“ಸಂತೋಷ, ದುಃಖವನ್ನು ಸಮಾನವಾಗಿ ಪರಿಗಣಿಸಿ’
Team Udayavani, Nov 14, 2019, 4:36 AM IST
ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.
ಪುತ್ತೂರು: ರಿಕ್ಷಾ ಚಾಲಕನ ವೃತ್ತಿ ಸಾರ್ವಜನಿಕ ಸೇವೆಯಾಗಿರುವುದರಿಂದ ಹೆಚ್ಚು ನೋವನ್ನೇ ಅನುಭವಿಸಬೇಕಾಗುತ್ತದೆ. ಶ್ರೀಮಂತ ಯಾವತ್ತೂ ರಿಕ್ಷಾ ಚಾಲಕ ಆಗಲಾರ. ಸಂತೋಷ ಮತ್ತು ದುಃಖವನ್ನು ಸಮಾನವಾಗಿ ಪರಿಗಣಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಈ ವೃತ್ತಿ ನನಗೆ ಎಂದೂ ಬೇಸರ ತಂದಿಲ್ಲ. ಇದು 30 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿಯುತ್ತಿರುವ, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪುತ್ತೂರು ಮೊಟ್ಟೆತ್ತಡ್ಕ ನಿವಾಸಿ ದಿಲೀಪ್ ಅವರ ಮನದಾಳದ ಮಾತು.
ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ ಮಕ್ಕಳ ದಿನಾಚರಣೆಯನ್ನು ಮತ್ತಷ್ಟು ಅರ್ಥಪೂರ್ಣ ವಾಗಿಸುವ ನೆಲೆಯಲ್ಲಿ ವಿವಿಧ ವೃತ್ತಿಗಳ ಸಾಧಕರ ಜತೆಗೆ “ಜೀವನ ಕಥನ’ ಮಕ್ಕಳ ಸಂವಾದವನ್ನು ಬುಧವಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಹಮ್ಮಿಕೊಂಡಿದ್ದು, ಪುತ್ತೂರಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಹತಿ ಕನ್ನಡ ಸಂಘದ ಸಹಯೋಗದಲ್ಲಿ ನಡೆದ ಸಂವಾದದಲ್ಲಿ ರಿಕ್ಷಾ ಚಾಲಕ ದಿಲೀಪ್ 100ಕ್ಕೂ ಮಿಕ್ಕಿ ಮಕ್ಕಳ ಜತೆ ತಮ್ಮ ಅನುಭವವನ್ನು ಹಂಚಿಕೊಂಡು ಪ್ರಶ್ನೆಗಳಿಗೆ ಉತ್ತರಿಸಿದರು.
ಜನರು ನೀಡುವ 10 ರೂ. ನಮ್ಮ ಜೇಬನ್ನು ಮಾತ್ರ ತುಂಬುವುದಲ್ಲ. ವಯಸ್ಸಾದ ತಂದೆ-ತಾಯಿ, ವಾಹನದ ಖರ್ಚು, ಮಕ್ಕಳ ಶಿಕ್ಷಣ ಎಲ್ಲವನ್ನೂ ಇದರಲ್ಲೇ ನೀಗಿಸಬೇಕಾಗುತ್ತದೆ. ನಮ್ಮೊಳಗೂ ನೋವಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿ ಕೆಟ್ಟ ಹೆಸರು ತರುವವರ ಕುರಿತು ಅಸಮಾಧಾನವೂ ಇದೆ. ಆದರೆ ಎಲ್ಲರನ್ನೂ ಒಂದೇ ಮುಖದಲ್ಲಿ ನೋಡಬೇಡಿ ಎಂದು ದಿಲೀಪ್ ಹೇಳಿದರು.
ವಿದ್ಯಾರ್ಥಿಗಳಾದ ಪರೀಕ್ಷಿತ್, ಸುಮಾ, ಪ್ರೇಮಾ, ಮಿಥುನ್, ಸುಹಾಸ್, ಮೌನೇಶ್, ಚರಣ್, ಕೀರ್ತನಾ, ನಿಕ್ಷಿತಾ, ನಿಶಾಂತ್, ಸುಹಾಸ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಸಂವಾದಲ್ಲಿ ಪಾಲ್ಗೊಂಡರು. ವಿವೇಕಾನಂದ ಕ.ಮಾ. ಶಾಲೆಯ ಸಂಚಾಲಕ ರವಿನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಶಿಕ್ಷಕ ಪ್ರತಿನಿಧಿ ರೇವತಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಶಿಕ್ಷಕ ವೃಂದದವರು ಸಹಕರಿಸಿದರು.
