ಸೇವ್ ಉಕ ಅಭಿಯಾನ
•ಸರಕಾರಗಳ ನಿರ್ಲಕ್ಷ್ಯಕ್ಕೂ ಅಸಮಾಧಾನ •ಮಳೆ ನಿಂತರೂ ಆತಂಕ ನಿಲ್ಲೋಲ್ಲ
Team Udayavani, Aug 10, 2019, 10:52 AM IST
ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ಜಾಗೃತಿ ಲೋಗೋ
ಶಿರಸಿ: ಮಳೆ, ಮಹಾ ಮಳೆ ಇಡೀ ಉತ್ತರ ಕನ್ನಡವನ್ನೂ ದಿಕ್ಕೆಡಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿ, ಕೃಷಿ ಭೂಮಿ, ತೋಟಗಳೂ ನಿರೀಕ್ಷೆಗೂ ಮೀರಿ ಹಾನಿಯಾಗುತ್ತಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಅಣೆಕಟ್ಟು, ನದಿ, ಕೈಗಾ ಒಳಗೊಂಡು ಬೆಳಕು ಕೊಟ್ಟ ತ್ಯಾಗಮಯಿ ಉತ್ತರ ಕನ್ನಡ ಜಿಲ್ಲೆಗೆ ಕತ್ತಲು ಆವರಿಸಿದೆ. ಇಲ್ಲಿಯವರ ಬದುಕು ಅಕ್ಷರಶಃ ಒದ್ದೆಯಾಗಿದೆ.
ಮಳೆ ಗಾಳಿಗೂ ಆತಂಕ!: ಕಾಳಿ, ಅಘನಾಶಿನಿ, ವರದಾ, ಶರಾವತಿ, ಬೇಡ್ತಿ ನದಿಗಳು ಉಕ್ಕಿ ಹರಿಯುತ್ತಿವೆ. ದೇವಿಮನೆ, ಅರಬೈಲ್, ಕೋಗಾರ್, ಬಡಾಳ ಘಟ್ಟಗಳಲ್ಲಿ ಧರೆ ಕುಸಿಯುತ್ತಿವೆ.
ಯಲ್ಲಾಪುರ ಶಿರಸಿ ಸಂಪರ್ಕದ ಬೇಡ್ತಿ ನದಿ ಸೇತುವೆ ಕಷ್ಟಕಾಲದಲ್ಲಿದೆ. ಯಲ್ಲಾಪುರಕ್ಕೆ ಅರೆಬೈಲು, ಶಿರಸಿ ಸಂಪರ್ಕ ಕಡಿದು ಹೋಗಿದೆ. ಕತಗಾಲ ಸೇತುವೆ ಮೇಲೂ ನೀರು ಹರಿದರೆ ಕರಾವಳಿ ಸಂಪರ್ಕಕ್ಕೆ ಬೆಂಗಳೂರು ಹೊನ್ನಾವರ ಹೆದ್ದಾರಿ ಬಳಸಬೇಕಿದೆ. ರಸ್ತೆಗಳೆಂತೂ ಚಿಂದಿಯಾಗಿವೆ.
ಸಿದ್ದಾಪುರ ತಾಲೂಕಿನ ಹಲವು ಗ್ರಾಮಗಳು, ಶಿರಸಿ ತಾಲೂಕಿನ ವರದಾ, ಯಲ್ಲಾಪುರದ ಬೇಡ್ತಿ, ಕರಾವಳಿಯ ಗಂಗಾವಳಿ, ಅಘನಾಶಿನಿ, ಶರಾವತಿ, ಕಾಳಿ ಕೊಳ್ಳಗಳು ಪಕ್ಕದ ಊರುಗಳನ್ನೂ ಸುತ್ತುವರಿದಿದೆ. ರಸ್ತೆ ನದಿಯಾಗಿದೆ. ದೇವಾಲಯಗಳು, ಸೇತುವೆಗಳು, ಕೃಷಿ ಭೂಮಿಗಳು, ಮನೆಗಳೂ ಮುಳಗುತ್ತಿವೆ. ಕೊಡಸಳ್ಳಿಯ ಪುನರ್ವಸತಿ ಪಡೆದಿದ್ದ ವೈದ್ಯ ಹೆಗ್ಗಾರ ಭಾಗದಲ್ಲಿ ನೆರೆ ‘ಯಾತನೆ’ ಸೃಷ್ಟಿಸಿದೆ. ಜೀವ ಜಲವಾಗಿದ್ದ ನದಿಗಳು ಜೀವಕ್ಕೇ ಸಂಚಕಾರ ತಂದಿಟ್ಟಿವೆ.
