ಕೋಡಗನ ಕೋಳಿ ನುಂಗಲಿಲ್ಲ; ತ್ಯಾಜ್ಯ ನೀರು ಈ ಕೆರೆಗಳನ್ನೇ ನುಂಗಿತು!
Team Udayavani, Feb 15, 2020, 7:45 AM IST
ಬೇಸಗೆ ಇರಲಿ, ಜನವರಿ ಬಂದ ಕೂಡಲೇ ನಗರಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತದೆ. ಎಷ್ಟೋ ಬಡಾವಣೆಗಳಲ್ಲಿ ಆಗಲೇ ಬೇಸಗೆ ಆರಂಭವಾಗುತ್ತದೆ. ನಗರಾಡಳಿತವು ನಾಗರಿಕರ ಬಾಯಾರಿಕೆ ತಣಿಸಲು ಹರಸಾಹಸ ಪಡುತ್ತದೆ. ಆಗ ನಮ್ಮ ಕೆರೆಗಳನ್ನು, ಬಾವಿಗಳನ್ನು ಉಳಿಸಿಕೊಂಡಿದ್ದರೆ ಎಷ್ಟು ಸುಖವಾಗಿರುತ್ತಿತ್ತು ಎಂದು ಜನರೂ ಹಲುಬುತ್ತಾರೆ. ನಗರಾಡಳಿತವೂ ನೀರು ಉಳಿಸಿ, ಜಲಸಂಪನ್ಮೂಲ ವ್ಯರ್ಥ ಮಾಡಬೇಡಿ ಎಂದೆಲ್ಲಾ ಪ್ರವಚನ ನೀಡುತ್ತದೆ. ಇದು ಪ್ರತಿ ವರ್ಷದ ಸಂಪ್ರದಾಯ. ಉಡುಪಿ ನಗರದ ವಿಚಿತ್ರವೆಂದರೆ, ಸುಮಾರು 22 ವರ್ಷಗಳಿಂದ ಬುದ್ಧಿ ಹೇಳಬೇಕಾದ ನಗರಾಡಳಿತದ ಜವಾಬ್ದಾರಿ ಹೊತ್ತ ನಗರಸಭೆಯ ನಿರ್ಲಕ್ಷ್ಯವೇ ಎಲ್ಲ ಜಲ ಮೂಲಗಳಿಗೂ ಕಂಟಕವಾಗುತ್ತಿದೆ ಎಂದರೆ ನಂಬಲು ಕಷ್ಟವೆನಿಸಬಹುದು, ಆದರೂ ಸತ್ಯ.
ಕೊಡವೂರು: ಇಂದ್ರಾಣಿ ನದಿಯನ್ನು ನಗರದ ಕೆಲವು ವಸತಿ ಪ್ರದೇಶಗಳು ಮತ್ತು ನಗರಸಭೆಯ ವೆಟ್ವೆಲ್ಗಳಿಂದ ಬಿಡಲಾಗುವ ತ್ಯಾಜ್ಯ ನೀರು ಬರೀ ಬಾವಿಗಳ ಬದುಕನ್ನಷ್ಟನ್ನೇ ನುಂಗಿಲ್ಲ.
ಕೊಡವೂರು, ಕಾನಂಗಿ ಹಾಗೂ ಕಲ್ಮಾಡಿ ಪರಿಸರದ ನಾಲ್ಕಕ್ಕಿಂತಲೂ ಹೆಚ್ಚು ಕೆರೆಗಳನ್ನೂ ಈಗಾಗಲೇ ಆಪೋಶನ ತೆಗೆದುಕೊಂಡಿದೆ. ಇನ್ನಷ್ಟು ಕೆರೆಗಳು ಇದೇ ಸಾಲಿನಲ್ಲಿ ನಿಂತು ರೋಗಗ್ರಸ್ತವಾದರೆ ಅಚ್ಚರಿ ಪಡಬೇಕಿಲ್ಲ.