“ಉದಯವಾಣಿ’ ಪುತ್ತೂರು ವರದಿಗಾರ ರಾಜೇಶ್ ಪಟ್ಟೆ ಸ್ವಾಗತಿಸಿ, ಶಿಕ್ಷಕಿ ಧನ್ಯಾ ವಂದಿಸಿದರು. ಕಡಬ ವರದಿಗಾರ ಎನ್.ಕೆ. ನಾಗರಾಜ್ ಸಂವಾದ ನಿರ್ವಹಿಸಿದರು. “ಉದಯವಾಣಿ’ ಪುತ್ತೂರು ಮಾರುಕಟ್ಟೆ ವಿಭಾಗದ ಹರ್ಷ ಎ. ಹಾಗೂ ಪ್ರಸರಣ ವಿಭಾಗದ ಜಯಾನಂದ್ ಸಿ.ಎಚ್. ಅತಿಥಿಗಳನ್ನು ಗೌರವಿಸಿದರು.
ಪ್ರಶ್ನೆ: ನೀವು “ಉದಯವಾಣಿ’ ಅಭಿಮಾನಿ ಆಗಿದ್ದು ಹೇಗೆ?
ದಿಲೀಪ್: ನಾನು “ಉದಯವಾಣಿ’ ಅಭಿಮಾನಿ. ಆಗ ರೇಡಿಯೋ ಬಿಟ್ಟರೆ “ಉದಯವಾಣಿ’ ಪತ್ರಿಕೆ ಮಾತ್ರ ನಮಗೆ ಸಿಕ್ಕುತ್ತಿತ್ತು. ಉದಯವಾಣಿಯಲ್ಲಿ ಬರುತ್ತಿದ್ದ ಕ್ರೀಡಾ ಸುದ್ದಿಗಳನ್ನು ಓದಲು ಎಷ್ಟು ದೂರ ತೆರಳಿಯಾದರೂ ಪತ್ರಿಕೆ ಖರೀದಿಸುತ್ತಿದ್ದೆ. ಪತ್ರಿಕೆಯಿಂದ ಮನರಂಜನೆ ಜತೆಗೆ ಶಿಕ್ಷಣವೂ ಸಿಗುತ್ತದೆ.
ಪ್ರಶ್ನೆ: ವೃತ್ತಿಯ ಸಂದರ್ಭ ಮರೆಯಲಾರದ, ಖುಷಿ ನೀಡಿದ ಘಟನೆಗಳು ಯಾವುವು?
ದಿಲೀಪ್: ಬಡವರಿಗೆ ಅಸಹಾಯಕ ಸಂದರ್ಭ ಮೊದಲಿಗೆ ಕಾಣಿಸುವುದು ಮತ್ತು ನೆರವಾಗುವುದು ರಿಕ್ಷಾ ಚಾಲಕರು. ಬಡವರ ಶವ ಸಂಸ್ಕಾರಕ್ಕೆ ಹೆಗಲು ಕೊಟ್ಟಿದ್ದು, ಶವ ಸಂಸ್ಕಾರಕ್ಕಾಗಿ ಭಜನೆಯ ಮೂಲಕ ಹಣ ಸಂಗ್ರಹಿಸಿದ್ದು ಮರೆಯಲಾಗದ ಘಟನೆಗಳು. ಸಾಲ ಮಂಜೂರಾಗಿ ಸ್ವಂತ ರಿಕ್ಷಾ ಮನೆಗೆ ಬಂದಾಗ ಆದ ಖುಷಿ ಮರೆಯಲು ಸಾಧ್ಯವಿಲ್ಲ.
ಪ್ರಶ್ನೆ: ನಿಮ್ಮ ಬಾಲ್ಯದ ಕುರಿತು ತಿಳಿಸಿ
ದಿಲೀಪ್: ಮನೆಯಲ್ಲಿ ಸಾಕಷ್ಟು ಕಷ್ಟ ಇತ್ತು. ಅದನ್ನು ವಿವರಿಸಲು ಸಾಧ್ಯವಿಲ್ಲ. ಲಿಟ್ಲ ಫÉವರ್ ಶಾಲೆಯಲ್ಲಿ ನೀಡುತ್ತಿದ್ದ ಗೋಧಿಯನ್ನು ಬೇಯಿಸಿದ ಸಜ್ಜಿಗೆಗೆ ಹಾತೊರೆಯುತ್ತಿದ್ದೆವು. ಗ್ಯಾರೇಜುಗಳಲ್ಲಿ ಆಯುಧ ಪೂಜೆ ಅಥವಾ ಇತರ ಪೂಜೆಯ ಸಂದರ್ಭದಲ್ಲಿ ಸಿಗುವ ಅವಲಕ್ಕಿಯನ್ನು ಕಾದು ತಿನ್ನುತ್ತಿದ್ದೆವು. ಈಗ ಯಾರಿಗೂ ಅಂತಹ ಕಷ್ಟ ಇಲ್ಲ.
