ಕೃತಜ್ಞತಾ ಭಾವದ ಪೂರ್ಣಿಮೆ
ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ವಿಶೇಷ ಅಂಕಣ
Team Udayavani, Jul 2, 2023, 7:40 AM IST
ಗುರುಪೂರ್ಣಿಮೆ ದಿನವು, ನಮ್ಮ ಆಗು ಹೋಗುಗಳನ್ನು ಅವಲೋಕಿಸುವ ದಿನವಾಗಿದೆ. ನೀವು ಈ ಹಿಂದೆ ಏನನ್ನೆಲ್ಲ ಸಾಧಿಸಿ ಪಡೆದುಕೊಂಡಿರುವುದಕ್ಕೆ ಹಾಗೂ ಮುಂದಿನ ವರ್ಷದಲ್ಲಿ ನೀವು ಮಾಡ ಬೇಕೆಂದು ಕೊಂಡಿರುವ ಎಲ್ಲಕ್ಕೂ ಕೃತಜ್ಞತೆ ಯನ್ನು ತೋರುವ ದಿನವಾಗಿದೆ. ನಮ್ಮ ಪಾಲಿಗೆ ದೊರೆತ ಎಲ್ಲ ಜ್ಞಾನ ಹಾಗೂ ಅನುಗ್ರಹಕ್ಕಾಗಿ ಮತ್ತು ಅದರಿಂದ ನಮ್ಮ ಜೀವನದಲ್ಲಾದ ಪರಿವರ್ತನೆ ಯನ್ನು ನೆನೆದು, ಕೃತಜ್ಞತಾ ಭಾವವನ್ನು ಹೊಂದುವ ದಿನ ಇದಾಗಿದೆ.
ಕೃತಜ್ಞತೆಯನ್ನು ಸಂಭ್ರಮಿಸುವ ಹಾಗೂ ಈ ಜ್ಞಾನವನ್ನು ಸಂರಕ್ಷಿಸಿದ ಗುರು ಪರಂಪರೆಯನ್ನು ಗೌರವಿಸುವ ದಿನವೇ ಗುರು ಪೂರ್ಣಿಮೆ.
ಈ ದಿನದಂದು ನೀವು ಏನ್ನನ್ನು ಬೇಡಿದರೂ ಅದು ಈಡೇರಿಸಲ್ಪಡುತ್ತದೆ ಎಂದು ನಮ್ಮ ಪ್ರಾಚೀನ ಋಷಿಗಳು ನೆಚ್ಚಿದ್ದರು. ಕೋರಲು ಅತ್ಯುನ್ನತ ಮತ್ತು ಪರಮೋಚ್ಚವಾಗಿರುವುದು ಜ್ಞಾನ ಮತ್ತು ಮುಕ್ತಿ.
ಇಂದು ಶಿಷ್ಯನು ತನ್ನ ಪೂರ್ಣತೆಯಲ್ಲಿ ಜಾಗ್ರತನಾ ಗುವ ದಿನ. ಜಾಗ್ರತನಾದವನಿಗೆ ಕೃತಜ್ಞತೆ ಇಲ್ಲದಿರಲು ಸಾಧ್ಯವೇ ಇಲ್ಲ. ಈ ಕೃತಜ್ಞತೆಯು, ನಾನು – ನೀನು ಎಂಬ ದ್ವೈತಭಾವದಿಂದ ಉಂಟಾಗಿರುವುದಲ್ಲ; ಬದಲಾಗಿ ಎರಡೆನ್ನುವುದೇ ಇಲ್ಲ ಎನ್ನುವ ಅದ್ವೈತಭಾವ ದಿಂದ ಮೂಡಿರುವುದು. ಇದು ಯಾವುದೋ ಒಂದು ಜಾಗದಿಂದ ಮತ್ತೂಂದು ಜಾಗಕ್ಕೆ ಚಲಿಸುವ ನದಿಯಂತೆ ಅಲ್ಲ, ಇದು ತನ್ನೊಳಗೆ ಚಲಿಸುತ್ತಿರುವ ಸಾಗರದ ಹಾಗೆ.
ಸಾಧಕರಿಗೆ, ಗುರು ಪೂರ್ಣಿಮೆಯು ಮಹತ್ವದ ದಿನವಾಗಿದೆ, ಒಂದು ರೀತಿಯಲ್ಲಿ ಹೊಸ ವರ್ಷದ ಹಾಗೆ. ಈ ದಿನದಂದು ಸಾಧಕನು ಆಧ್ಯಾತ್ಮಿಕ ಪಥದಲ್ಲಿ ತನ್ನ ಪ್ರಗತಿಯನ್ನು ಪರಿಶೀಲಿಸಿ, ತನ್ನ ನಿಶ್ಚಿತತೆಯನ್ನು ಪುನಃ ದೃಢಗೊಳಿಸಿ, ಗುರಿಯೆಡೆ ಗಮನವಿರಿಸುವ ದಿನ, ಜತೆಗೆ ಮುಂದಿನ ವರ್ಷದಲ್ಲಿ ಏನು ಮಾಡಬೇಕೆಂಬುದನ್ನು ಸಂಕಲ್ಪಿಸುವ ಸುದಿನ.
