ಅಶ್ವಥ ಸ್ಥರ್ಧೆಯಿಂದ ಡಿಕೆಸು ಗೆಲುವು ಸುಲಭ
Team Udayavani, Apr 12, 2019, 3:48 PM IST
ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈ ಬಾರಿ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಸ್ಪರ್ಧೆ ನಡೆಯಲಿದೆ. ಡಿ.ಕೆ.ಸುರೇಶ್ಗೆ ಪ್ರತಿಸ್ಪರ್ಧಿಯಾಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದರೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿತ್ತು.
ಪ್ರಸ್ತುತ ಬಿಜೆಪಿಯಿಂದ ಅಶ್ವತ್ಥನಾರಾಯಣಸ್ವರ್ಧಿಸಿರುವುದರಿಂದ ಡಿ.ಕೆ. ಸುರೇಶ್ ಗೆಲುವು ಸುಲಭವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕೃತ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಬಿರುಬಿಸಿನ ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಕ್ಷೇತ್ರದ ಶಾಸಕ ಎ.ಮಂಜು ಮತ್ತು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸಾತ್ ನೀಡಿದ್ದಾರೆ. ಅಲ್ಲದೆ, ಬಿಜೆಪಿಯಲ್ಲಿ ಡಿ.ಕೆ.ಸುರೇಶ್ ವಿರುದ್ಧ ಪ್ರತಿತಂತ್ರ
ರೂಪಿಸದೇ, ಸದ್ದಿಲ್ಲದೆ ಮನೆ ಮನೆ ಪ್ರಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅಭ್ಯರ್ಥಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ
ಅಶ್ವತ್ಥನಾರಾಯಣ ಪರವಾಗಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಶಿವಮಾದು, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಆರ್.ನಾಗರಾಜು ಮತ್ತು ಚಿತ್ರನಟಿ ಶುೃತಿ, ಬಿಜೆಪಿ ಪ್ರಮುಖರಾದ
ಕಟ್ಟಾಸುಬ್ರಹ್ಮಣ್ಯ ನಾಯ್ಡು, ಎಂ.ರುದ್ರೇಶ್ ಮತಯಾಚನೆಯಲ್ಲಿ
ತೊಡಗಿದ್ದಾರೆ.
ಮಾಗಡಿ ಕ್ಷೇತ್ರದಲ್ಲಿ ಒಕ್ಕಲಿಗರೆ ಹೆಚ್ಚು: ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 1,12,431 ಪುರುಷ
ಮತದಾರರು, 1,10,330 ಮಹಿಳಾ ಮತದಾರರಿದ್ದಾರೆ. ಒಟ್ಟಾರೆ 2,22,853 ಮತದಾರರು ಕ್ಷೇತ್ರದಲ್ಲಿದ್ದಾರೆ. ಒಕ್ಕಲಿಗ ಜನಾಂಗ 76 ಸಾವಿರ, ಎಸ್ಸಿ ಎಸ್ಟಿ 55 ಸಾವಿರ, ಲಿಂಗಾಯಿತ 48 ಸಾವಿರ, ಕುರುಬ ಜನಾಂಗ 10 ಸಾವಿರ, ಇತರೆ ಸಮುದಾಯದ 40 ಸಾವಿರ ಮಂದಿ ಮತದಾರರಿದ್ದಾರೆ. ಮಾಗಡಿ ವಿಧಾನ
ಸಭಾ ಕ್ಷೇತ್ರದಲ್ಲಿ ಬಹುತೇಕ ಒಕ್ಕಲಿಗರ ಪ್ರಾಬಲ್ಯವಿರುವುದರಿಂದ ಪ್ರತಿ ಬಾರಿಯೂ ಒಕ್ಕಲಿಗರೇ ಸಂಸದರಾಗಿರುವುದನ್ನು ಕಾಣಬಹುದಾಗಿದೆ.
ಗ್ರಾಮೀಣ, ನಗರ ಹೊಂದಿರುವ ಕ್ಷೇತ್ರ: ಗ್ರಾಮೀಣ ಮತ್ತು ನಗರದ ಸೊಗಡು ಹೊಂದಿರುವ ವಿಶೇಷವಾದ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎರಡನ್ನು ಸಮಾನಾಗಿ ನೋಡಲಾಗುತ್ತಿಲ್ಲ ಎಂಬ ಕೊರಗು ಜನರಲ್ಲಿದೆ. ನಂಜುಂಡಪ್ಪ ವರದಿ ಪ್ರಕಾರ ಮಾಗಡಿ ವಿಧಾನ ಸಭಾ ಕ್ಷೇತ್ರ ಹಿಂದುಳಿದ ಪ್ರದೇಶವಾಗಿದ್ದು, ಅಭಿವೃದ್ಧಿ ಕಾಣಬೇಕಾಗಿದೆ.