ಪ್ರಶ್ನೆ: ವೃತ್ತಿಗೆ ಸಂಬಂಧಿಸಿ ಸ್ಮರಣೀಯ ದಿನ?
ದಿಲೀಪ್: ನಾನು 14 ವರ್ಷಗಳ ಕಾಲ ಶಾಲಾ ಮಕ್ಕಳ ಬಾಡಿಗೆ ನಡೆಸಿದ್ದೇನೆ. ಈಗ ಆ ಕೆಲಸ ಬಿಟ್ಟಿದ್ದೇನೆ. ನನ್ನ ರಿಕ್ಷಾದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಲವು ವರ್ಷಗಳ ಬಳಿಕ ಬೆಂಗಳೂರಿನಿಂದ ಬಂದು ತನ್ನ ವಿವಾಹದ ಆಮಂತ್ರಣ ನೀಡಿದ್ದು, ನನ್ನ ಸೇವಾಬದ್ಧತೆಯ ಗೌರವನ್ನು ಹೆಚ್ಚಿಸಿತ್ತು. ಅನೇಕ ಮಕ್ಕಳ ಹೆತ್ತವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಎಷ್ಟೇ ಕಷ್ಟವಾದರೂ ಬಾಡಿಗೆಯನ್ನು ತಪ್ಪದೇ ಕೊಡುತ್ತಿದ್ದರು. ಈ ಕೆಲಸದಲ್ಲಿ ಸಿಕ್ಕ ತೃಪ್ತಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ.
ಪ್ರಶ್ನೆ: ರಿಕ್ಷಾವನ್ನೇ ಏಕೆ ಆಯ್ಕೆ ಮಾಡಿದ್ದೀರಿ?
ದಿಲೀಪ್: ಇತರ ಯಾವುದೇ ಕೆಲಸವನ್ನು ಇಷ್ಟು ಸ್ವತಂತ್ರವಾಗಿ ಮಾಡಲು ಸಾಧ್ಯವಿಲ್ಲ. ದುಡ್ಡು ಕೊಟ್ಟರೂ ಸಿಗದ ಅವಕಾಶವನ್ನು ರಿಕ್ಷಾ ವೃತ್ತಿ ನೀಡಿದೆ. ನಮ್ಮ ಸಂಘದ ಮೂಲಕ ವಿದ್ಯಾರ್ಥಿಗಳಿಗೆ ನೆರವು, ಆರೋಗ್ಯ ಶಿಬಿರ ಸಹಿತ ಹಲವು ರೀತಿಯ ಸಮಾಜಮುಖೀ ಕೆಲಸಗಳನ್ನು ಮಾಡಿದ್ದೇವೆ. ಅನಾರೋಗ್ಯ ಇದ್ದಾಗಲೂ ಮಕ್ಕಳು, ಹೆತ್ತವರ ಪ್ರೀತಿ, ವಿಶ್ವಾಸಕ್ಕಾಗಿ ಕೆಲಸ ಮಾಡಿದ್ದೇವೆ.
ಚಾಲಕ ವೃತ್ತಿಯ ಆಳ ಅರಿವು ಬಿಚ್ಚಿಟ್ಟ ಸಂವಾದ
ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಹಾಗೂ ವಿಭಿನ್ನತೆಯಿಂದ ಗುರುತಿಸಿಕೊಂಡಿರುವ “ಉದಯವಾಣಿ’ ವಿದ್ಯಾರ್ಥಿಗಳ ಜತೆ ನಿಲ್ಲಿಸಿ ಅನುಭವ ಹಂಚಿಕೊಳ್ಳುವಂತೆ ಮಾಡಿರುವುದು ಉತ್ತಮ ಬೆಳವಣಿಗೆ – ರವಿನಾರಾಯಣ, ಸಂಚಾಲಕರು
“ಉದಯವಾಣಿ’ ಪತ್ರಿಕೆಯಿಂದ, ಇಂತಹ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶಕ್ಕೆ ನಾನು ಅಭಾರಿ. ಸಾಮಾನ್ಯ ಆಟೋ ಚಾಲಕನಾಗಿ ಎಲ್ಲ ರಿಕ್ಷಾ ಚಾಲಕರ ಪರವಾಗಿ ಭಾಗವಹಿಸಲು ಒಪ್ಪಿದೆ.
