸರಕಾರದ ನಿಯಮವಾದ ಕಾರಣ ನಾವು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ. ಇದ ರಿಂದ ನಗರಗಳ ಶಾಲೆಗಳಿಗೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ನಾವು ಕಡಿಮೆ ಮಕ್ಕಳು ಇರುವ ವಿದ್ಯಾಲಯದಿಂದ ಶಿಕ್ಷಕರನ್ನು ಎರವಲು ಸೇವೆ (ಡೆಪ್ಯುಟೇಶನ್) ಪಡೆದು ಅಥವಾ ತಾತ್ಕಾಲಿಕ ನೇಮಕಾತಿ ಮಾಡಿಕೊಂಡು ನಿಭಾಯಿಸಬೇಕಾಗಿದೆ. ಈ ಹಿಂದೆ ಒಮ್ಮೆ ಗ್ರಾಮಾಂತರದವರಿಗೆ ನಗರಕ್ಕೆ ವರ್ಗಾವಣೆಗೆ ಅವಕಾಶ ಕೊಟ್ಟಿದ್ದರು. ಮುಂದೆಯೂ ಅಂತಹ ಅವಕಾಶ ಕೊಡುತ್ತಾರೆಂದು ತಿಳಿದುಬಂದಿದೆ.
ವಿಲಾಸಕುಮಾರ್ ಉಡುಪಿ
ಜಿಲ್ಲಾ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರು
ಸರಿಯಾದ ಕ್ರಮ
ಹಳ್ಳಿಗಳ ಶಾಲೆಗಳಲ್ಲಿ ಇನ್ನೂ ಅನೇಕ ಹುದ್ದೆಗಳು ಖಾಲಿ ಇವೆ. ನಗರದಲ್ಲಿದ್ದವರು ನಗರದಲ್ಲಿ, ಹಳ್ಳಿಯಲ್ಲಿದ್ದವರು ಹಳ್ಳಿಯಲ್ಲಿದ್ದಾರೆ. ನಗರದಲ್ಲಿದ್ದವರು ಹಳ್ಳಿಗೆ ಹೋಗಲು ಇಷ್ಟಪಡುತ್ತಿಲ್ಲ. ಈ ಕಾರಣದಿಂದ ಶೈಕ್ಷಣಿಕ ಅಸಮತೋಲನ ನಿವಾರಿಸಲು ಸರಕಾರ ಈ ಕಾನೂನು ತಂದಿದೆ. ಶೈಕ್ಷಣಿಕ ಅಸಮತೋಲನ ನಿವಾರಿಸಲು ಇದು ಸೂಕ್ತ ಮಾರ್ಗ.
–ಶಶಿಧರ ಆರ್. ಶೆಟ್ಟಿ ಬಸ್ರುರೂ
ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್