ಕಿಂಞಣ್ಣಮೂಲೆ ಸೈಪಂಗಲ್ಲು: ಜಲ ಇಂಗಿಸುವ ಕಾರ್ಯಕ್ಕೆ ಚಾಲನೆ
Team Udayavani, Jul 9, 2019, 11:11 AM IST
ಪೆರ್ಲ: ಪಡ್ರೆ ಪ್ರದೇಶದ ಸ್ಥಳೀಯ ಜಲಪ್ರೇಮಿ ತಂಡದಿಂದ ನೀರ ನೆಮ್ಮದಿಯತ್ತ ಪಡ್ರೆ ಜಲಾಂದೋಲನದ ಪ್ರಯುಕ್ತ ಜು .7ರಂದು ಸ್ವರ್ಗ ತೋಡಿನ ಉಗಮ ಸ್ಥಾನ ಕಿಂಞಣ್ಣಮೂಲೆ ಸಮೀಪ ಜಲ ಇಂಗಿಸುವ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಪಡ್ರೆ ಗ್ರಾಮದ ಜಲಪ್ರೇಮಿ ಕಾರ್ಯಕರ್ತರ ನೇತೃತ್ವದಲ್ಲಿ ಪೆರ್ಲ-ಶಿವಗಿರಿ ರಸ್ತೆ ಬದಿ ಕಿಂಞಣ್ಣಮೂಲೆ ಬಳಿಯ ಸೈಪಂಗಲ್ಲು ಪ್ರದೇಶದಲ್ಲಿ ಸುಮಾರು 6 ಎಕ್ರೆಗಳಷ್ಟು ತೆಂಗು ಕಂಗು ತೋಟದ ಮಧ್ಯೆ ನೀರು ಹರಿದು ಹೋಗುವ ಹಾದಿಯಲ್ಲಿ ಸುಮಾರು ಇಪ್ಪತ್ತು ಸಾವಿರ ಲೀ. ಸಾಮರ್ಥ್ಯದ ಮದಕ ನಿರ್ಮಾಣದ ಪ್ರಯುಕ್ತ ಮಣ್ಣಿನ ಅಡಿಪಾಯ ತೆರವುಗೊಳಿಸಿ ಪ್ಲಾಸ್ಟಿಕ್ ಶೀಟ್ ಅಳವಡಿಸಿ ದೃಢಗೊಳಿಸಿದರು. ಗೋಣಿ ಚೀಲಗಳಲ್ಲಿ ಹೊಯ್ಗೆ, ಮಣ್ಣು ತುಂಬಿಸಿ ನೀರಿನ ಹರಿಯುವಿಕೆ ತಡೆದು ನೀರು ಇಂಗುವಂತೆ ಮಾಡಲಾಯಿತು.
ಮದಕದಲ್ಲಿ ನೀರು ಸಂಗ್ರಹ ವಾಗುವುದರಿಂದ ಸಮೀಪ ಪ್ರದೇಶ ಗಳ ಜಲಸಂಪನ್ಮೂಲಗಳಲ್ಲಿ ಜಲಮಟ್ಟ ಸುಧಾರಣೆಗೊಳ್ಳಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.