ಸುದಿನ ತಂಡವು ಈ ಪ್ರದೇಶದಲ್ಲೆಲ್ಲ ಸಾಕಷ್ಟು ತಿರುಗಾಡಿತು. ಈಗಾಗಲೇ ರೋಗಗ್ರಸ್ತವಾಗಿರುವ ನಾಲ್ಕು ಕೆರೆಗಳ ಸ್ಥಿತಿ ಶೋಚನೀಯವಾಗಿದೆ. ಬಹಳ ಮುಖ್ಯವಾಗಿ ಕಾನಂಗಿ ಪರಿಸರದ ಶಂಕರನಾರಾಯಣ ತೀರ್ಥ ಕೆರೆ, ಕಲ್ಲಮಠ ಕೆರೆ, ಶ್ರೀದೇವಿ ಜ್ಞಾನೋದಯ ಪಾಂಡುರಂಗ ಕೆರೆ, ಸೇನರ ಜಿಡ್ಡ ನಾಗಬನ ಹತ್ತಿರ, ಮುಕ್ತಿಧಾಮ ಕೆರೆ (ಕೊಡವೂರು ಸೇತುವೆ ಬಳಿ)-ಎಲ್ಲವೂ ಈಗಾಗಲೇ ಉಸಿರುಗಟ್ಟಿಕೊಂಡು ಸಾಯುತ್ತಿವೆ.
ಒಂದು ಸಂದರ್ಭ ಜಲರಾಶಿ
ಪ್ರತಿ ಕೆರೆಯ ಬಳಿಯ ಹೋಗಿ ಮಾತನಾಡಿಸಿದರೂ ಕೇಳಿಬರುವುದು ಒಂದೇ ಮಾತು. “ಹಿಂದೆಲ್ಲಾ ಈ ಕೆರೆಗಳಿಂದಲೇ ನಾವು ಕೃಷಿ ಮಾಡುತ್ತಿದ್ದೆವು. ಜತೆಗೆ ಇವುಗಳಲ್ಲಿ ಚೆನ್ನಾಗಿ ನೀರಿದ್ದ ಕಾರಣ ನಮ್ಮ ಮನೆಗಳ ಬಾವಿಗಳಲ್ಲೂ ಚೆನ್ನಾಗಿ ನೀರಿರುತ್ತಿತ್ತು. ಈಗ ಎಲ್ಲವೂ ಹಾಳಾಗಿವೆ’ ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರರಾವ್.
ಈ ಮಾತು ಇವರೊಬ್ಬರದ್ದೇ ಅಲ್ಲ. ಸೇನರ ಜಿಡ್ಡ ಬಳಿ ಹೋದಾಗಲೂ ಅಲ್ಲೇ ಇದ್ದ ಎರಡು ಕೆರೆಗಳ ಬಗ್ಗೆಯೂ ಸ್ಥಳೀಯರೊಬ್ಬರು ಹೇಳಿದ್ದು ಇದನ್ನೇ. “ಈ ಕೆರೆಗಳಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಜನರೂ ನೀರು ಬಳಸುತ್ತಿದ್ದರು. ಈಗ ಹಾಳಾದ ಕಾರಣ ಯಾರೂ ಹತ್ತಿರಕ್ಕೆ ಬರುತ್ತಿಲ್ಲ’.
ಮುಕ್ತಿಧಾಮದ ಕೆರೆ
ಕೊಡವೂರು ಸೇತುವೆ ಬಳಿ ಇಂದ್ರಾಣಿ ತೀರ್ಥ ಹರಿದು ಹೋಗುತ್ತದೆ. ಇಲ್ಲಿ ಅಪರ ಕ್ರಿಯೆಗಳಿಗೆ ಸೂಕ್ತವಾಗುವಂತೆ ಮುಕ್ತಿ ಧಾಮ ಎಂಬುದನ್ನು ನಿರ್ಮಿಸಲಾಗಿದೆ. ಅದರ ಕೆರೆಯೂ ಈ ಇಂದ್ರಾಣಿ ತೀರ್ಥದ ತ್ಯಾಜ್ಯ ನೀರಿನಿಂದ ಹಾಳಾಗಿದೆ. ಸುತ್ತಲಿನ ಬಾವಿಯ ನೀರೂ ಹಾಳಾಗಿರುವುದರಿಂದ ಮುಕ್ತಿಧಾಮದ ಉದ್ದೇಶಕ್ಕೆ ಸಂಕಷ್ಟ ಎದುರಾಗಿದೆ.
