ರಾಹುಲ್ ಗಾಂಧಿ ನಾಮಪತ್ರಕ್ಕೆ ಮಾನ್ಯತೆ
Team Udayavani, Apr 23, 2019, 5:45 AM IST
ಪೌರತ್ವ ಹಾಗೂ ಶೈಕ್ಷಣಿಕ ವಿವರಗಳಿಗೆ ಸಂಬಂಧಿಸಿ ಎದ್ದ ವಿವಾದದಿಂದ ಸದ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರಾಳವಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿ ವ್ಯಕ್ತಪಡಿಸಿದ ಆಕ್ಷೇಪವನ್ನು ಅಮೇಠಿ ಚನಾವಣಾ ಅಧಿಕಾರಿ ತಳ್ಳಿಹಾಕಿದ್ದು, ರಾಹುಲ್ ನಾಮ ಪತ್ರವನ್ನು ಮಾನ್ಯ ಮಾಡಿದ್ದಾರೆ. ರಾಹುಲ್ ಪರ ವಕೀಲ ಕೆ.ಸಿ.ಕೌಶಿಕ್ ಈ ಸಂಬಂಧ ಚುನಾವಣಾ ಅಧಿಕಾರಿಯನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ನಾಮಪತ್ರವನ್ನು ಚುನಾವಣಾ ಅಧಿಕಾರಿ ರಾಮ ಮನೋಹರ ಮಿಶ್ರಾ ಮಾನ್ಯಮಾಡಿದ್ದಾರೆ.
ಅಫಿಡವಿಟ್ನಲ್ಲಿ ಸಲ್ಲಿಸಿದ ಪೌರತ್ವ ವಿವರ ಮತ್ತು ಶೈಕ್ಷಣಿಕ ವಿವರದಲ್ಲಿ ವ್ಯತ್ಯಾಸವಿದೆ. ಹೀಗಾಗಿ ನಾಮಪತ್ರ ಅಮಾನ್ಯಗೊಳಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿ ಹಾಗೂ ಇತರ ಮೂವರು ದೂರು ಸಲ್ಲಿಸಿದ್ದರು. ನಾಮಪತ್ರ ತಿರಸ್ಕರಿಸುವ ಅಗತ್ಯವಿಲ್ಲದ್ದರಿಂದ, ಎಲ್ಲ ಅಕ್ಷೇಪಗಳನ್ನೂ ತಳ್ಳಿಹಾಕಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.
ಏನಿದು ವಿವಾದ?: ಇಂಗ್ಲೆಂಡ್ನಲ್ಲಿ ನೋಂದಾಯಿತ ಕಂಪನಿಯ ವಿವರಗಳನ್ನು ಸ್ವತಂತ್ರ ಅಭ್ಯರ್ಥಿ ಧ್ರುವ ಲಾಲ್ ಆಯೋಗಕ್ಕೆ ಸಲ್ಲಿಸಿದ್ದರು. ಇದರಲ್ಲಿ ರಾಹುಲ್ ಬ್ರಿಟನ್ ಪ್ರಜೆ ಎಂಬುದಾಗಿ ನಮೂದಿಸಲಾಗಿತ್ತು ಅಷ್ಟೇ ಅಲ್ಲ, ಇಂಗ್ಲೆಂಡ್ನಲ್ಲಿರುವ ಕಂಪನಿಯ ಆದಾಯದ ವಿವರಗಳನ್ನೂ ರಾಹುಲ್ ಸಲ್ಲಿಸಿಲ್ಲ ಎಂದು ಆಕ್ಷೇಪಿಸಲಾಗಿತ್ತು. ಇನ್ನೊಂದೆಡೆ 1995 ರಲ್ಲಿ ಎಂಫಿಲ್ ಪೂರೈಸಿದ್ದೇನೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಅವರು ಎಂಫಿಲ್ ಪೂರೈಸಿದ ವರ್ಷದ ಬಗ್ಗೆಯೂ ಗೊಂದಲವಿತ್ತು. ಕೆಲವು ದಾಖಲೆಗಳಲ್ಲಿ 1995 ಎಂದಿದ್ದರೆ, ಇನ್ನು ಕೆಲವೆಡೆ 2005 ಎಂದು ನಮೂದಿಸಲಾಗಿತ್ತು.
