ಅಭೀಷ್ಟದಾಯಕ ಅಷ್ಟವಿನಾಯಕ


Team Udayavani, Sep 2, 2019, 5:00 AM IST

prasada-spl-anegudde-kadabu-seve

ಇಂದು ಮಂಗಳದಾಯಕನನ್ನುನಮಿಸುವ ಹಬ್ಬ. ಬದುಕಿನಲ್ಲಿ ಏಳ್ಗೆಯನ್ನು ಕೊಡು ಎಂದು ಕೇಳಿಕೊಳ್ಳುತ್ತಲೇ ಅಹಂಕಾರದ ತುದಿಗೆ ಕೊಂಡೊಯ್ಯಬೇಡ ಎಂದು ಅಷ್ಟ ವಿನಾಯಕನನ್ನು ವಿನಂತಿಸೋಣ ಬನ್ನಿ.

ನೈವೇದ್ಯ ವೈವಿಧ್ಯ
ಗಣೇಶನನ್ನು ನಾವು ಕೆಲವೊಮ್ಮೆ ಹಾಸ್ಯದ ನೆಲೆಯಲ್ಲೂ ಬಳಸುತ್ತೇವೆ. ಅವನು ಪ್ರಥಮ ವಂದಿತ. ಗಣೇಶನೊಡನೆ ನಮಗಿರುವ ಆತ್ಮೀಯತೆ ತುಸು ಹೆಚ್ಚೇ. ಅದು ಮಕ್ಕಳಿಗಿರಲಿ, ದೊಡ್ಡವರಿಗಿರಲಿ. ಜತೆಗೆ ತಿಂಡಿ-ತಿನಿಸುಗಳೊಂದಿಗೂ ಅವನನ್ನು ಗುರುತಿಸುವುದಿದೆ. ಡೊಳ್ಳೊಟ್ಟೆ ಗಣಪ ಎಂದು ಕರೆಯುವುದೂ ಇವನನ್ನೇ. ಚಂದ್ರನ ಕಥೆ ಹೇಳುತ್ತಾ ಮಕ್ಕಳಿಗೆ ಗಣೇಶನನ್ನು ಪರಿಚಯಿಸುವುದೂ ಇದೇ ನೆಲೆಯಲ್ಲಿ. ಹಾಗಾಗಿ ಚಿಕ್ಕವರಿದ್ದಾಗಲೇ ಗಣೇಶ ಎಂದ ಕೂಡಲೇ ಸಂಬಂಧ ಕಲ್ಪಿಸಿಕೊಳ್ಳುವುದೇ ಎರಡು ಕಥೆಗಳಿಂದ. ಮೊದಲನೆಯದು ಈಗಾಗಲೇ ಉಲ್ಲೇಖೀಸಿದ ಚಂದ್ರನ ಕಥೆ. ಮತ್ತೂಂದು ರಾವಣನ ಆತ್ಮಲಿಂಗದ ಕಥೆ.

ಇಂಥ ಗಣಪತಿಯನ್ನು ಹಲವೆಡೆ ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಹಾಗೆಯೇ ಅವನಿಗೆ ಅರ್ಪಿಸುವ ನೈವೇದ್ಯವೂ ಅಷ್ಟೇ ವಿಶಿಷ್ಟವಾದುದು. ಒಂದೊಂದು ಕಡೆ ಒಂದೊಂದು. ಉದಾಹರಣೆಗೆ ಇಡಗುಂಜಿ ಗಣಪತಿ ದೇವಸ್ಥಾನದಲ್ಲಿ ನಿಮಗೆ ನೈವೇದ್ಯವಾಗಿ ಅರ್ಪಿಸಿ ಪ್ರಸಾದ ರೂಪದಲ್ಲಿ ಕೊಡುವುದು ಸಕ್ಕರೆ ಪಂಚಕಜ್ಜಾಯ. ಅದೇ ನೀವು ಸೌತಡ್ಕಕ್ಕೆ ಬಂದರೆ ಅವಲಕ್ಕಿ. ಎಷ್ಟೊಂದು ವೈಶಿಷ್ಟéವಲ್ಲವೇ? ಈ ಗಣಪತಿಯ ಪ್ರಸಾದದ ಹಿಂದೆಯೂ ಒಂದು ನಂಬಿಕೆ ಇರಬಹುದಲ್ಲವೇ? ಇದೆ ಎನ್ನುವುದೇ ಹೆಚ್ಚು ಸತ್ಯ.

