ಸುಲಲಿತ ಆನ್ಲೈನ್ ಸಾಲ ಪಡೆದು ವಂಚನೆಗೆ ಒಳಗಾದ ಯುವಕನಿಂದ ಪೊಲೀಸರಿಗೆ ದೂರು
Team Udayavani, Apr 29, 2023, 5:20 AM IST
ಉಪ್ಪಿನಂಗಡಿ: ಯಾವುದೇ ವಿಳಂಬವಿಲ್ಲದೆ ಸಾಲ ನೀಡುವ ಆನ್ಲೈನ್ ಆ್ಯಪ್ಗಳ ಮೂಲಕ ಸಾಲ ಪಡೆದ ಯುವಕನೋರ್ವ ಸಾಲವನ್ನು ಹಿಂತಿರುಗಿಸಿದ ಬಳಿಕವೂ ಸಾಲ ಬಾಕಿ ಇದೆ ಎಂದು ಪ್ರಕಟಿಸಿ ಯುವಕನ ಫೋಟೋವನ್ನು ಅಶ್ಲೀಲ ದೃಶ್ಯಾವಳಿಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಮಾನಹಾನಿಗೊಳಿಸುತ್ತಿರುವ ಕೃತ್ಯದ ವಿರುದ್ಧ ನೊಂದ ಯುವಕ ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿಯ ಹಿತೇಶ್ ಕುಮಾರ್ ಎಂಬ ಯುವಕನೇ ವಂಚನೆಗೆ ತುತ್ತಾದ ನತದೃಷ್ಟನಾಗಿದ್ದು, ಈತ ಸುಲಲಿತವಾಗಿ ಸಾಲ ಒದಗಿಸುವ ಆನ್ಲೈನ್ ಆ್ಯಪ್ ಮೂಲಕ ಸಾಲ ಪಡೆದು, ಸಾಲದ ಮೊತ್ತವನ್ನು ನಿಯಮಿತವಾಗಿ ಮರುಪಾವತಿ ಮಾಡಿರುತ್ತಾರೆ. ಆದಾಗ್ಯೂ ಸಾಲ ಇನ್ನೂ ಬಾಕಿ ಇದೆ ಎನ್ನುತ್ತಾ ಸಂದೇಶ ಕಳುಹಿಸುತ್ತಿದ್ದ ಆ್ಯಪ್ನಲ್ಲಿನ ಮಂದಿ ಮಾನಸಿಕ ಹಿಂಸೆ ನೀಡಲು ಮುಂದಾಗುತ್ತಾರೆ. ಇದಕ್ಕೆ ನಿರ್ಲಕ್ಷ್ಯ ನೀತಿಯನ್ನು ಅನುಸರಿಸಿದಾಗ, ಹಿತೇಶ್ ಕುಮಾರ್ ಅವರ ಭಾವಚಿತ್ರವನ್ನು ಅಶ್ಲೀಲ ದೃಶ್ಯಾವಳಿಗೆ ಜೋಡಿಸಿಕೊಂಡು, ಸದ್ರಿ ದೃಶ್ಯಾವಳಿಗಳನ್ನು ಹಿತೇಶ್ ಅವರ ಗೆಳೆಯರ ಬಳಗಕ್ಕೆ ರವಾನಿಸಿ ತೇಜೋವಧೆ ಮಾಡುತ್ತಿರುವ ಕೃತ್ಯಗಳನ್ನು ಎ. 23ರಿಂದ ಮಾಡುತ್ತಿದ್ದಾರೆಂದು ಆರೋಪಿಸಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.
ಸಾಲದ ಮರುಪಾವತಿಯ ದಾಖಲೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಅಶ್ಲೀಲ ದೃಶ್ಯಾವಳಿಗಳ ದಾಖಲೆಗಳನ್ನು ಲಗತ್ತೀಕರಿಸಿ ನೀಡಲಾದ ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾರಣವಿಲ್ಲದೆ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳಲ್ಲಿ ಇಂತಹ ಬೆದರಿಕೆ ತಂತ್ರಗಳೇ ದುಷೆøàರಣೆ ನೀಡುತ್ತಿದ್ದು, ಸಂತ್ರಸ್ತರು ಯಾವುದೇ ಹಿಂಜರಿಕೆ ಇಲ್ಲದೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ನ್ಯಾಯ ದೊರಕಿಸಿಕೊಳ್ಳಬಹುದೆಂದು ಪೊಲೀಸ್ ಅಧಿಕಾರಿಗಳು ವಿನಂತಿಸಿದ್ದಾರೆ.