ಕೊಡಿಮರ ಮುಹೂರ್ತ
Team Udayavani, Oct 20, 2018, 11:34 AM IST
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಧ್ವಜಸ್ತಂಭಕ್ಕೆ ಹೊಸ ಕೊಡಿಮರ ಅಳವಡಿಸಲು ಮರ ಕಡಿಯುವ ಕೆಲಸಕ್ಕೆ ಮುಹೂರ್ತ ನೆರವೇರಿಸಲಾಯಿತು. ಈಗ ಇರುವ ಕೊಡಿಮರವನ್ನು ಬದಲಾಯಿಸುವಂತೆ ವಾಸ್ತುಶಿಲ್ಪಿಯವರು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಕುಕ್ಕುಜಡ್ಕದ ಬಳಿ 65 ಅಡಿ ಎತ್ತರದ ಕೊಡಿಮರವನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರ ದೇವಾಲಯದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಮರ ಕಡಿಯುವ ಮುಹೂರ್ತ ನಡೆಯಿತು.
ಕುಕ್ಕುಜಡ್ಕದಲ್ಲಿರುವ ಕಿರಾಲ್ಬೋಗಿ ಮರವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಒಪ್ಪಿಗೆ ಸಿಕ್ಕಿದೆ. ವಾಸ್ತುಶಿಲ್ಪಿ ಮುನಿಯಂಗಳ ಎಸ್. ಎಂ. ಪ್ರಸಾದ್ ಮರದ ಕುರಿತು ಒಪ್ಪಿಗೆ ಸೂಚಿಸಿದ್ದಾರೆ. ಕೊಡಿಮರವಾಗಿ ದೇವಾಲಯದಲ್ಲಿ ನಿಲ್ಲಲಿರುವ ಕಿರಾಲ್ ಬೋಗಿ ಮರಕ್ಕೆ ಶುಕ್ರವಾರ ಕುಕ್ಕುಜಡ್ಕದಲ್ಲಿ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿ ಕಡಿಯುವ ಗುರುತು ಹಾಕಲಾಯಿತು.
ವಾಸ್ತುಶಿಲ್ಪಿಯವರ ಪ್ರತಿನಿಧಿ ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್, ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಜಾನು ನಾಯ್ಕ, ಎನ್. ಕರುಣಾಕರ ರೈ, ಯು.ಪಿ. ರಾಮಕೃಷ್ಣ ಉಪಸ್ಥಿತರಿದ್ದರು. ಮುಂದಿನ ಹಂತದಲ್ಲಿ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮರವನ್ನು ಉರುಳಿಸಿ ಪುತ್ತೂರಿಗೆ ತರುವ ವ್ಯವಸ್ಥೆ ನಡೆಯಲಿದೆ.