ಇಡಗುಂಜಿ ಮಹಾಗಣಪತಿ
ಇಡಗುಂಜಿ ಗಣಪನ ಬಗ್ಗೆ ಕೇಳಿರಬಹುದು. ಮಹಾಗಣಪತಿ ಎಂದೇ ಪ್ರಸಿದ್ಧಿ. ಈ ಗಣಪನಿಗೆ ಕಡಲೆಕಾಳಿನ ಸಕ್ಕರೆ ಪಂಚಕಜ್ಜಾಯ ಬಲು ಪ್ರೀತಿ. ನಾರದ ಪ್ರತಿಷ್ಠಾಪಿಸಿದ ಈ ಗಣಪ ನಿಂತಿರುವುದು ಕಿರುಬೆರಳಿನ ಮೇಲೆ. “ಎಂದು ನನಗೆ ಕಡಲೆಕಾಳಿನ ಪಂಚಕಜ್ಜಾಯ ಮಾಡುವುದಿಲ್ಲವೋ ಅಂದು ನಾನು ಇಲ್ಲಿ ನೆಲೆಸುವುದಿಲ್ಲ’ಎಂದು ತಿಳಿಸಿದ್ದನೆಂದು ಪ್ರತೀತಿ ಇದೆ. ಆದ್ದರಿಂದ ಪ್ರತಿ ದಿನವೂ ಕಡಲೆಕಾಳಿನ ಪಂಚಕಜ್ಜಾಯವೇ ನೈವೇದ್ಯ. ಹಾಗಾಗಿ ಕಷ್ಟಗಳನ್ನು ಪರಿಹರಿಸು ಎಂದು ಬೇಡಿಕೊಂಡು ಬರುವ ಭಕ್ತರೂ ನೈವೇದ್ಯವಾಗಿ ಅರ್ಪಿಸುವುದು ಇದನ್ನೇ. ತಮ್ಮ ಇಷ್ಟಾರ್ಥ ಸಿದ್ಧಿಗೆ, ಕಷ್ಟಗಳ ಕಳೆಯುವಂತೆ ಕೋರಿ ಸಕ್ಕರೆ ಪಂಚಕಜ್ಜಾಯ ಮಾಡಿಸಿ ಹಂಚಿದರೆ ಪರಿಹಾರ ಸಿಗುತ್ತದೆಂಬ ನಂಬಿಕೆಯಿದೆ.

ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಓಲೆ ಕಡುಬು ವಿಶೇಷ. ಭಕ್ತರು ಇಲ್ಲಿ ಹೆಚ್ಚಾಗಿ ಅರ್ಪಿಸುವುದು ಕಡುಬನ್ನೇ. ಅದೇ ಇಲ್ಲಿನ ವಿಶೇಷ. ಹಿಂದಿನ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ತಾವು ಬೆಳೆದ ಧಾನ್ಯಗಳಿಂದ ಕಡುಬು ಮಾಡಿ ಗಣಪತಿಗೆ ಅರ್ಪಿಸಿದರೆ ಸಮೃದ್ಧ ಫ‌ಸಲು ಬರುತ್ತದೆಂಬ ನಂಬಿಕೆ ಸುತ್ತಮುತ್ತಲಿನವರದ್ದು.

ಸೌತಡ್ಕ ಗಣಪ
ಗೋಪಾಲಕರಿಗೆ ಸಿಕ್ಕ ಕಲ್ಲಿನ ಗಣಪತಿಯನ್ನು ಒಂದು ಕಲ್ಲಿನ ಮೇಲೆ ಪ್ರತಿಷ್ಠಾಪಿಸಿದರು. ಇಲ್ಲಿನ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಯಾವುದೇ ಕಟ್ಟಡವಿಲ್ಲ. ಬಯಲೇ ಆಲಯ, ದೇವಾಲಯ. ತೆರೆದ ಸ್ಥಳದಲ್ಲಿರುವ ಗಣಪತಿ. ದಿನದ 24 ಗಂಟೆಯೂ ದರ್ಶನವಿದೆ. ಇಲ್ಲಿ ಅನೇಕ ಸೇವೆಗಳಲ್ಲಿ ಬೆಲ್ಲ ಅವಲಕ್ಕಿ ಪಂಚಕಜ್ಜಾಯವೂ ವಿಶಿಷ್ಟವೆನಿಸುವಂಥದ್ದು. ಭಕ್ತರು ಈ ಸೇವೆಯನ್ನು ಮಾಡಿಸಿದ ಒಂಬತ್ತು ತಿಂಗಳೊಳಗೆ ಅವರ ಇಷ್ಟಾರ್ಥ ಸಿದ್ಧಿಸುತ್ತದೆಂಬ ಅಭಿಮತವಿದೆ.