ಇಂದು ಮೂರನೇ ಹಂತದ ಮತದಾನ
ಹಾಲಿ ಲೋಕಸಭೆಯ ವಿವಿಧ ಹಂತಗಳ ಮತದಾನದ ಪೈಕಿ ಅತಿ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಸುತ್ತು ಎಂದೇ ಪರಿಗಣಿಸಲ್ಪಟ್ಟಿರುವ 3ನೇ ಸುತ್ತಿನ ಮತದಾನ ಮಂಗಳವಾರ ನಡೆಯಲಿದೆ. ಕರ್ನಾಟಕ ಸೇರಿದಂತೆ 14 ರಾಜ್ಯಗಳ 116 ಕ್ಷೇತ್ರಗಳಲ್ಲಿ ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರದ ಹಲವಾರು ಸಚಿವರು ಸೇರಿದಂತೆ ಹಲವಾರು ಘಟಾನುಘಟಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ 14, ಗುಜರಾತ್ 26, ಕೇರಳ 20, ಅಸ್ಸಾಂ 4, ಬಿಹಾರ 5, ಛತ್ತೀಸ್ಗಡ 7, ಒಡಿಶಾ 6, ಉತ್ತರ ಪ್ರದೇಶ 10 ಸೇರಿ ದಂತೆ 116 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಪ್ರಜ್ಞಾಗೆ ಟಿಕೆಟ್ ನೀಡಿದ್ದು ಸರಿ: ಶಾ ಸಮರ್ಥನೆ
ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಭೋಪಾಲ್ನಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಿರುವುದನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. ಕೋಲ್ಕತಾದಲ್ಲಿ ಸೋಮವಾರ ಸುದ್ದಿ ಗೋಷ್ಠಿ ನಡೆಸಿದ ಅವರು, “”ಅದು ಖಂಡಿತ ಉತ್ತಮ ನಿರ್ಧಾರ. ಸಾಧ್ವಿ ವಿರುದ್ಧದ ಆರೋಪಗಳೆಲ್ಲವೂ ಆಧಾರ ರಹಿತ. ಅವರ ವಿರುದ್ಧದ ಹಾಗೂ ಸ್ವಾಮಿ ಅಸೀಮಾ ನಂದರ ವಿರುದ್ಧದ ಆರೋಪಗಳಿನ್ನೂ ಸಾಬೀತಾ ಗಿಲ್ಲ. ಹಾಗಾಗಿ, ಅವರಿಗೆ ಟಿಕೆಟ್ ನೀಡುವುದರಲ್ಲಿ ತಪ್ಪೇನಿಲ್ಲ” ಎಂದಿದ್ದಾರೆ. ಜತೆಗೆ, “”ಮಾಲೇ ಗಾಂವ್ ಪ್ರಕರಣದ ನಿಜವಾದ ಅಪರಾಧಿಗಳು ಕಾನೂನಿನಿಂದ ನುಣುಚಿ ಕೊಂ ಡಿದ್ದಾರೆ. ಪತ್ರ ಕರ್ತರು, ಸಾರ್ವಜನಿಕರು ಆ ಬಗ್ಗೆ ಪ್ರಶ್ನಿಸಬೇಕು. ಸಾಧ್ವಿ ಬಗ್ಗೆ ಅಲ್ಲ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಭೋಪಾಲ್ನಲ್ಲಿ ಸೋಮವಾರ ಸಾಧ್ವಿ ಪ್ರಜ್ಞಾ ನಾಮಪತ್ರ ಸಲ್ಲಿಸಿದ್ದಾರೆ.