ಹೇಗೆ ಹುಣ್ಣಿಮೆಯ ಚಂದ್ರನು ಉದಯಿಸಿ ಮತ್ತು ಅಸ್ತಮಿಸುವಂತೇ, ಸಾಧಕನಲ್ಲಿ ಕೃತಜ್ಞತೆಯಿಂದ ಕಂಬನಿಯು ಮೂಡುತ್ತದೆ ಹಾಗೂ ಆತ ತನ್ನಲ್ಲಿಯೇ ಆತ್ಮಸ್ತನಾಗಿ ವಿಶ್ರಾಂತಿಯನ್ನು ಪಡೆಯು ತ್ತಾನೆ. ಗುರು ಪೂರ್ಣಿಮೆ ದಿನದಂದು, “ಈ ಜ್ಞಾನವನ್ನು ಪಡೆಯುವ ಮುನ್ನ ನಾನು ಎಲ್ಲಿದ್ದೆ? ಈಗ ಎಲ್ಲಿದ್ದೇನೆ?” ಎಂದು ಆಲೋಚಿಸಬೇಕು.
“ಈ ಜ್ಞಾನ ನನಗೆ ಇಲ್ಲವಾದಲ್ಲಿ ನಾನು ಹೇಗಿರುತ್ತಿದ್ದೆ” ಎಂದು ತಿಳಿದಾಗ ನಿಮ್ಮಲ್ಲಿ ಕೃತಜ್ಞತೆಯು ಉಕ್ಕಿ ಬರುತ್ತದೆ. ಈ ಹುಣ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ವ್ಯಾಸರು ಅಪಾರವಾದ ಜ್ಞಾನ ರಾಶಿಯನ್ನು 4 ವೇದಗಳಾಗಿ ವಿಂಗಡಿಸಿದ್ದಾರೆ. ಜೀವನದ ಪ್ರತಿಯೊಂದು ಹಂತದಲ್ಲಿ ಒದಗುವ ಆಯುರ್ವೇದ ಆದಿಯಾಗಿ, ವಾಸ್ತುಶಿಲ್ಪ, ರಸವಿದ್ಯೆ, ಔಷಧಶಾಸ್ತ್ರದಂತಹ ಜ್ಞಾನಕ್ಕೆ ಇವರ ಕೊಡುಗೆ ಅಪಾರವಾದದ್ದು.
ಗುರುವು ನಮಗೆ ಧ್ರುವ ನಕ್ಷತ್ರದಂತೆ ಮಾರ್ಗ ದರ್ಶಕ. ವಿಭಿನ್ನ ಪರಿಸ್ಥಿತಿಗಳಲ್ಲಿ ಒಬ್ಬ ಗುರು/ಜ್ಞಾನಿ ಹೇಗೆ ವರ್ತಿಸುತ್ತಿದ್ದರು, ನಾವು ಹಾಗೆಯೇ ವರ್ತಿಸಿ ಅವರನ್ನು ಅನುಸರಿಸುವುದಾಗಿದೆ. ಜ್ಞಾನವಿಲ್ಲದ ಜೀವನ ಜೀವನವೇ ಅಲ್ಲ, ಅದು ಸುಮ್ಮನೇ ಬದುಕಿದಂತೆ. ಜ್ಞಾನ ಮೂಡಿದಾಗ ಜೀವನವು ಪ್ರಾರಂಭವಾಗುತ್ತದೆ. ಈ ಗುರುಪೂರ್ಣಿಮೆ ಯಂದು ನಿಮಗೆ ದೊರೆತ ಎಲ್ಲ ಜ್ಞಾನ ಹಾಗೂ ಅನುಗ್ರಹವನ್ನು ಸ್ಮರಿಸಿ ಮತ್ತು ಕೃತಜ್ಞರಾಗಿ. ಪ್ರತಿ ಯೊಬ್ಬರೂ ಹಾಡುತ್ತಾ, ನಲಿಯುತ್ತಾ ಅಂತರಂಗದ ಆನಂದದಲ್ಲಿ ಮಿಂದೇಳಿ.
ಶ್ರೀ ಶ್ರೀ ರವಿಶಂಕರ ಗುರೂಜಿ