ಮಧೂರು ಗಣಪತಿ
ಮಧೂರು ಗಣಪತಿಗೆ ಅರೆ ಬೆಂದ ಅಪ್ಪ ಅಥವಾ ಪಚ್ಚಪ್ಪ ಬಹಳ ಪ್ರಿಯ. ಆದುದರಿಂದ ಇಲ್ಲಿ ಅಪ್ಪ ಪ್ರಸಾದಕ್ಕೆ ಬಹಳ ಮಹತ್ವ.. ಅಪ್ಪಕ್ಕಿಂತಲೂ ಹೆಚ್ಚು ಪಚ್ಚಪ್ಪನೇ ಇಷ್ಟ. ಪಚ್ಚಪ ಸೇವೆ ಮಾಡಿದರೆ ಗಣಪತಿ ಸಂಪ್ರೀತನಾಗುತ್ತಾನೆ. ಪಚ್ಚಪ್ಪ ಅಂದರೆ ಅರೆ ಬೆಂದ ಹಾಗೂ ಉಪ್ಪಿಲ್ಲದ ಒಂದು ತಿಂಡಿ. ಬೊಡ್ಡಜ್ಜನೆಂದು ಕರೆಯಲ್ಪಡುವ ಡೊಳ್ಳು ಹೊಟ್ಟೆ ಗಣಪನಿಗೆ ಅಪ್ಪ ಬೇಯುವವರೆಗೆ ಕಾಯುವ ವ್ಯವಧಾನವಿರುವುದಿಲ್ಲ.. ಆದ್ದರಿಂದ ಅರೆಬಂದ ಪಚ್ಚಪ್ಪವೇ ಇಷ್ಟವಂತೆ. ಪಚ್ಚಪ್ಪ ಮಧೂರು ಗಣಪತಿಯ ಮೊದಲ ನೈವೇದ್ಯ. ಪುರಾಣಗಳ ಪ್ರಕಾರ ಇಲ್ಲಿ ಮೊದಲು ಗಣಪನ ಚಿತ್ರ ಬಿಡಿಸಿದ ಬಾಲಕರು ನೈವೇದ್ಯವಾಗಿ ಅರೆಬೆಂದ ಅಪ್ಪವನ್ನು ನೀಡಿದ ಕಾರಣ ಗಣಪತಿಗೆ ಪಚ್ಚಪ್ಪ ಇಷ್ಟವೆನ್ನುತ್ತಾರೆ.

ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇಗುಲ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಇನ್ನೊಂದು ಪ್ರಸಿದ್ಧ ದೇವಸ್ಥಾನ ಹಟ್ಟಿಯಂಗಡಿ ಸಿದ್ಧಿ ವಿನಾಯಕ ಸನ್ನಿಧಿ. 7ನೇ ಶತಮಾನದಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿತ್ತು ಎನ್ನುತ್ತದೆ ಇತಿಹಾಸ. 2.5 ಅಡಿ ಎತ್ತವಿರುವ ಈ ವಿಗ್ರಹವನ್ನು ಸಾಲಿಗ್ರಾಮದಿಂದ ತಯಾರಿಸಲಾಗಿದೆ. ಜತೆಗೆ 30 ವಿಧದ ವಿಗ್ರಹಗಳಿರುವುದು ಇಲ್ಲಿನ ವಿಶೇಷತೆ. ವಾರಾಹಿ ನದಿ ತಟದಲ್ಲಿ ವಿಗ್ರಹ ಉದ್ಭವವಾಗಿದೆ ಎನ್ನುವುದು ಐತಿಹ್ಯ. ಇಲ್ಲಿ ಹಲಸಿನ ಎಲೆಯ ಕಡುಬು ವಿಶಿಷ್ಟ ಪ್ರಸಾದ. ಜತೆಗೆ ಮೋದಕ, ಚಕ್ಕುಲಿ ಮುಂತಾದ ಗಣಪನ ಪ್ರಿಯ ತಿನಿಸನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