ಇಲ್ಲಿ ನೀರಿನ ಸಮಸ್ಯೆ ಒಂದಾದರೆ ಇಂದ್ರಾಣಿ ತೀರ್ಥಕ್ಕೆ ಸೇರುವ ತ್ಯಾಜ್ಯ ನೀರಿನ ದುರ್ನಾತದಿಂದ ಸುತ್ತಲಿನ ವಾತಾವರಣವೂ ಹಾಳಾಗಿದೆ. ಆಡಳಿತದ ಅವಜ್ಞೆಯಿಂದ ಈ ಸ್ಥಳದ ಪವಿತ್ರಮಯ ವಾತಾವರಣಕ್ಕೆ ಧಕ್ಕೆಯಾಗಿದೆ.
ಶಂಕರನಾರಾಯಣ ತೀರ್ಥ ಕೆರೆ
ಶಂಕರನಾರಾಯಣ ತೀರ್ಥ ಕೆರೆಯೂ ಹಾಳಾಗಿದೆ. ಅದನ್ನೂ ತ್ಯಾಜ್ಯ ನೀರು ಬಿಟ್ಟಿಲ್ಲ. ಹಾಗೆಂದು ಸ್ಥಳೀಯ ನಾಗರಿಕರು ಸುಮ್ಮನೆ ಕುಳಿತಿಲ್ಲ. ವಿವಿಧ ಸಂಘಟನೆಗಳು ಸೇರಿ ಕಳೆದ ವರ್ಷ ಸುಮಾರು ಕೆಲವು ಕೆರೆಗಳ ಹೂಳೆತ್ತಿ ಸ್ವತ್ಛಗೊಳಿಸಿದ್ದಾರೆ. ಆದರೆ, ಮತ್ತೆ ಅದು ಪಾಚಿಕಟ್ಟಿಕೊಂಡು ಹಾಳಾಗಿದೆ.
ಹತ್ತಿರ ಹೋದರೆ ದುರ್ನಾತ ಬರುತ್ತದೆ. ಕೆಲವು ಕೆರೆಯ ನೀರಿನಲ್ಲಿ ಎಣ್ಣೆ ಅಂಶವೂ ತೆಳ್ಳಗೆ ಕಂಡು ಬರುತ್ತಿದೆ. ಕಾನಂಗಿ ಪರಿಸರದ ಬಹುತೇಕ ಕೆರೆಗಳ ಸ್ಥಿತಿ ಹೆಚ್ಚಾ ಕಡಿಮೆ ಇದೇ.
ಜಲಸಂಪನ್ಮೂಲವನ್ನು ಉಳಿಸಬೇಕಿದ್ದ ನಗರಸಭೆಯೇ ಇಂಥದೊಂದು ಅಪರಾಧ ಎಸಗುತ್ತಿದೆ ಎಂಬುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಅಭಿಪ್ರಾಯ. ನಗರ ಸಭೆಯು ತನ್ನ ವ್ಯವಸ್ಥೆಯನ್ನು ಸರಿಪಡಿಸಿ ದ್ದರೆ, ಹದಿನೈದು ವರ್ಷಗಳಲ್ಲಿ ಈ ಜಲ ಮೂಲಗಳನ್ನೆಲ್ಲ ಉಳಿಸಬಹುದಿತ್ತೆಂಬುದು ಸ್ಥಳೀಯರ ಅಭಿಪ್ರಾಯ.
ಬಾವಿ ನೀರು ಏಕೆ ಹದಗೆಡುತ್ತದೆ?
ಜಲಪರಿಣತರು ಹೇಳುವಂತೆ, ಒಳಚರಂಡಿ ಸಮಸ್ಯೆಯಿಂದ, ತ್ಯಾಜ್ಯ ನೀರು ಸೇರ್ಪಡೆಯಿಂದ ಹಾಳಾಗುತ್ತದೆ. ನೀರು ಬಣ್ಣಕ್ಕೆ ತಿರುಗಿ, ಎಣ್ಣೆ ಅಂಶ ಕೂಡತೊಡಗುತ್ತದೆ. ಅದು ಬಾವಿ ನೀರು ಹಾಳಾಗುತ್ತಿರು ವುದರ ಲಕ್ಷಣ. ಇಲ್ಲೆಲ್ಲಾ ಆಗುತ್ತಿರುವುದೂ ಅದೇ.
