ಘರ್ಷಣೆ, ಉದ್ರಿಕ್ತರನ್ನು ಚದುರಿಸಲು ಜಲಫಿರಂಗಿ ಪ್ರಯೋಗ
Team Udayavani, Jul 17, 2019, 5:20 AM IST
ಕಾಸರಗೋಡು: ಪೊಲೀಸರು ತಾರತಮ್ಯ ಮತ್ತು ನಿಷ್ಕ್ರಿಯ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಮುಸ್ಲಿಂ ಲೀಗ್ ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಕಾಸರಗೋಡು ಜಿಲ್ಲಾ ಪೊಲೀಸ್ ಕಚೇರಿಗೆ ಜಾಥಾ ನಡೆಯಿತು.
ಜಲಫಿರಂಗಿ ಪ್ರಯೋಗ
ಜಾಥಾ ಸಂದರ್ಭದಲ್ಲಿ ಉದ್ರಿಕ್ತ ಗೊಂಡು ಬ್ಯಾರಿಕೇಡ್ ಕೆಡವಿ ಮುಂದುವರಿಯಲು ಪ್ರಯತ್ನಿಸಿದ ಮುಸ್ಲಿಂ ಲೀಗ್ ಕಾರ್ಯಕರ್ತರನ್ನು ನಿಯಂತ್ರಿಸಿ ಚದುರಿಸಲು ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದರು.
ಜಾಥಾವನ್ನು ಮುಸ್ಲಿಂ ಲೀಗ್ ರಾಜ್ಯ ಉಪಾಧ್ಯಕ್ಷ ಸಿ.ಟಿ. ಅಹಮ್ಮದಾಲಿ ಉದ್ಘಾಟಿಸಿದರು. ಎ.ಎಂ. ಕಡವತ್ ಅಧ್ಯಕ್ಷತೆ ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಅಬ್ದುಲ್ ರಹಿಮಾನ್, ಮೂಸಾ ಬಿ. ಚೆರ್ಕಳ, ಸಿ.ಬಿ. ಅಬ್ದುಲ್ಲ ಹಾಜಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಅಬ್ದುಲ್ಲ ಕುಂಞಿ ಚೆರ್ಕಳ ಮೊದಲಾದವರು ಮಾತನಾಡಿದರು.
ಸೂರ್ಲಿನಿಂದ ಆರಂಭಗೊಂಡ ಮೆರವಣಿಗೆಗೆ ಮುಹಮ್ಮದ್ ಕುಂಞಿ ಚಾಯಿಂಡಡಿ, ಅಬ್ಟಾಸ್ ಬೀಗಂ, ಅಶ್ರಫ್ ಎಡನೀರು, ಹಾರೀಸ್ ಚೂರಿ, ಮುನೀರ್ ಹಾಜಿ, ವಿ.ಎಂ. ಮುನೀರ್, ಆಶೀಫ್ ಸಾಹಿರ್, ಗಫೂರ್ ತಳಂಗರೆ, ಮುಹಮ್ಮದ್ ಕುಂಞಿ, ಮಜೀದ್ ಪಟ್ಲ, ಯು. ಬಶೀರ್, ಹಬೀಬ್ ಚೆಟ್ಟುಂಗುಳಿ, ಸುಬೈರ್ ಚೂರಿ, ಶೌಕತ್ ಅಲಿ ಕಾಳ್ಯಂಗಾಡ್ ಮೊದಲಾದವರು ನೇತೃತ್ವ ನೀಡಿದರು.
ಸಂಘ ಪರಿವಾರದ ಪರ ಮೃದು ಧೋರಣೆ ಆರೋಪ
ಬೆಳಗ್ಗೆ ಸೂರ್ಲಿನಿಂದ ಆರಂಭಗೊಂಡ ಮುಸ್ಲಿಂ ಲೀಗ್ ಕಾರ್ಯಕರ್ತರ ಮೆರವಣಿಗೆ ಎಸ್.ಪಿ. ಕಚೇರಿಗೆ ತಲುಪಿದಾಗ ಉದ್ರಿಕ್ತರಾದ ಕಾರ್ಯಕರ್ತರು ಕಚೇರಿಯಿಂದ ಕೆಲವೇ ದೂರದಲ್ಲಿ ಪೊಲೀಸರು ನಿರ್ಮಿಸಿದ ಬ್ಯಾರಿಕೇಡ್ ಕೆಡವಿ ಮುಂದು ವರಿಯಲು ಯತ್ನಿಸಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಜಲಫಿರಂಗಿ ಪ್ರಯೋಗಿಸ ಬೇಕಾಯಿತು. ಇದೇ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ. ಕೆಲವು ಪತ್ರಿಕೆಗಳ ಛಾಯಾಚಿತ್ರಗ್ರಾಹಕರ ಕೆಮರಾಗಳು ಕೆಳಗೆ ಬಿದ್ದು ಹಾನಿಗೀಡಾದವು. ಸಂಘ ಪರಿವಾರ ಹಿಂಸೆಯಲ್ಲಿ ತೊಡಗಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಆರೋಪಿಸಿ ಜಾಥಾ ಆಯೋಜಿಸಲಾಗಿತ್ತು.