ಗಣೇಶನ ಆರಾಧನೆ ಅನಾದಿಕಾಲದ್ದು. ಗಣೇಶನ ಸಾರ್ವಜನಿಕ ಆರಾಧನೆಗೆ ಇತಿಹಾಸಗಳಲ್ಲಿ ಅಲ್ಪಸ್ವಲ್ಪ ಉಲ್ಲೇಖವಿದೆ. ಆದರೆ ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಸ್ವಲ್ಪ ಅಧಿಕವಾಗಿಯೇ ವಿಜೃಂಭಣೆಯಿಂದ ಗಣಪತಿ ಆರಾಧಿಸಲ್ಪಟ್ಟಿದ್ದಾನೆ. ಈ ಮಾತಿಗೆ ಪುಷ್ಟಿ ಎನ್ನುವಂತೆ ಗಣೇಶ ಹಬ್ಬವೆಂಬ ಕಲ್ಪನೆ ಚಾಲ್ತಿ ಬಂದದ್ದು, ಪ್ರಚಾರಕ್ಕೆ ಬಂದದ್ದು ಮರಾಠ ದೊರೆ ಛತ್ರಪತಿ ಶಿವಾಜಿ ಕಾಲದಲ್ಲಿ ಎಂಬ ಅಭಿಪ್ರಾಯವಿದೆ. ಪೇಶ್ವರು ಗಣೇಶನನ್ನು ತಮ್ಮ ಕುಟುಂಬ ದೇವರೆಂದು ಆರಾಧಿಸುತ್ತಿದ್ದರು. ಮರಾಠರು ಅಧಿಕಾರವನ್ನು ಕಳೆದುಕೊಂಡಾಗ ಭೌಶೇಬ್‌ ಲಕ್ಷ್ಮಣ್‌ ಜವಾಲೆ ಗ್ವಾಲಿಯರ್‌ ನಗರಕ್ಕೆ ಭೇಟಿ ನೀಡಿ ಸಮುದಾಯದ ಕಾರ್ಯಕ್ರಮವಾಗಿ ಉತ್ಸವವನ್ನು ಪ್ರಾರಂಭಿಸಿದ ಎಂಬ ಮಾತಿದೆ. ಅದಾದ ಮೇಲೆ ಸ್ವಲ್ಪ ಸಾರ್ವಜನಿಕ ನೆಲೆಯಲ್ಲಿ ಗಣೇಶನ ಆಚರಣೆ ತೆರೆಗೆ ಸರಿದರೂ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಬಾಲಗಂಗಾಧರ ತಿಲಕರು ಪ್ರಾಮುಖ್ಯ ಸೃಷ್ಟಿಸಿದರು. ಸಾರ್ವಜನಿಕ ಗಣೇಶೋತ್ಸವಗಳು ಆರಂಭವಾದವು. ಆ ಪರಿಕಲ್ಪನೆ ಇಂದು ದೇಶಾದ್ಯಂತ ಬೆಳೆದಿದೆ. ಸಾರ್ವಜನಿಕ ಗಣೇಶೋತ್ಸವ ಮಾಡದ ಗ್ರಾಮಗಳಿಲ್ಲವೆಂಬಂತಾಗಿದೆ. ವಿದೇಶಗಳಲ್ಲೂ ಭಾರತೀಯರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.

ಮರಾಠರಿಗೂ ಗಣೇಶನಿಗೂ ಇರುವ ಸಂಬಂಧಕ್ಕೆ ಇನ್ನಷ್ಟು ಮಹತ್ವ ಕೊಡುವುದು ಅಷ್ಟ ವಿನಾಯಕನ ಕಲ್ಪನೆ. ಅಷ್ಟಲಕ್ಷ್ಮೀಯರ ಪರಿಕಲ್ಪನೆಯಂತೆ ಅಷ್ಟ ವಿನಾಯಕನ ಕಲ್ಪನೆಯೂ ಇದೆ. ಒಬೊಬ್ಬನದ್ದೂ ಒಂದೊಂದು ವೈಶಿಷ್ಟé, ಪ್ರತ್ಯೇಕ ಆದ್ಯತೆಗಳು. ವಿಶೇಷವೆನಿಸಿದರೆ ಈ ಎಂಟೂ ಗಣಪರು ಇರುವುದು ಮಹಾರಾಷ್ಟ್ರದಲ್ಲೇ. ಅದೇ ಹನ್ನೆರಡು ಜ್ಯೋತಿರ್ಲಿಂಗಗಳ ಕಲ್ಪನೆ ಹಾಗಿಲ್ಲ. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಹಂಚಿ ಹೋಗಿದೆ. ಆದರೆ ಅಷ್ಟ ವಿನಾಯಕರನ್ನು ನೋಡಲು ನೀವು ಮಹಾರಾಷ್ಟ್ರಕ್ಕೆ ಹೋಗಲೇಬೇಕು.

