ಕನಸುಗಳನ್ನು ಹೆಣೆಯುತ್ತ ಗುರಿಯತ್ತ ಸಾಗಿ: ಡಾ| ರಾಜೇಶ್
ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಕಲೋತ್ಸವ ಉದ್ಘಾಟನೆ
Team Udayavani, Sep 28, 2019, 5:05 AM IST
ಕಾಸರಗೋಡು: ಇಚ್ಛಿಸಿದುದನ್ನು ಗಳಿಸುವ ಸಾಮರ್ಥ್ಯ ಇಂದು ಮನುಷ್ಯ ನಿಗಿದೆ. ಆದರೆ ಸಂತೋಷಕ್ಕಾಗಿ ಎಲ್ಲೆಲ್ಲೋ ಅಲೆದಾಡುತ್ತಾನೆ. ನಮ್ಮೊಳಗಿನ ಸಂತೋಷವನ್ನು ಮುಚ್ಚಿಟ್ಟು ಫೇಸ್ಬುಕ್, ಟ್ವಿಟ್ಟರ್ ವಾಟ್ಸಪ್ಗ್ಳಲ್ಲಿ ಅದನ್ನರಸುತ್ತಾ ಕಾಲ ಕಳೆಯುವುದು ಮೂರ್ಖತನ ಎಂದು ಕಣ್ಣೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ನ ನಿರ್ದೇಶಕರೂ, ಸಾಹಿತಿಯೂ ಆದ ಡಾ| ರಾಜೇಶ್ ಬೆಜ್ಜಂಗಳ ಅಭಿಪ್ರಾಯಪಟ್ಟರು.
ಕಾಸರಗೋಡು ಚಿನ್ಮಯ ವಿದ್ಯಾಲಯದ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಗಳು ಶಿಕ್ಷಣದ ಜತೆಗೆ ಶಿಸ್ತುಬದ್ಧ ಜೀವನದ ತರಬೇತಿಯನ್ನು ಹೊಂದುತ್ತಿರುವುದು ಅದೃಷ್ಟಕರ. ಇಲ್ಲಿನ ಪರಿಸರ, ಪರಿಕರ, ನಿಯಮ ಗಳು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವಲ್ಲಿ ಪ್ರೇರಕವಾಗು ತ್ತಿವೆ. ಕಲಿತು ಉದ್ಯೋಗಗಳಿಸಿದ ಬಳಿಕ ಶಾಲಾ ಚಟುವಟಿಕೆಗಳಂಥ ಆಹ್ಲಾದಕರ ಉತ್ಸವಗಳಲ್ಲಿ ಪಾಲ್ಗೊಳ್ಳುವ ಅವಕಾಶವಿರಲಾರದು. ಆ ದಿನಗಳಲ್ಲಿ ಶಾಲಾ ಜೀವನವನ್ನು ಮೆಲುಕು ಹಾಕುವುದರಲ್ಲೇ ನಾವು ತೃಪ್ತಿ ಪಡಬೇಕಾ ಗುವುದು. ವಿದ್ಯಾರ್ಥಿ ದೆಸೆಯಲ್ಲಿ ಇಂಥ ಕಲೋತ್ಸವಗಳಲ್ಲಿ ಪಾಲ್ಗೊಳ್ಳುವುದು, ಅನೇಕ ಕೌಶಲಗಳನ್ನು ಅರಿಯುವುದು ಅತೀ ಅಗತ್ಯ.
ಪ್ರಕೃತಿಯನ್ನು ಆರಾಧಿಸಿ
ಆಂಗ್ಲ ಕವಿ ವರ್ಡ್ಸ್ವರ್ತ್ ಹೇಳಿದಂತೆ ಬೆಳಗ್ಗಿನ ಸೂರ್ಯ ಕಿರಣ, ತಂಪಾದ ಗಾಳಿ, ಅರಳಿದ ಹಳದಿ ಹೂವುಗಳು ನೀಡುವ ಸಂತೋಷ ಅದ್ಭುತವಾದುದು. ಪ್ರಕೃತಿಯನ್ನು ಆಸ್ವಾದಿಸುವ ಮನಸ್ಸನ್ನು ಬೆಳೆಸಬೇಕು. ನಮ್ಮ ಸುತ್ತಲೇ ಸಂತೋಷ ಸಿಗುವುದಾದರೆ ಮತ್ತೇಕೆ ಅದನ್ನು ಅರಸುತ್ತ ಸಮಯವನ್ನು ಪೋಲು ಮಾಡುವುದು? ಕವಿ ಕೀಟ್ಸ್ ಹೇಳಿದ್ದಾರೆ, ಸೌಂದರ್ಯವೇ ಸತ್ಯ. ಸತ್ಯವೇ ಸೌಂದರ್ಯ. ಬೆಳಕು ಹಾಗೂ ಕತ್ತಲೆಯ ನಡುವಿನ ಈ ಹೊತ್ತನ್ನು ಸುಂದರಗೊಳಿಸಲು ಎಷ್ಟೆಷ್ಟೋ ಚಟುವಟಿಕೆಗಳು ನಮ್ಮ ಮುಂದಿವೆ. ಸುಂದರ ಕನಸನ್ನು ಹೆಣೆಯುತ್ತಾ ಒಂದೊಂದನ್ನೂ ನನಸಾಗಿಸಲು ಶ್ರಮಿಸಬೇಕು. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾಲಯದ ಪ್ರಾಂಶುಪಾಲ ಬಿ. ಪುಷ್ಪರಾಜ್ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಆಯಿಷ ಹುದ ಸ್ವಾಗತಿಸಿದರು. ಆಯಿಷಾ ಅಫಾ° ವಂದಿಸಿದರು.
ಶಿಸ್ತು ಬದ್ಧರಾಗಿರಿ
ಡಾ| ಅಬ್ದುಲ್ ಕಲಾಂ ಹೇಳಿದಂತೆ “ನಾವು ಸೂರ್ಯನಂತೆ ಪ್ರಕಾಶಿಸಬೇಕು. ಅದಕ್ಕಾಗಿ ಸೂರ್ಯನಂತೆ ಉರಿಯಬೇಕು’. ಕಠಿನ ಪರಿಶ್ರಮ, ಪ್ರಾರ್ಥನೆ, ಗುರು ಹಿರಿಯರಲ್ಲಿ ಭಕ್ತಿ, ಸಮಯ ಪಾಲನೆಯಿಂದ ಮಾತ್ರವೇ ನಿಶ್ಚಿತ ಗುರಿಯತ್ತ ಸಾಗುತ್ತಾ ಶಿಸ್ತುಬದ್ಧ ವ್ಯಕ್ತಿಯಾಗಿ ಮಾರ್ಪಡುವುದು ಸಾಧ್ಯ ಎಂದು ಡಾ| ರಾಜೇಶ್ ಹೇಳಿದರು.