ಬಾವಿ ನೀರು ಪರಿಶೀಲಿಸಿಕೊಳ್ಳಿ
ಬಾವಿ ನೀರು ಹಾಳಾಗಲು ಮುಖ್ಯ ಕಾರಣಗಳೆಂದರೆ, ಒಳಚರಂಡಿ ಬಿರುಕು ಬಿಟ್ಟು ತ್ಯಾಜ್ಯ ನೀರಿನ ಸೋರಿಕೆ ಬಾವಿ ನೀರಿಗೆ ಸೇರುವುದು. ಮತ್ತೂಂದು ವೆಟ್ವೆಲ್ ಸೋರಿಕೆ ಇದ್ದಲ್ಲಿ ಮಣ್ಣು ಸಡಿಲವಾಗಿ ಅಥವಾ ಮಣ್ಣು ಸಡಿಲ ಹೊಂದಿರುವ ಪ್ರದೇಶಗಳಲ್ಲಿ ಕೊಳಚೆ ನೀರು ಹರಿದು ಬಾವಿ ನೀರು ಕಲುಷಿತವಾಗುತ್ತದೆ. ಸಮೀಪದಲ್ಲೇ ಪ್ರಾಣಿ ವಧಾ ಕೇಂದ್ರ, ರಾಸಾಯನಿಕ ಕಂಪೆನಿಗಳು ಇದ್ದರೆ ಬಾವಿ ನೀರಿಗೆ ಸಮಸ್ಯೆಯಾಗುತ್ತದೆ. ಆ ಸಂದರ್ಭದಲ್ಲಿ ಬಾವಿ ನೀರು ದುರ್ನಾತ ಬೀರುತ್ತದೆ. ಬಣ್ಣ ಬದಲಾವಣೆಯಾಗುತ್ತದೆ. ಎಣ್ಣೆ ಜಿಡ್ಡಿನ ಆಂಶವೂ ಕಂಡು ಬರುತ್ತದೆ. ಅಂಥ ಸಂದರ್ಭದಲ್ಲಿ ಅಗತ್ಯವಾಗಿ ಬಾವಿ ನೀರನ್ನು ಹತ್ತಿರದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಬೇಕು.
– ಪ್ರೊ. ಶ್ರೀನಿಕೇತನ್,
– ಪ್ರೊ. ಗಣಪತಿ ಮಯ್ಯ,
ಜಲ ಪರಿಣತರು, ಎನ್ಐಟಿಕೆ, ಸುರತ್ಕಲ್
ನಾವು ತ್ಯಾಜ್ಯ ನೀರು ಬಿಡಬೇಡಿ ಎಂದು ಈಗಾಗಲೇ ಪ್ರತಿಭಟನೆ
ಮಾಡಿದ್ದೇವೆ. ಜಿಲ್ಲಾಧಿಕಾರಿಗೂ ಮನವಿ ಮಾಡಿದ್ದೇವೆ. ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನ ಸಮಿತಿ ವತಿಯಿಂದಲೂ ಹೋರಾಟ ನಡೆಸಿದ್ದೇವೆ. ನಮ್ಮ ಕೆಲಸವನ್ನೇನೂ ನಾವು ನಿಲ್ಲಿಸಿಲ್ಲ. ಸ್ಥಳೀಯರು ಮತ್ತು ಸೇವಾ ಸಂಘಟನೆಗಳ ಸಹಾಯದಿಂದ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೂ ತ್ಯಾಜ್ಯ ನೀರು ಹರಿಯುವಿಕೆ ನಿಲ್ಲದಿದ್ದರೆ
ಇವೆಲ್ಲವೂ ಹೀಗೇ ಹಾಳಾಗುತ್ತಲೇ ಇರುತ್ತವೆ. ನಾವು ಕಾನೂನು
ರೀತಿಯ ಮಾರ್ಗವನ್ನು ಹುಡುಕಿಕೊಳ್ಳಬೇಕಿದೆ.
– ವಿಜಯ್ ಸೇರಿಗಾರ್, ಕೊಡವೂರು ವಾರ್ಡ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