ಸಾಧ್ವಿ ವಿರುದ್ಧ ಎಫ್ಐಆರ್: ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಹೇಳಿರುವ ಸಾಧ್ವಿ ಪ್ರಜ್ಞಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಅಧಿಕಾರಿ ಸೂಚಿಸಿದ್ದಾರೆ.
ಆಪ್-ಕೈ ಮಾತುಕತೆ ವಿಫಲ
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಆಪ್ ಮತ್ತು ಕಾಂಗ್ರೆಸ್ ನಡುವೆ ನಡೆದ ಮಾತು ಕತೆ ಮುರಿದುಬಿದ್ದಿದೆ. ಇದಾದ ಬೆನ್ನಲ್ಲೇ ಕಾಂಗ್ರೆಸ್ ದಿಲ್ಲಿಯ 6 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈಶಾನ್ಯ ದಿಲ್ಲಿಯಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ಗೆ ಟಿಕೆಟ್ ನೀಡಲಾಗಿದೆ. ಇನ್ನೊಂದೆಡೆ, ಆಮ್ ಆದ್ಮಿ ಪಕ್ಷದ ಎಲ್ಲ 7 ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ.
ಗೌತಮ್ ಗಂಭೀರ್ಗೆ ಟಿಕೆಟ್
ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಕ್ರಿಕೆಟಿಗ್ ಗೌತಮ್ ಗಂಭೀರ್ಗೆ ಸೋಮವಾರ ಪೂರ್ವ ದಿಲ್ಲಿಯ ಟಿಕೆಟ್ ನೀಡಲಾಗಿದೆ. ಮೀನಾಕ್ಷಿ ಲೇಖೀ ಹೊಸದಿಲ್ಲಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಪ್ರಿಯಾಂಕಾ, ಸ್ಮತಿ ಇರಾನಿ ವಾಕ್ಸಮರ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಕೇಂದ್ರ ಸಚಿವೆ ಹಾಗೂ ಅಮೇಠಿಯ ಬಿಜೆಪಿ ಅಭ್ಯರ್ಥಿ ವಿರುದ್ಧ ಕಿಡಿಕಾರಿದ್ದಾರೆ. ಅಮೇಠಿ ಮತದಾರರಿಗೆ ಪಾದರಕ್ಷೆಗಳನ್ನು ವಿತರಿಸಿರುವ ಇರಾನಿ ವಿರುದ್ಧ, ಸೋಮವಾರ ಅಮೇಠಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಹರಿಹಾಯ್ದ ಅವರು, “”ಪಾದರಕ್ಷೆಗಳನ್ನು ವಿತರಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯವರಿಗೆ ಇರಾನಿ ಅಪಮಾನ ಮಾಡಲೆತ್ನಿಸಿದ್ದಾರೆ. ಆದರೆ, ಇಂಥ ಉಡುಗೊರೆ ಪಡೆಯಲು ಅಮೇಠಿ ಮತದಾರರು ಭಿಕ್ಷುಕರೇನಲ್ಲ. ಅವರಿಗೆ ಎಲ್ಲವೂ ಅರ್ಥ ವಾಗುತ್ತದೆ. ರಾಯ್ಬರೇಲಿಯಲ್ಲಿ ಫುಡ್ ಪಾರ್ಕ್ ಕಟ್ಟಲು ಯಾರು ಮುಂದಾ ಗಿದ್ದರು, ಅದಿನ್ನೂ ಏಕೆ ಸಾಕಾರಗೊಂಡಿಲ್ಲ ಎಂಬುದು ಇಲ್ಲಿನ ಜನರಿಗೆ ಗೊತ್ತು” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇರಾನಿ, “”ನಾನು ಮೂಲತಃ ನಟಿ. ನಾನೂ ಪ್ರಿಯಾಂಕಾ ಅವರಿಗಿಂತಲೂ ಉತ್ತಮ ವಾಗಿ ನಟಿಸಬಲ್ಲೆ ಎಂಬುದನ್ನು ಪ್ರಿಯಾಂಕಾ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದಿದ್ದಾರೆ.