ಮುಷ್ಕರಕ್ಕೆ ಬೆಂಬಲವಿಲ್ಲ: ದ.ಕ. ಜಿಲ್ಲಾ ಪೌರ ಕಾರ್ಮಿಕರ ಸಂಘ
Team Udayavani, Feb 1, 2023, 6:45 AM IST
ಮಂಗಳೂರು: ಸಫಾಯಿ ಕರ್ಮಚಾರಿಗಳ ಸಂಘ ಮಂಗಳೂರು ಸಂಘಟನೆಯು ಫೆ. 1ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಪೌರ ಕಾರ್ಮಿಕರನ್ನು ದಾರಿ ತಪ್ಪಿಸಿ, ಅವರಿಗೆ ದ್ರೋಹ ಮಾಡುವ ಉದ್ದೇಶದಿಂದ ನಡೆಯುತ್ತಿದ್ದು, ಆ ಪ್ರತಿಭಟನೆಯನ್ನು ಜಿಲ್ಲೆಯ ಪೌರ ಕಾರ್ಮಿಕರು ಬೆಂಬಲಿಸುವುದಿಲ್ಲ ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘ ಹೇಳಿದೆ.
ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಒಟ್ಟು 578 ಪೌರ ಕಾರ್ಮಿಕರ ನೇರ ನೇಮಕಾತಿಗೆ ಸರಕಾರ ಕ್ರಮ ಕೈಗೊಂಡು ಅರ್ಜಿ ಆಹ್ವಾನಿಸಿದೆ. ಈ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದರು.
ಮನಪಾ ವ್ಯಾಪ್ತಿಯಲ್ಲಿ ಈಗಾ ಗಲೇ 392 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಉಳಿದ 393 ಮಂದಿಯನ್ನು ನೇರ ಪಾವತಿ ಪ್ರಕಾರ ಆಯ್ಕೆ ಮಾಡಲು ಸರಕಾರ ಅರ್ಜಿ ಆಹ್ವಾನಿಸಿದ್ದು, ಫೆ. 13ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ವಿದೆ. ಮಾ. 10ರೊಳಗೆ ಅಂತಿಮ ಪಟ್ಟಿ ಪ್ರಕಟವಾಗಿ ಮಾ. 14ರೊಳಗೆ ಆದೇಶ ಪ್ರತಿ ದೊರೆಯುವುದಾಗಿ ಪೌರಾಡಳಿತ ನಿರ್ದೇಶನಾಲಯ ಈಗಾಗಲೇ ಅಧಿಸೂಚನೆ ಪ್ರಕಟಿಸಿದೆ. ಹೀಗಿರುವಾಗ ಮುಷ್ಕರ ಸರಿಯಲ್ಲ ಎಂದು ಸಂಘದ ಕಾರ್ಯದರ್ಶಿ ಆನಂದ ಎಸ್.ಪಿ. ಹೇಳಿದರು.