ಮಯೂರೇಶ್ವರ
ಶ್ರೀ ಮಯೂರೇಶ್ವರ ಮಂದಿರ ಇರುವುದು ಪುಣೆ ಜಿಲ್ಲೆಯ ಮೋರ್‌ಗಾಂವ್‌ನಲ್ಲಿ. ಗಣೇಶನನ್ನು ಪರಮಾತ್ಮನೆಂದು ಪರಿಗಣಿಸುವ ಗಣಪತ್ಯ ಪಂಥದ ಪೂಜಾ ಕೇಂದ್ರಗಳಲ್ಲಿ ಮೋರ್‌ಗಾಂವ್‌ ಅಗ್ರಗಣ್ಯ. ಹಿಂದೂ ದಂತಕಥೆಯ ಪ್ರಕಾರ ದೇವಾಲಯಕ್ಕೆ ಹಾಗೂ ಗಣೇಶನಿಂದ ಸಿಂಧು ಎಂಬ ರಾಕ್ಷಸ ಕೊಲ್ಲಲ್ಪಡುವುದಕ್ಕೆ ಸಂಬಂಧವಿದೆ. ಇದು ಅಷ್ಟವಿನಾಯಕ ಎಂಬ ಎಂಟು ಗಣೇಶ ದೇವಾಲಯಗಳ ಯಾತ್ರೆಯ ಪ್ರಾರಂಭ ಮತ್ತು ಅಂತ್ಯದ ಸ್ಥಳ. ತೀರ್ಥಯಾತ್ರೆಯ ಕೊನೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡದಿದ್ದರೆ ತೀರ್ಥಯಾತ್ರೆ ಅಪೂರ್ಣ ಎನ್ನಲಾಗುತ್ತದೆ. ಈ ದೇಗುಲ ನಿರ್ಮಿತವಾದುದು ಬಹಮನಿ ರಾಜರ ಕಾಲದಲ್ಲೆಂಬ ಅಭಿಪ್ರಾಯವಿದೆ. ಇಡೀ ದೇಗುಲ ಕಪ್ಪುಕಲ್ಲಿನಿಂದ ಕೂಡಿದ್ದು, ನಾಲ್ಕು ದ್ವಾರಗಳನ್ನು ಹೊಂದಿದೆ. ಗ್ರಾಮದ ಮಧ್ಯ ಭಾಗದಲ್ಲಿದ್ದು, ಗೊಮ್ಮಟಗಳ ಮಾದರಿಯ ಗೋಪುರಗಳಿವೆ. ಇಲ್ಲಿ ಗಣೇಶ ಕುಳಿತಿರುವುದು ಮಯೂರ ಪಕ್ಷಿಯ ಮೇಲೆ. ಹಾಗಾಗಿ ಈತ ಮಯೂರೇಶ್ವರ.

ಸಿದ್ಧಿವಿನಾಯಕ
ಅಹ್ಮದ್‌ನಗರ ಜಿಲ್ಲೆಯ ಕರ್ಜತ್‌ ತಾಲೂಕಿನ ಸಿದ್ಧಟೇಕ್‌ನಲ್ಲಿರುವ ಭೀಮಾ ನದಿಯ ತೀರದಲ್ಲಿ ಈ ದೇವಾಲಯವಿದೆ. ಇಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ವಿಷ್ಣು ಮಧು ಮತ್ತು ಕೈಟಭ ರಾಕ್ಷಸರನ್ನು ಸಂಹರಿಸಿದ ಎಂಬ ಮಾತೂ ಇದೆ. ಮೋರ್‌ಗಾಂವ್‌ ಭೇಟಿಯ ಬಳಿಕ ಈ ದೇವಾಲಯಕ್ಕೆ ಭೇಟಿ ನೀಡಬೇಕೆಂಬುದು ಪ್ರತೀತಿ. ಸಾಮಾನ್ಯವಾಗಿ ಗಣೇಶನ ಸೊಂಡಿಲು ಎಡಬದಿಗೆ ತಿರುಗಿರುತ್ತದೆ. ಆದರೆ ಇಲ್ಲಿ ಬಲಬದಿಯಲ್ಲಿದೆ. ಗಣಪತಿಯ ತೊಡೆಯ ಮೇಲೆ ಸಿದ್ಧಿ ಮತ್ತು ಬುದ್ಧಿಯರು ಕುಳಿತಿದ್ದಾರೆ. ಬಲಮುರಿ ಗಣಪ ತುಂಬಾ ಶಕ್ತಿಶಾಲಿ ಜತೆಗೆ ಅವನನ್ನು ಮೆಚ್ಚಿಸುವುದು ಬಹಳ ಕಷ್ಟದ ಕೆಲಸವೆಂಬ ನಂಬಿಕೆಯಿದೆ. ಗಣಪತಿಯ ಸೊಂಡಿಲು ಬಲ ಹೊಂದಿರುವ ಏಕೈಕ ಅಷ್ಟ ವಿನಾಯಕ ದೇಗುಲವಿದು. ದಂಡನಾಯಕ ಹರಿಪಂತ್‌ ಫ‌ಡೆR ನಿರ್ಮಿಸಿದ್ದು ಎಂಬುದಾಗಿ ಹೇಳಲಾಗುತ್ತದೆ. ಪೇಶ್ವೆ ದಂಡನಾಯಕ ಹರಿಪಂತ್‌ ತನ್ನ ಹುದ್ದೆಯನ್ನು ಕಳೆದುಕೊಂಡು ಬೇಸರದಿಂದ ಈ ಗಣಪತಿಯನ್ನು ಪೂಜಿಸುತ್ತಿರುತ್ತಾನೆ. 21 ದಿನಗಳ ಕಾಲ ಪ್ರದಕ್ಷಿಣೆ ಮಾಡಿ ಸೇವೆ ಸಲ್ಲಿಸುವಾಗ ಕೊನೆಯ ದಿನ ರಾಜನ ಆಸ್ಥಾನದಿಂದ ಬುಲಾವ್‌ ಬರುತ್ತದೆ. ಹರಿಪಂತ್‌ಗೆ ಮತ್ತೆ ಪದವಿ ಪ್ರಾಪ್ತವಾಗುತ್ತದೆ.

