ಐಸಿಸಿ, ಬಿಸಿಸಿಐ ಫಿಕ್ಸಿಂಗ್ ತನಿಖೆ ನಡೆಸಲಿ: ಅರವಿಂದ ಡಿ ಸಿಲ್ವ
ಈಗಾಗಲೇ ತನಿಖೆಗೆ ಆದೇಶಿಸಿ ವರದಿ ಕೇಳಿದ ಶ್ರೀಲಂಕಾ ಸರಕಾರ
Team Udayavani, Jun 22, 2020, 5:55 AM IST
ಕೊಲಂಬೊ: ಐಸಿಸಿ ಮತ್ತು ಬಿಸಿಸಿಐ ಸೇರಿಕೊಂಡು 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ “ಫಿಕ್ಸಿಂಗ್’ ತನಿಖೆ ನಡೆ ಸಲಿ ಎಂಬುದಾಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರವಿಂದ ಡಿ ಸಿಲ್ವ ಆಗ್ರಹಿಸಿದ್ದಾರೆ.
“ಇದು ಭಾರತದಲ್ಲಿ ನಡೆದ ವಿಶ್ವ ಕಪ್ ಫೈನಲ್. ಸಚಿನ್ ತೆಂಡುಲ್ಕರ್ ಅವರ ಕೊನೆಯ ವಿಶ್ವಕಪ್ ಕೂಡ ಆಗಿತ್ತು. ಅವರ ಹಾಗೂ ದೇಶದ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ನಿಷ್ಪಕ್ಷಪಾತ ತನಿಖೆಗೆ ಸೂಚಿಸುವುದು ಭಾರತ ಸರಕಾರದ ಕರ್ತವ್ಯವಾಗಿದೆ. ಐಸಿಸಿ, ಬಿಸಿಸಿಐ ಈ ನಿಟ್ಟಿನಲ್ಲಿ ಮುಂದು ವರಿಯಲಿ. ಭಾರತ ಗೆದ್ದದ್ದು ಫಿಕ್ಸ್ಡ್ ವಿಶ್ವಕಪ್ಪೋ, ಅಲ್ಲವೋ ಎಂಬುದು ಸಾಬೀತಾಗಲಿ’ ಎಂದು ಅರವಿಂದ ಡಿ ಸಿಲ್ವ ಇನ್ಸೈಡ್ ನ್ಪೋರ್ಟ್ ಕಾರ್ಯಕ್ರಮದಲ್ಲಿ ಹೇಳಿದರು.
ವ್ಯತಿರಿಕ್ತ ಪರಿಣಾಮ
“ಭಾರತ ವಿಶ್ವಕಪ್ ಗೆಲ್ಲುವ ಅರ್ಹ ತಂಡವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಗೆಲುವಿನ ಬಳಿಕ ಇಂಥ ಗಂಭೀರ ಆರೋಪ ಕೇಳಿಬಂದಾಗ ಇದು ಅನೇಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದಿನ ಆಯ್ಕೆಗಾರರು, ಆಟ ಗಾರರು, ತಂಡದ ಆಡಳಿತ ಮಂಡಳಿ ಕೆಟ್ಟ ಪರಿಣಾಮವನ್ನು ಎದುರಿಸಲೇಬೇಕಾಗುತ್ತದೆ. ಹೀಗಾಗಿ ಇದನ್ನೆಲ್ಲ ಸೂಕ್ತ ತನಿಖೆ ಮೂಲಕ ಬಗೆಹರಿಸಿಕೊಳ್ಳುವ ಅಗತ್ಯವಿದೆ. ನಾವು ಪ್ರೀತಿಸುವ ಕ್ರೀಡೆಗಿಂತ ಮಿಗಿ ಲಾದದ್ದು ಬೇರೇನೂ ಇಲ್ಲ…’ ಎಂದು ಡಿ ಸಿಲ್ವ ಹೇಳಿದರು.
ಲಂಕಾದ ಅಂದಿನ ಕ್ರೀಡಾ ಸಚಿವ ಮಹಿಂದಾ ನಂದ ಅಲುತಗಾಮಗೆ 2011ರ ಭಾರತ- ಶ್ರೀಲಂಕಾ ನಡುವಿನ ವಿಶ್ವಕಪ್ ಫೈನಲ್ ಫಿಕ್ಸ್ ಆಗಿತ್ತು ಎಂಬ ಸ್ಫೋಟಕ ಹೇಳಿಕೆ ನೀಡಿದ ಬಳಿಕ ಈ ಕುರಿತ ಚರ್ಚೆ ತೀವ್ರಗೊಳ್ಳುತ್ತಿದೆ. ಶ್ರೀಲಂಕಾ ಸರಕಾರ ಈಗಾಗಲೇ ಇದನ್ನು ತನಿಖೆಗೆ ಸೂಚಿಸಿ, ವರದಿ ಯನ್ನು ಕೇಳಿದೆ.