Election Update: ಕರ್ನಾಟಕ ಚುನಾವಣಾ ಅಖಾಡಕ್ಕಿಳಿದ ಗೋವಾ ಸಿಎಂ ಪತ್ನಿ
Team Udayavani, Apr 16, 2023, 3:59 PM IST
ಪಣಜಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದೆ. ಪ್ರಧಾನಿ, ಗೃಹ ಸಚಿವರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಪಕ್ಕದ ಗೋವಾದ ಬಿಜೆಪಿ ನಾಯಕರು ಕೂಡ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಗೋವಾ ಸಿಎಂ ಪ್ರಮೋದ್ ಸಾವಂತ್ ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಇದೀಗ ಮುಖ್ಯಮಂತ್ರಿಗಳ ಪತ್ನಿ ಸುಲಕ್ಷಣಾ ಸಾವಂತ್ ಕೂಡ ಕರ್ನಾಟಕದಲ್ಲಿ ಪಕ್ಷದ ಪರ ಪ್ರಚಾರಕ್ಕೆ ಧುಮುಕಿದ್ದಾರೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಪತ್ನಿ ಸುಲಕ್ಷಣಾ ಸಾವಂತ್ ಅವರು ಕರ್ನಾಟಕದ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ಖಾನಾಪುರ ಕ್ಷೇತ್ರದ ಜವಾಬ್ದಾರಿ ನನ್ನ ಹೆಗಲ ಮೇಲಿರುವುದಕ್ಕೆ ನನಗೆ ಹೆಮ್ಮೆ ಇದೆ, ಅಭ್ಯರ್ಥಿ ವಿಠ್ಠಲ್ ಹಲಗೇಕರ ಗೆಲ್ಲುವುದು ಖಚಿತ ಎಂದು ಸುಲಕ್ಷಣಾ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಕಾರ್ಯಕರ್ತರ ಸಮ್ಮುಖದಲ್ಲಿ ಮಂಡಲ ಕಾರ್ಯಕರ್ತರು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಸುಲಕ್ಷಣಾ ಸಾವಂತ್ ಮಾತನಾಡಿದರು.
ಗೋವಾದಿಂದ ಕರ್ನಾಟಕದಲ್ಲಿ ಪ್ರಚಾರಕ್ಕೆ ಹೊರಟಿರುವ ನಾಯಕರ ದೊಡ್ಡ ಸೇನೆ
ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗೋವಾ ಬಿಜೆಪಿ ನಾಯಕರು ಕರ್ನಾಟಕದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗಲಿದ್ದಾರೆ. ಗೋವಾ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಲೋಕೋಪಯೋಗಿ ಸಚಿವ ನೀಲೇಶ್ ಕಬ್ರಾಲ್, ಸಾರಿಗೆ ಸಚಿವ ಮಾವಿನ್ ಗುದಿನ್ಹೊ ಮತ್ತು ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಕೂಡ ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಅಧ್ಯಕ್ಷ ಜೆ.ಕೆ. ಪಿ.ನಡ್ಡಾ ಅವರು ಈ ಪಕ್ಷದ ಜವಾಬ್ದಾರಿಗಳನ್ನು ಘೋಷಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಗೋವಾ ಬಿಜೆಪಿ ಪ್ರಮುಖರಾದ ಮಾವಿನ್ ಗೂಡಿನೊ, ಸುಭಾಷ್ ಶಿರೋಡ್ಕರ್, ನರೇಂದ್ರ ಸಾವಯಿಕರ್, ದಾಮು ನಾಯ್ಕ್, ಶಾಸಕ ಮೈಕಲ್ ಲೋಬೋ, ಪ್ರೇಮೇಂದ್ರ ಶೇಟ್, ಉಲ್ಲಾಸ್ ತುಯೇಕರ್, ದಾಜಿ ಸಾಲ್ಕರ್, ಪ್ರವೀಣ್ ಅರ್ಲೇಕರ್, ಕೇದಾರ್ ನಾಯ್ಕ್ ಮತ್ತು ಮಾಜಿ ಶಾಸಕ ಸಿದ್ಧಾರ್ಥ್ ಕುಂಕೊಳಿಕರ್ ರವರು ಕರ್ನಾಟಕದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.