ಬಲ್ಲಾಳೇಶ್ವರ
ಬಲ್ಲಾಳೇಶ್ವರ ದೇವಾಲಯ ಭಕ್ತನ ಹೆಸರಿನಲ್ಲಿ ಕರೆಯಲ್ಪಡುವ ಏಕೈಕ ವಿನಾಯಕ. ಇದು ರಾಯಗಡ್‌ ಜಿಲ್ಲೆಯ ಕರ್ಜತ್‌ನಿಂದ 58 ಕಿ.ಮೀ. ದೂರದಲ್ಲಿರುವ ಪಾಲಿ ಗ್ರಾಮದಲ್ಲಿದೆ. ಬಲ್ಲಾಳ ಎಂಬ ಭಕ್ತ ಕಷ್ಟದಲ್ಲಿದ್ದಾಗ ಗಣೇಶ ಬ್ರಾಹ್ಮಣ ರೂಪದಲ್ಲಿ ಬಂದು ಸಹಾಯ ಮಾಡಿ ಹತ್ತಿರದಲ್ಲಿದ್ದ ಕಲ್ಲಿನಲ್ಲಿ ಕಣ್ಮರೆಯಾದರು. ಅನಂತರ ಪ್ರತಿಮೆಯನ್ನು ಬಲ್ಲಾಳೇಶ್ವರು ಎಂದು ಕರೆಯಲಾಗುತ್ತಿದೆ.

ಚಿಂತಾಮಣಿ ಗಣಪತಿ
ತೇವೂರು ಚಿಂತಾಮಣಿ ಗಣಪತಿಯೂ ಅಷ್ಟ ಗಣಪತಿಗಳಲ್ಲಿ ಒಂದು.ದಂತ ಕಥೆಳಲ್ಲಿ ಐತಿಹ್ಯ ಹೊಂದಿರುವವನು.ಪುಣೆಯ ಸಮೀಪದ ತೇವೂರು ಎಂಬಲ್ಲಿ ಈ ಗಣಪತಿಯನ್ನು ಪ್ರತಿಷ್ಠಾ ಪಿಸಲಾಗಿದೆ. ಇದರಲ್ಲಿನ ಕಥೆಯೇ ವಿಶಿಷ್ಟವಾದುದು. ಮುದ್ಗಲ ಪುರಾಣದಲ್ಲಿ ಉಲ್ಲೇಖೀಸಿರುವಂತೆ ಗಣ ಅಥವಾ ಗಣಾಸುರ ಎಂಬ ರಾಜನಿದ್ದ. ಅವನು ದುರಾಸೆಯವ. ಒಮ್ಮೆ ಗಣ ತಪಸ್ಸು ಮಾಡಿ ಶಿವನಿಂದ ಆಶೀರ್ವಾದ ಪಡೆದು ಮೂರೂ ಲೋಕಕ್ಕೂ ಅಧಿಪತಿಯಾದ. ಒಮ್ಮೆ ಗಣ ಮತ್ತು ಅವನ ಸೇನೆ ಕಪಿಲ ಋಷಿ ಆಶ್ರಮಕ್ಕೆ ಬಂದರು. ರಾಜನೇ ಬಂದದ್ದನ್ನು ಕಂಡು ಕಪಿಲರು, ತಮ್ಮಲ್ಲಿದ್ದ ಅಮೂಲ್ಯ ರತ್ನ ಚಿಂತಾಮಣಿ ಸಹಾಯದಿಂದ ಆತಿಥ್ಯವನ್ನು ನೆರವೇರಿಸಿದರು. ಇದನ್ನು ಕಂಡ ರಾಜನಿಗೆ ಅಚ್ಚರಿಯಾಯಿತಲ್ಲದೇ, ಆ ಅಮೂಲ್ಯ ರತ್ನ ಪಡೆಯುವ ದುರಾಸೆ ಬಂದಿತು. ಬಲವಂತದಿಂದ ಆ ರತ್ನವನ್ನು ವಶಪಡಿಸಿಕೊಂಡ. ರಾಜನ ನಡೆಯಿಂದ ಬೇಸತ್ತ ಕಪಿಲರು ತಮ್ಮ ಇಷ್ಟದೈವ ಗಣಪತಿಯ ಮೊರೆ ಹೊಕ್ಕರು. ಅಂದು ರಾತ್ರಿ ಗಣೇಶನು ತನ್ನ ಗಣದೊಂದಿಗೆ ಬಂದು ತಲೆ ಕಡಿದಂತೆ ರಾಜ ಕನಸು ಕಂಡ. ಕಪಿಲರ ಮೇಲೆ ಯುದ್ಧ ಸಾರಿದ. ಆಗ ಗಣೇಶನಲ್ಲಿರುವ ಸಿದ್ಧಿಯು ಸೇನೆಯೊಂದಿಗೆ ಬಂದು ರಾಜನನ್ನು ಸೋಲಿಸಿದಳು. ಅಂತಿಮವಾಗಿ ಗಣೇಶನೇ ಗಣಾಸುರನ ತಲೆ ಕಡಿದ. ಆಗ ಕಪಿಲರು ಗಣೇಶನಿಗೆ ವಂದನೆ ಹೇಳಿ, ಚಿಂತಾಮಣಿ ರತ್ನದೊಂದಿಗೆ ಇಲ್ಲಿಯೇ ನೆಲೆಯೂರುವಂತೆ ಕೋರಿಕೊಂಡರಂತೆ. ಅದರ ಫ‌ಲವೇ ಈ ಚಿಂತಾಮಣಿ ವಿನಾಯಕ.

