ಕಲಬುರಗಿಯಲ್ಲಿ ಈಗ “ಆಪರೇಷನ್ ಹಸ್ತ
Team Udayavani, Mar 17, 2019, 1:31 AM IST
ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಣಿಯಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ಈಗಾಗಲೇ ಕಾಂಗ್ರೆಸ್ ಪಾಳೆಯದಲ್ಲಿದ್ದ ಶಾಸಕ ಡಾ.ಉಮೇಶ ಜಾಧವ ಅವರಿಂದ ರಾಜೀನಾಮೆ ಕೊಡಿಸಿ, ಖರ್ಗೆ ವಿರುದಟಛಿ ತೊಡೆ ತಟ್ಟಲು ಸಜ್ಜುಗೊಳಿಸಿದೆ. ಇದರಿಂದ ವಿಚಲಿತವಾಗಿರುವ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದ್ದು, ಬಿಜೆಪಿ ಬುಟ್ಟಿಗೆ ಕೈ ಹಾಕಿ ತಿರುಗೇಟು ಕೊಡಲು ಶುರು ಮಾಡಿದೆ.
ಬಂಜಾರಾ ಸಮುದಾಯದ ಡಾ| ಉಮೇಶ ಜಾಧವ್ಗೆ ಪೆಟ್ಟು ನೀಡುವ ಉದ್ದೇಶದಿಂದಲೇ ಬಂಜಾರಾ ಸಮುದಾಯದ ಮುಖಂಡರೇ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್ ಚವ್ಹಾಣ, ಬಿಜೆಪಿಯ ಬೇಟಿ ಪಡಾವೋ-ಬೇಟಿ ಬಚಾವೋ ರಾಜ್ಯ ಸಂಚಾಲಕ ಸುಭಾಷ ರಾಠೊಡ ಸೇರಿ ಇತರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಈಗಾಗಲೇ ಮಾತುಕತೆ ನಡೆಸಿದೆಯಲ್ಲದೇ ಸೋಮವಾರ ನಗರಕ್ಕೆ ಆಗಮಿಸುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ವೇದಿಕೆ ಸಿದ್ಧಪಡಿಸಲಾಗಿದೆ. ಬಂಜಾರಾ ಸಮುದಾಯದ ಅಭಿವೃದಿಟಛಿ ಹಾಗೂ ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದಕ್ಕೆ ಬದ್ಧ ಎಂಬುದನ್ನು ಸಾರಲು ಕಾಂಗ್ರೆಸ್ ಮುಂದಾಗಿದೆಯಲ್ಲದೇ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯಲು ತಂತ್ರಗಾರಿಕೆ ರೂಪಿಸಿದೆ.
ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ, ಬಿಜೆಪಿಯಿಂದ ರಾಜ್ಯಸಭಾ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಹಿರಿಯ ನಾಯಕ ಕೆ.ಬಿ.ಶಾಣಪ್ಪ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಮುಂದಿನ ನಡೆಯನ್ನು ಚರ್ಚಿಸಿ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಆದರೆ, ರಾಜಕೀಯದಿಂದ ದೂರ ಉಳಿಯುವುದಿಲ್ಲ. ರಾಜಕೀಯ ಸೇವೆ ಮುಂದುವರಿಯುತ್ತದೆ ಎಂದು ಹೇಳಿದ್ದನ್ನು ನೋಡಿದರೆ ಇವರೂ ಕಾಂಗ್ರೆಸ್ಗೆ ಸೇರ್ಪಡೆಯಾಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಇದಕ್ಕೆ ಸೋಮವಾರ ಕಲಬುರಗಿಯಲ್ಲಿ ನಡೆಯುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರ್ಯಾಲಿಯಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.
ಶನಿವಾರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಈ ಹಿಂದೆ ಮೀಸಲು ಕ್ಷೇತ್ರವಾಗಿದ್ದ ಗುರುಮಿಠಕಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಮರಾವ್ ಪ್ಯಾಟಿ ಹಾಗೂ ಮೂವರು ಪಾಲಿಕೆ ಸದಸ್ಯರು ಬಿಜೆಪಿ ತ್ಯಜಿಸಿ, ಕಾಂಗ್ರೆಸ್ಗೆ ಸೇರ್ಪಡೆಯಾದರು. ಅದೇ ರೀತಿ, ಆಯಾ ತಾಲೂಕುಗಳಲ್ಲಿ ಮಾಜಿ ಜಿಪಂ ಸೇರಿದಂತೆ ಇತರ ವಲಯಗಳ ಮುಖಂಡರನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿದೆ. ಅಲ್ಲದೇ ಚಿತ್ತಾಪುರ ತಾಲೂಕಿನಲ್ಲಿ ಈ ಕುರಿತು ಪ್ರಮುಖ ಮುಖಂಡರೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಜಿಪಂ ಮಾಜಿ ಸದಸ್ಯರೊಬ್ಬರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ದಲಿತ ಪಂಗಡದ ಜತೆಗೆ ಲಿಂಗಾಯತ ಸಮುದಾಯದ ಮುಖಂಡರನ್ನು ಪಕ್ಷಕ್ಕೆ ಕರೆದುಕೊಂಡು ಬಂದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದಾಗಿ ಕಾಂಗ್ರೆಸ್ ಇರಾದೆ ಹೊಂದಿದೆ. ಈ ನಿಟ್ಟಿನಲ್ಲೂ ಕಾರ್ಯೋನ್ಮುಖವಾಗಿದ್ದು, ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ.
ಬಿಜೆಪಿ ಖಡಕ್ ಎಚ್ಚರಿಕೆ
ಒಳಗೊಳಗೆ ಬಿಜೆಪಿ ಶಾಸಕರು ಹಾಗೂ ಮುಖಂಡರು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುತ್ತಾರೆಂಬ ಆರೋಪ ಹಾಗೂ ಗುಮಾನಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಪಡೆಯುವ ಮತಗಳ ಆಧಾರದ ಮೇಲೆಯೇ ವಿಧಾನಸಭಾ ಟಿಕೆಟ್ ನೀಡುವುದಾಗಿ ಹೇಳಿದ್ದನ್ನು ನೋಡಿದರೆ ಬಿಜೆಪಿಯೂ ಸರ್ವ ನಿಟ್ಟಿನಿಂದ ತಂತ್ರಗಾರಿಕೆಗೆ ಮುಂದಾಗಿದೆ ಎಂದು ಕಾಣಿಸುತ್ತದೆ.
ಚುನಾವಣೆ ಬಂದಾಗ ಮುಖಂಡರು ಹಾಗೂ ಕಾರ್ಯಕರ್ತರು ಒಂದು ಪಕ್ಷ ಬಿಟ್ಟು ಮತ್ತೂಂದು ಪಕ್ಷಕ್ಕೆ ಸೇರ್ಪಡೆಯಾಗುವುದು ಸಾಮಾನ್ಯ. ಚಿಂಚೋಳಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ.
● ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ, ಕಲಬುರಗಿ.
ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಸ್ವತಃ ಅವರೇ ಬರುತ್ತಿದ್ದಾರೆ. ಮುಖ್ಯವಾಗಿ ಡಾ| ಉಮೇಶ ಜಾಧವ್ಗೆ ತಕ್ಕಪಾಠ ಕಲಿಸಬೇಕೆಂದು ಕೆಲ ಬಿಜೆಪಿ ಮುಖಂಡರೇ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ. ಯಾರನ್ನೂ ಪಕ್ಷಕ್ಕೆ ತರುವ ನಿಟ್ಟಿನಲ್ಲಿ ಯತ್ನ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಹಲವರು ಬಿಜೆಪಿ ತ್ಯಜಿಸಿ, ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.
● ಜಗದೇವ ಗುತ್ತೇದಾರ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್, ಕಲಬುರಗಿ.