ಮಾಳ: 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
Team Udayavani, Sep 2, 2019, 5:07 AM IST
ಅಜೆಕಾರು: ಕಾರ್ಕಳ ತಾಲೂಕಿನ ಪ್ರಥಮ ಸಾರ್ವಜನಿಕ ಶ್ರೀ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾಳ ಮಲ್ಲಾರುವಿನ ಗಣೇಶೋತ್ಸವಕ್ಕೆ ಈ ಬಾರಿ ಸುವರ್ಣ ಸಂಭ್ರಮ.
1969ರಲ್ಲಿ ಪ್ರಾರಂಭಗೊಂಡ ಗಣೇಶೋತ್ಸವಕ್ಕೆ 50 ವರ್ಷಗಳಾಗಿದ್ದು ಈ ಪ್ರಯುಕ್ತ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ. 2ರಂದು ಬೆಳಗ್ಗೆ ಗಂಟೆ 8ರಿಂದ ವಿಗ್ರಹ ಪ್ರತಿಷ್ಠಾಪನೆ, ಗಣಪತಿ ಹೋಮ, 11ರಿಂದ ಶ್ರೀ ಶಾರದ ಅಂಧರ ಗೀತಾ ಗಾಯನ ಕಲಾ ಸಂಘ, ಶೃಂಗೇರಿ ಇವರಿಂದ ಸಂಗೀತ ರಸ ಮಂಜರಿ, ಮಧ್ಯಾಹ್ನ ಗಂಟೆ 1ರಿಂದ ಅನ್ನ ಸಂತರ್ಪಣೆ, 2ರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಸಂಜೆ 4.30ರಿಂದ ಶ್ರೀ ಗುರುಕುಲ ಶಾಲಾ ಮಕ್ಕಳಿಂದ, 6ರಿಂದ ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
6.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಶ್ರೀ ಕ್ಷೇತ್ರ ಒಡಿಯೂರುವಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಇತರರು ಭಾಗವಹಿಸಲಿದ್ದಾರೆ. ರಾತ್ರಿ 9ರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.
ಸೆ. 3ರಂದು ಬೆಳಗ್ಗೆ 8.30ರಿಂದ ಸಹಸ್ರ ಮೋದಕ ಹವನ, 11ರಿಂದ ಹರಿಕಥೆ, 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನೆರವೇರಲಿದೆ. 2ರಿಂದ ಯಕ್ಷಗಾನ ತಾಳಮದ್ದಳೆ, ಜಾಂಬ ವತಿ ಕಲ್ಯಾಣ, 5ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಭಾಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಮೂಡುಬಿದಿರೆಯ ಡಾ| ಮೋಹನ ಆಳ್ವ, ಶಾಸಕ ವಿ. ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ. ರಾತ್ರಿ 9ರಿಂದ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಆಳ್ವಾಸ್ ನೃತ್ಯ ವೈಭವ ನೆರವೇರಲಿದೆ.
ಸೆ. 4ರಂದು ಬೆಳಗ್ಗೆ 9ರಿಂದ ಶ್ರೀ ಗಣಪತ್ಯಥರ್ವ ಶೀರ್ಷ ಸಹಸ್ರ ವರ್ತನ ಪಾರಾಯಣ, ಆಶೀರ್ವಚನ, ಪ್ರಸಾದ ವಿತರಣೆ, 11ರಿಂದ ಮಂಗಲ ಪ್ರವಚನ ಮಂಗಳೂರು ಶ್ರೀ ರಾಮಕೃಷ್ಣಾಶ್ರಮದ ಸ್ವಾಮೀಜಿ ಶ್ರೀ ಜಿತಕಾಮಾನಂದಜಿ ಅವರಿಂದ ನೆರವೇರಲಿದೆ. ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ, 2.30ರಿಂದ ಪುರಲ್ದ ಅಪ್ಪೆನ ಬೊಳ್ಳಿಲು ಪೊಳಲಿ ತಂಡದವರಿಂದ ತಾಸ್, ಡೋಲು, ವಾದ್ಯಗಳೊಂದಿಗೆ 25 ಹುಲಿಗಳ ಕುಣಿತ, ಸಂಜೆ 4.30ರಿಂದ ಶೋಭಾಯಾತ್ರೆ, ಹುಲಿಕುಣಿತ, ನಾಸಿಕ್ ಬ್ಯಾಂಡ್, ಚೆಂಡೆ ವಾದನ, ಡಿಜೆ ಸೆಟ್, ಮಂಗಳ ವಾದ್ಯದೊಂದಿಗೆ ಅಲಂಕೃತ ವಾಹನದಲ್ಲಿ ಭಕ್ತರ ಜಯಘೋಷದೊಂದಿಗೆ ಮುಳ್ಳೂರು ಜಂಕ್ಷನ್ವರೆಗೆ ಹೋಗಿ ಮುಳ್ಳೂರು ಹೊಳೆಯಲ್ಲಿ ವಿಗ್ರಹ ವಿಸರ್ಜನೆ ನಡೆಯಲಿದೆ.
ಪದಾಧಿಕಾರಿಗಳು
ಗೌರವಾಧ್ಯಕ್ಷರಾಗಿ ಸದಾನಂದ ನಾಯಕ್, ಅಧ್ಯಕ್ಷರಾಗಿ ಹರೀಶ್ಚಂದ್ರ ತೆಂಡುಲ್ಕರ್, ಕಾರ್ಯಾಧ್ಯಕ್ಷರಾಗಿ ಅಜಿತ್ ಹೆಗ್ಡೆ, ರಾಮ ಸೇರಿಗಾರ್, ಕಾರ್ಯದರ್ಶಿಯಾಗಿ ವಸಂತ ಶೆಟ್ಟಿ, ಸಂಚಾಲಕರಾಗಿ ಎಂ. ವೀರೇಶ್ವರ ಜೋಶಿ, ಎ. ಶ್ರೀರಂಗ ಜೋಶಿ, ಕೋಶಾಧಿಕಾರಿಯಾಗಿ ಅಕ್ಷತ್ ಕುಮಾರ್, ಉಪಾಧ್ಯಕ್ಷರಾಗಿ ವೆಂಕಟೇಶ ಗೋರೆ, ಸಂದೀಪ ಪೂಜಾರಿ, ಸುಧಾಕರ ನಾಯ್ಕ, ಗಜಾನನ ಮರಾಠೆ, ಸುಧಾಕರ ಹೆಗ್ಡೆ, ಸುಧಾಕರ ಶೆಟ್ಟಿ, ನೀಲೇಶ ತೆಂಡುಲ್ಕರ್, ಜಗದೀಶ ಗೌಡ,ಜೊತೆ ಕಾರ್ಯದರ್ಶಿ ರಘುಪತಿ ಕಾಮತ್, ಮಾಧವ ನಾಯಕ್, ವಸಂತಿ ಆರ್. ಕಾರ್ಯನಿರ್ವಹಿಸುತ್ತಿದ್ದಾರೆ.