ವರದವಿನಾಯಕ
ವರದವಿನಾಯಕ ದೇವಾಲಯ ರಾಯಗಢ್‌ ಜಿಲ್ಲೆಯ ಕರ್ಜತ್‌ ಮತ್ತು ಖೋಲಾಪುರದ ಖಲಾಪುರ ತಾಲೂಕಿನಲ್ಲಿರುವ ಮಹಾದ್‌ ಗ್ರಾಮದಲ್ಲಿದೆ. ಈ ದೇವಾಲಯವನ್ನು ಪೇಶ್ವಾ ಜನರಲ್‌ ರಾಮಿj ಮಹಾದೇವ್‌ ಬಿವಾಲ್ಕರ್‌ ನಿರ್ಮಿಸಿದರು. ಇದು ವಿಶಿಷ್ಟವಾದ ದೇವಸ್ಥಾನ. ನಾಲ್ಕೂ ಬದಿಯಲ್ಲೂ ಆನೆಯ ವಿಗ್ರಹಗಳಿವೆ. ಕೇಳಿದ ವರ ನೀಡುವವನೆಂಬುದು ಇಲ್ಲಿಯ ಪ್ರತೀತಿ. ಇದಕ್ಕೆ ಹೊಂದಿಕೊಂಡಂತೆ ರುಕಾ¾ಂಗದನ ಕಥೆಯೂ ಇದೆ. ಈ ದೇವಸ್ಥಾನದಲ್ಲಿ ಭಕ್ತರೇ ದೇವರನ್ನು ಅರ್ಚಿಸಬಹುದು.

ವಿಘ್ನೇಶ್ವರ
ವಿಘ್ನೇಶ್ವರ ಅಥವಾ ವಿಘ್ನಹರ್‌ ಗಣಪತಿ ದೇವಸ್ಥಾನವೂ ಮಹಾ ರಾಷ್ಟ್ರದ ಓಜರ್‌ ಎಂಬಲ್ಲಿದೆ. ಪುಣೆಯಿಂದ ಸುಮಾರು 85 ಕಿ.ಮೀ. ಹತ್ತಿರದಲ್ಲಿದೆ ಈ ದೇವಾಲಯ. ಈ ದೇಗುಲದಲ್ಲಿ ಆನೆಯ ತಲೆಯ ಜ್ಞಾನವನ್ನು ಗಣೇಶನಿಗೆ ಸಮರ್ಪಿಸಲಾಗಿದೆ ಎಂಬ ಬಲವಾದ ನಂಬಿಕೆಯಿದೆ.ಹಾಗಾಗಿ ಹೆಚ್ಚಿನ ಭಕ್ತರು ಈ ಗಣೇಶನನ್ನು ಪೂಜಿಸುತ್ತಾರೆ.ಮರಾಠ ದೊರೆ ಪೇಶ್ವೆ ಬಾಜಿ ರಾವ್‌ 1 ಮತ್ತು ಮಿಲಿಟರಿ ಕಮಾಂಡ್‌ ಚಿಮಾಜಿ ಅಪ್ಪಾ ಅವರು ನವೀಕರಿಸಿದರು.