ನಿರ್ಲಕ್ಷ್ಯ ಯಾಕೆ?: ಇಂಥ ಕಷ್ಟದಲ್ಲಿರುವ ಉತ್ತರ ಕನ್ನಡಕ್ಕೆ ರಾಜ್ಯ ಸರಕಾರ, ಕೇಂದ್ರ ಸರಕಾರ ನಿರ್ಲಕ್ಷ್ಯ ತಾಳಿವೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿದೆ. ಜಿಲ್ಲಾಡಳಿತ ಹರಸಾಹಸ ಮಾಡಿ ನೆರವಿಗೆ ಮುಂದಾದರೂ ಅವರ ಕೈ ಬಲಗೊಳಿಸುತ್ತಿಲ್ಲ ಎಂಬುದು ದೂರು.
ಇದೀಗ ಸೇವ್ ಉತ್ತರ ಕನ್ನಡ ಎಂಬ ಆಗ್ರಹಕ್ಕೆ ಸಾಮಾಜಿಕ ಜಾಲ ತಾಣದ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಭಿಯಾನಕ್ಕೆ ಚಿತ್ರ ನಟರು, ಬೇರೆ ಬೇರೆ ಉದ್ಯೋಗಸ್ಥರು ಬೆಂಬಲಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಪರ ಊರಿನಲ್ಲಿರುವವರು ಊರವರ ನೆರವಿಗೆ ವಾಪಸ್ಸಾಗುತ್ತಿದ್ದರೂ ಊರು ತಲುಪಲಾಗದ ಸ್ಥಿತಿಗೆ ಬಂದಿದ್ದಾರೆ. ನಮ್ಮವರು ಹೇಗಿದ್ದಾರೆ ಎಂದು ಕೇಳಲೂ ಮೊಬೈಲ್ ಸ್ವಿಚ್ಡ್ ಆಪ್ ಆಗಿದೆ.
ಎಲ್ಲ ಬೇಕು, ಆದರೆ..?: ಉತ್ತರ ಕನ್ನಡ ನದಿಗಳ ನೀರು ಬೆಂಗಳೂರಿಗೆ ಬೇಕು, ಇಲ್ಲಿ ಅಣೆಕಟ್ಟು ಕಟ್ಟಿ ಬೆಳಕು ಬೇಕು. ಕೈಗಾ ಅಣು ವಿದ್ಯುತ್ ಎಲ್ಲರಿಗೂ ಬೇಕು. ಆದರೆ, ಇಲ್ಲಿನ ಕಷ್ಟ ನಿವಾರಣೆಗೆ ಯಾರೂ ಬರುವುದಿಲ್ಲ, ಉತ್ತರ ಕರ್ನಾಟಕಕ್ಕೆ ಸಿಎಂ ಬರುತ್ತಾರೆ, ಅವರು ಉತ್ತರ ಕನ್ನಡಕ್ಕೇಕಿಲ್ಲ? ಎಂಬುದೂ ಇಲ್ಲಿನ ಪ್ರಶ್ನೆ.
ಈ ಮಧ್ಯೆ ಮಳೆ ನಿಂತರೂ ಇಲ್ಲಿನ ರೈತರ, ಜನರ ಆತಂಕ ನಿವಾರಣೆ ಆಗುವುದಿಲ್ಲ. ಅಡಕೆ, ಭತ್ತ ಬೇಸಾಯ ಕಷ್ಟದಲ್ಲಿದೆ. ಅಡಕೆಗೆ ಕೊಳೆ ರೋಗ ಈಗಲೇ ಶುರುವಾಗಿದೆ. ಹೆಸ್ಕಾಂನ ತಂತಿಗಳು, ಕಂಬಗಳನ್ನು ಮಳೆ ನಿಂತು ತಿಂಗಳಾದರೂ ಸಂಪರ್ಕ ಕೊಡಲು ಕಷ್ಟವಾಗಿದೆ. ಅನಾರೋಗ್ಯದ ಭೀತಿ ಕೂಡ ಶುರುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