ದೇಶದ ರಕ್ಷಣೆ, ಅಭಿವೃದ್ಧಿ ಮುಖ್ಯ : ಶೋಭಾ ಕರಂದ್ಲಾಜೆ
Team Udayavani, Mar 26, 2019, 6:30 AM IST
- ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದೀರಿ. ಅಂದಿಗೂ – ಇಂದಿಗೂ ಏನು ವ್ಯತ್ಯಾಸ?
ಅಂದು ನಾನು ಉಡುಪಿ-ಚಿಕ್ಕಮಗಳೂರಿಗೆ ಹೊಸಬಳಾಗಿದ್ದೆ. ಸಂಸದೆಯಾದ ಬಳಿಕ ಕೇಂದ್ರ ಸರಕಾರದ ಅನೇಕ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಮತ್ತು ಕ್ಷೇತ್ರದ ಸಾಧನೆ ಗೆಲುವಿಗೆ ಪೂರಕವಾಗಲಿದೆ. - ಟಿಕೆಟ್ ನೀಡುವ ಕುರಿತು ಅತೃಪ್ತಿ ಇತ್ತಲ್ಲ?
ಎಲ್ಲಿ ಗೆಲ್ಲುವ ಸಾಧ್ಯತೆ ಇರುತ್ತದೋ ಅಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವುದು ಸಾಮಾನ್ಯ. ಈಗ ಟಿಕೆಟ್ ಹಂಚಿಕೆಯಾದ ಬಳಿಕ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ, ಯಾವುದೇ ಅತೃಪ್ತಿ ಇಲ್ಲ. - ಮೈತ್ರಿ ಪರಿಣಾಮ ಬೀರಲಿದೆಯೆ?
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ರಾಜ್ಯದಲ್ಲಿರುವುದರಿಂದ ರಾಜ್ಯಕ್ಕೆ ಲಾಭ ಏನಾಗಿದೆ? ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಏನಾದರೂ ಅಭಿವೃದ್ಧಿ ಕೆಲಸ ಮಾಡಿದ್ದಾರಾ? ರಾಜ್ಯದಲ್ಲಿ ಮೈತ್ರಿ ವಿಫಲವಾಗಿರುವುದು ಸಾಬೀತಾಗಿದೆ. ಎಲ್ಲ ಸಂದರ್ಭಗಳಲ್ಲೂ ಗೊಂದಲ, ಕಚ್ಚಾಟ ಕಂಡುಬಂದಿದೆ. ಲೋಕ ಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲೂ ಅದು ತಪ್ಪಿಲ್ಲ. ಬಿಜೆಪಿಗೆ ಇದು ಲಾಭ ತರಲಿದೆ. - ಯಾವ ಆಧಾರದಲ್ಲಿ ಮತ ಯಾಚಿಸುತ್ತೀರಿ?
ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜಾರಿಗೊಂಡ ಯೋಜನೆಗಳು, ಬೇಡಿಕೆಗಳನ್ನು ಪೂರ್ಣಗೊಳಿಸಬೇಕಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವ ಮೂಲಕ ದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಬೇಕಿದ್ದು ಆ ಬಗ್ಗೆ ಜನರಲ್ಲಿ ಮನವರಿಕೆ ಮಾಡುತ್ತೇವೆ.