ಗಿರಿಜಾತ್ಮಜ
ಜುನ್ನಾರ್‌ ತಾಲೂಕಿನ ಲೇಣಾದ್ರಿಯ ಗಿರಿಜಾತ್ಮಜ ಗಣಪತಿ ದೇವಸ್ಥಾನವಿದೆ. ಇದು ಬೌದ್ಧ ಗುಹಾಲಯಗಳ ಸಂಕುಲ ಎಂದೇ ಪ್ರಸಿದ್ಧಿ. ಪಾರ್ವತಿಯ ಪುತ್ರನೇ ಗಿರಿಜಾತ್ಮಜ.
ಮೊದಲಿಗೆ ಈ ಪ್ರದೇಶಕ್ಕೆ ಕಪಿಚಿತ್ತ ಎಂದು ಹೆಸರಿತ್ತು. ಸುಮಾರು 28 ಬೆಟ್ಟ-ಗುಡ್ಡಗಳು ಆವೃತವಾಗಿರುವುದರಿದ ಈ ಪ್ರದೇಶಕ್ಕೆ ಲೇಣ್ಯಾದ್ರಿ ಎಂದು ಹೆಸರು ಬಂದಿದೆ.ಈ 28 ಗುಹೆಗಳ 7ನೇ ಗುಹೆಯಲ್ಲಿ ಗಿರಿಜಾತ್ಮಜ ಗಣಪತಿಯನ್ನು ಪ್ರತಿ ಷ್ಠಾಪಿಸಲಾಗಿದೆ. ಗುಹೆಯೂ ಬೃಹಾದಾಕಾರವಾಗಿದ್ದು ಸುಮಾರು 57 ಅಡಿ ಉದ್ದ, 51 ಅಡಿ ಅಗಲ, 11 ಅಡಿ ಎತ್ತರ ಹೊಂದಿದೆ.

ಈ ಗುಹೆ ಸೂರ್ಯನ ಕಿರಣಗಳಿಂದಲೇ ಪ್ರಜ್ವಲಿಸುತ್ತದಂತೆ. ಇಲ್ಲಿ ಗಣೇಶ ಬಾಲ್ಯ, ಜೀವನದ ಭಿತ್ತಿ ಚಿತ್ರಗಳನ್ನು ಕಾಣಬಹು ದಾಗಿದೆ. ಈ ಗಣಪತಿ ಭಕ್ತರಿಗೆ ಬೆನ್ನು ಹಾಕಿದ್ದಾನೆ. ಉತ್ತ ರಾಭಿ ಮುಖೀ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು, ಗಣೇಶನನ್ನು ತಿರುಗಿಸಲು ಹೋಗಿ ಪೇಶ್ವೆ ದೊರೆಗಳು ಸೋತಿದ್ದಾರೆ.

ಇಷ್ಟಾರ್ಥ ಸಿದ್ಧಿ ಮಹಾಗಣಪತಿ
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರು ತಾಲೂಕಿನ ರಂಜಾ ಗಾಂವ್‌ನಲ್ಲಿರುವ ಮಹಾ ಗಣಪತಿ ಐತಿಹಾಸಿಕ ಅಷ್ಟಗಣ ಪತಿಗಳಲ್ಲಿ ಬಹು ಪ್ರಮುಖವಾದ ದೇಗುಲ. ಮಹಾದೇವನೂ ಗಣಪತಿ ಪೂಜೆ ಸಲ್ಲಿಸಿದ ಬಳಿಕ ತ್ರಿಪುರಾಸುರ ಸಂಹಾರಕ್ಕೆ ಹೋಗಿದ್ದು ಎಂಬ ಪುರಾಣ ಶ್ರೇಷ್ಠ ಕಥೆಯನ್ನು ಕೇಳಿರುತ್ತೇವೆ.ಈ ಕಾರಣದಿಂದಾಗಿ ಈ ಪ್ರದೇಶಕ್ಕೆ ರಂಜಾ ಗಾಂವ್‌ ಎಂಬ ಹೆಸರು ಪ್ರಸಿದ್ಧಿ ಪಡೆಯಿತು.ಮಣಿಪುರ ಎಂಬುದು ಈ ಪ್ರದೇಶದ ಮೂಲ ಹೆಸರು. ಮರಾಠಾ ಪೇಶ್ವೆ ಗಳು ಈ ಗಣಪತಿಯ ದೇವಸ್ಥಾನವನ್ನು ಜೀರ್ಣೋ ದ್ಧಾರಗೊಳಿ ಸಿದರು. ಈ ಗಣಪತಿಗೆ 20 ಕೈಗಳು, 10 ಸೊಂಡಿಲು ಗಳು ಕಾಣಬಹುದು. ಈ ಕಾರಣಕ್ಕಾಗಿ ಮಹೋತ್ಕಟ ಎಂದು ಹೆಸರು ಬಂದಿದೆ.ಈ ಊರಿನಲ್ಲಿ ಗಣೇಶ ಚೌತಿಗೆ ಯಾವುದೇ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದಿಲ್ಲ. ಬದಲಾಗಿ ಈ ದೇವಸ್ಥಾನಕ್ಕೆ ಹೋಗಿ ಪೂಜಿಸುತ್ತಾರೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.