ಅನಂತಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ದೂರು
Team Udayavani, Mar 14, 2019, 12:30 AM IST
ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬ್ರಾಹ್ಮಣತ್ವ ಸಾಬೀತು ಪಡಿಸುವಂತೆ ಹಾಗೂ ಸೋನಿಯಾ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ದೇಶದಲ್ಲಿ ಈಗಾಗಲೇ ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿದೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ರಾಹುಲ್ ಗಾಂಧಿಯವರು ಮುಸ್ಲಿಂ ತಂದೆ ಹಾಗೂ ಕ್ರಿಶ್ಚಿಯನ್ ತಾಯಿಗೆ ಜನಿಸಿದ್ದು, ಅವರು ಬ್ರಾಹ್ಮಣರೆಂದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದರು. ಅಷ್ಟೇ ಅಲ್ಲದೇ, ರಾಜೀವ್ ಗಾಂಧಿ ಹತ್ಯೆಯಾದಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ಡಿಎನ್ಎ ಪರೀಕ್ಷೆಗೆ ಅವಕಾಶ ನೀಡದೇ, ಪ್ರಿಯಾಂಕಾ ಗಾಂಧಿಯ ಡಿಎನ್ಎ ಪರೀಕ್ಷೆ ಮಾಡುವಂತೆ ಹೇಳಿದ್ದರೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅವರ ಹೇಳಿಕೆ ವಿರುದಟಛಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೊಡ್ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ವಿಜಯಪುರ ಜಿಲ್ಲೆಯಮು ದ್ದೇಬಿಹಾಳದಲ್ಲಿ ಅಪ್ರಾಪ್ತ ವಯಸ್ಸಿನವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಕೆಲವು ವ್ಯಕ್ತಿಗಳ ಹೆಸರು ಹಲವು ಬಾರಿ ಸೇರ್ಪಡೆ ಮಾಡಲಾಗಿದೆ. ಈ ರೀತಿಯ ಸುಮಾರು 20 ಸಾವಿರ ಹೆಸರುಗಳನ್ನು ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಲಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎ.ಎನ್. ನಟರಾಜ್ಗೌಡ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.