ನೀರಾವರಿ ಯೋಜನೆ ಈಡೇರಿಸಿಲ್ಲ: ಕಳೆದ 30 ವರ್ಷಗಳಿಂದ ಎತ್ತಿನ ಹೊಳೆ, ಹೇಮಾವತಿ ನೀರಾವರಿ ಯೋಜನೆ ತರುವುದಾಗಿ ಪ್ರತಿ ಚುನಾವಣೆಯಲ್ಲಿಯೂ ಅಭ್ಯರ್ಥಿಗಳು ನೀರಾವರಿ ಯೋಜನೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಗೆಲುವು ಸಾಧಿಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಮಾಗಡಿ ವಿಧಾನ ಸಭಾ
ಕ್ಷೇತ್ರದಲ್ಲಿ ನೀರು ಹರಿದಿಲ್ಲ. ಹರಿಯುವ ಲಕ್ಷಣವೇ ಕಾಣುತ್ತಿಲ್ಲ. ಕಳೆದ ಚುನಾವಣೆಗೂ ಮುನ್ನ ತಂದು ಹಾಕಿದ ಪೈಪ್ಗ್ಳು ಕಾಮಗಾರಿ ಸ್ಥಗಿತದಿಂದ ಮೂಲೆ ಸೇರಿವೆ. ಈ ಬಾರಿಯೂ ನೀರಾವರಿ ಯೋಜನೆಯನ್ನೇ ಮುಂದಿಟ್ಟುಕೊಂಡು ಮತಯಾಚಿಸುವ ಲಕ್ಷಣಗಳು ಕಂಡು ಬರುತ್ತಿದೆ.
ಮೈತ್ರಿ ಕಾರ್ಯಕರ್ತರಲ್ಲಿ ಅಸಮಾಧಾನ: ಒಂದೆಡೆ ಬಿಜೆಪಿ ಪಕ್ಷಕ್ಕಿಂತ ಮೋದಿಗಾಗಿ, ದೇಶಕ್ಕಾಗಿ ಎಂಬ ಮಾತು ಮತದಾರರಲ್ಲಿ ಕೇಳಿ ಬರುತ್ತಿದ್ದರೆ, ಮತ್ತೂಂದಡೆ ಸಂಸದ ಡಿ.ಕೆ.ಸುರೇಶ್ ತಮ್ಮ ಕಾರ್ಯವನ್ನು ತಳಮಟ್ಟದಿಂದ ರೂಪಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೂ ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಅಸಮಾಧಾನದ ನಡುವೆಯೂ ಸಮಾಧಾನಪಡಿಸಲು ಸಭೆಗಳು ನಡೆಯುತ್ತಿವೆ. ಮಾಗಡಿ ವಿಧಾನ ಸಭಾ ಕ್ಷೇತ್ರ ಕಳೆದ 30 ವರ್ಷಗಳಿಂದ ಜೆಡಿಎಸ್ ಭದ್ರಕೋಟಿಯಾಗಿದೆ. ಆದ್ದರಿಂದ ಉಭಯ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಹೆಚ್ಚಿನ ಮತಗಳಿಸುವ ವಿಶ್ವಾಸ ಹೊಂದಿದ್ದಾರೆ. ಮತದಾರರನ್ನು ನೋಡದೇ 7 ಬಾರಿ ಎ .ವಿ.ಚಂದ್ರಶೇಖರಮೂರ್ತಿ ಗೆಲುವು ಸಾಧಿಸಿದ್ದಾರೆ ಎಂದಾದರೆ, ಜನಮನ
ಗೆದ್ದಿರುವ ಡಿ.ಕೆ.ಸುರೇಶ್ ಈಗಾಗಲೇ ಎರಡು ಬಾರಿ ಸಂಸದರಾಗಿರುವುದರಿಂದ ಮೂರನೇ ಬಾರಿಯೂ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ಕೇಳಿ ಬರುತ್ತಿದೆ.
ಆದರ್ಶ ಗ್ರಾಮ ಯೋಜನೆ ಅನುಷ್ಠಾನ: ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅನುಷ್ಠಾನಕ್ಕೆ ಮಾರ್ಗಸೂಚಿ ನೀಡಿದ್ದರು. ಆದರೆ, ಕೇಂದ್ರ ಮತ್ತು
ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಲಿಲ್ಲ.ಸಂಸದರ ನಿಧಿಯಿಂದ 2.50 ಕೋಟಿ ರೂ. ಹಣ ಖರ್ಚು ಮಾಡಿದ್ದೇನೆ. ಗುಡಿಸಲು ಮುಕ್ತ ಕ್ಷೇತ್ರಕ್ಕಾಗಿ 250 ಮನೆ ನಿರ್ಮಾಣ ಮಾಡಿದ್ದೇವೆ. ವಿದ್ಯುತ್ ಸೌಲಭ್ಯ, ಎಲ್ಲೆಡೆ ಶೌಚಾಲಯ ನಿರ್ಮಿಸಿದ್ದೇವೆ. ಕುಡಿಯುವ ನೀರು, ರಸ್ತೆ ಕಾಮಗಾರಿ ಕೈಗೊಂಡಿದ್ದೇವೆ. ಆರ್ಥಿಕವೃದ್ಧಿಗೆ ಏನು ಮಾಡಬೇಕೋ ಅವೆಲ್ಲವನ್ನು ಮಾಡಿದ್ದೇನೆ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.
10 ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು: ಹಿಂದಿನ ಕನಕಪುರ ಲೋಕಸಭಾ ವಿಂಗಡಣೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿಎಂ.ವಿ. ಚಂದ್ರಶೇಖರ್ಮೂರ್ತಿ 7 ಬಾರಿ, ತೇಜಸ್ವಿನಿ ರಮೇಶ್, ಡಿ.ಕೆ.ಸುರೇಶ್ ಸೇರಿದಂತೆ ಒಟ್ಟು 10 ಬಾರಿಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಂದು ಬಾರಿ ಜೆಡಿಎಸ್ನಿಂದ ಎಚ್.ಡಿ.ಕುಮಾರ ಸ್ವಾಮಿ
ಹಾಗೂ ಬಿಜೆಪಿಯಿಂದ ಎಂ.ಶ್ರೀನಿವಾಸ್ ಸಂಸದರಾಗಿ ಆಯ್ಕೆಯಾಗಿದ್ದರು ಎಂಬ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.