– ದಿಲೀಪ್ ಮೊಟ್ಟೆತ್ತಡ್ಕ, ರಿಕ್ಷಾ ಚಾಲಕರು
ದಿಲೀಪ್ ಮೊಟ್ಟೆತ್ತಡ್ಕ ಅವರು ತಮ್ಮ 82ರ ಹರೆಯದ ತಾಯಿಯ ಕ್ರಿಯಾಶೀಲತೆಯ ಕುರಿತು ಮಾತನಾಡಿದರು. ತಾಯಿ ಹಾಗೂ ಶಿಕ್ಷಕರು ನಮಗೆ ಅಮೃತವಿದ್ದಂತೆ. ಕಣ್ಣಿಗೆ ಕಾಣುವ ದೇವರು ತಾಯಿಯನ್ನು ಎಂದಿಗೂ ನೋಯಿಸಬಾರದು ಎಂದು ಮಕ್ಕಳಿಗೆ ತಿಳಿಸಿದರು.
ಮಕ್ಕಳ ಪ್ರಶ್ನೆ: ನಿಮಗೆ ಇಷ್ಟು ಒಳ್ಳೆಯ ಗುಣ ಹೇಗೆ ಬಂದಿದ್ದು?
ದಿಲೀಪ್: ಬಡತನವನ್ನು ಮೀರಿ ನಿಲ್ಲುವ ತುಡಿತ, ಸಮಾಜದಿಂದ ಕಲಿತ ಅನುಭವ, ಗುರು ಹಿರಿಯರ ಮಾರ್ಗದರ್ಶನ ಒಂದಷ್ಟು ಸಮಾಜಕ್ಕೆ ಸೇವೆ ನೀಡುವಂತೆ ಮಾಡಿತು. ನಮ್ಮದು ದೊಡ್ಡ ಸಾಧನೆಯಲ್ಲ, ಸಮಾಜಕ್ಕೆ ಅಳಿಲು ಸೇವೆ ಮಾತ್ರ.
ಮಕ್ಕಳ ಪ್ರಶ್ನೆ: ರಿಕ್ಷಾ ಚಾಲಕ ವೃತ್ತಿಗೆ ಪ್ರೇರಣೆ ಯಾರು?
ದಿಲೀಪ್: ಭಗವಂತನೇ ಪ್ರೇರಣೆ. ರಿಕ್ಷಾ ಚಾಲಕನಾಗಬೇಕೆಂದು ಉದ್ದೇಶ ಇರಲಿಲ್ಲ. ಬಡತನ ಇತ್ತು. ಆದರೂ ಎಸೆಸೆಲ್ಸಿ ತನಕ ಓದಿದೆ. ಆಗ ತೋಟದ ಕೆಲಸ, ಪೇಪರ್ ಹಾಕುವುದು, ಚಾಲಕ ಕೆಲಸ ನಿರ್ವಹಿಸುವುದೇ ಮೇಲ್ನೋಟಕ್ಕೆ ಮುಖ್ಯವಾಗಿತ್ತು.
ಮಕ್ಕಳ ಪ್ರಶ್ನೆ: ವೃತ್ತಿಯ ಸಂದರ್ಭ ಕಹಿ ಘಟನೆ ಆಗಿದೆಯೇ?
ದಿಲೀಪ್: ರಿಕ್ಷಾ ಚಾಲನೆಯ ಸಂದರ್ಭ ಹಲವು ಕಹಿ ಘಟನೆಗಳು ನಡೆಯುತ್ತವೆ. ಇತ್ತೀಚೆಗೆ ಬಾಡಿಗೆ ಮಾಡಿಕೊಂಡು 100 ರೂ. ನೀಡಿದ ಮಹಿಳೆ ಚಿಲ್ಲರೆ ಇಲ್ಲ ಎಂದಾಗ “ಮತ್ತೆ ನಿಮಗೆ ರಿಕ್ಷಾ ಯಾಕೆ?’ ಎಂದು ಪ್ರಶ್ನಿಸಿದಾಗ ಬೇಸರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