ಬದಲಾವಣೆ ಅವಶ್ಯಕವಾಗಿದೆ !:ಬಿಜೆಪಿ ಕಾರ್ಯಕಾರಿಣಿಯಲ್ಲಿ ನಡ್ಡಾ ಸ್ಪಷ್ಟ ಸಂದೇಶ
ಕರ್ನಾಟಕದಲ್ಲಿ ಪಕ್ಷದ ಕಾರ್ಯದಿಂದ ಸಂತುಷ್ಟಿ ಇಲ್ಲ, ಆದರೆ..
Team Udayavani, Apr 17, 2022, 4:52 PM IST
ಹೊಸಪೇಟೆ : ಬದಲಾವಣೆ ಅವಶ್ಯಕವಾಗಿದೆ. ನಾವು ಬದಲಾವಣೆಯ ಸಾಧನವಾಗಬೇಕು,ದಕ್ಷಿಣ ಭಾರತದಲ್ಲಿ ಪರಿವರ್ತನೆಯ ಮಾರ್ಗ ಕರ್ನಾಟಕದಲ್ಲಿ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾನುವಾರ ಸಂದೇಶವೊಂದನ್ನು ರವಾನಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ”ಕರ್ನಾಟಕದಲ್ಲಿ ಪಕ್ಷದ ಕಾರ್ಯದಿಂದ ಸಂತುಷ್ಟಿ ಇಲ್ಲ, ಆದರೆ… ಮಿಷನ್ ರಿಪೀಟ್ ನಮ್ಮ ಮಂತ್ರ. ದೇಶ ಮೊದಲು, ಪಕ್ಷ ನಂತರ ವ್ಯಕ್ತಿ ಕೊನೆಗೆ ಇದೆ ನಮ್ಮ ಪಕ್ಷದ ಧ್ಯೇಯ” ಎಂದರು.
‘ನಮ್ಮ ದೃಷ್ಟಿ ಮತ್ತು ಗುರಿ ಸ್ಪಷ್ಟವಾಗಿದೆ ನಾವು ಕುರ್ಚಿ ಆಕ್ರಮಿಸಿಕೊಳ್ಳಲು ಇಲ್ಲಿಲ್ಲ, ಶಾಸಕ, ಸಂಸದರಾಗಲು ಇಲ್ಲಿರಬಾರದು ಜನರಲ್ಲಿ, ಸಮಾಜದಲ್ಲಿ ಬದಲಾವಣೆಗಾಗಿ ಕೆಲಸ ಮಾಡುವ ಉಪಕರಣವಾಗಬೇಕು’ ಎಂದರು.
”ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹಳ್ಳಿಗಳು, ಬಡವರು,ವಂಚಿತರು, ಶೋಷಿತರು, ದಲಿತರು, ಮಹಿಳೆಯರು ಶ್ರಮಿಕರು, ಯುವ ಜನಾಂಗದ ಪರಿವರ್ತನೆಗೆ ಬದ್ಧತೆ ಮತ್ತು ಸಮರ್ಪಿತವಾಗಿರುವ ಅಗತ್ಯ ಇದೆ” ಎಂದರು.
‘ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ”ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ, ಇಂಡಿಯನ್ ಅಲ್ಲ, ನ್ಯಾಷನಲ್ ಕೂಡ ಅಲ್ಲ, ಅದು ಕೇವಲ ಎರಡು ರಾಜ್ಯಕ್ಕೆ ಸೀಮಿತವಾಗಿ ಮೂಲೆ ಗುಂಪಾಗಿದೆ’ ಎಂದರು.
ಕುಟುಂಬ ರಾಜಕಾರಣದ ವಿಚಾರ ಪ್ರಸ್ತಾವಿಸಿದ ನಡ್ಡಾ ಅವರು, ‘ಒಡಿಶಾದಲ್ಲಿ ಬಿಜೆಡಿ, ಆಂಧ್ರದಲ್ಲಿ ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ, ಕರ್ನಾಟಕದ ಜೆಡಿಎಸ್ ಎಲ್ಲವೂ ಕೌಟುಂಬಿಕ ಪಕ್ಷಗಳಾಗಿವೆ’ಎಂದರು.
‘ಸಂಪೂರ್ಣತೆಯೊಂದಿದೆ, ಸಮಗ್ರತೆಯೊಂದಿಗೆ ಭವಿಷ್ಯದ ದೃಷ್ಟಿಯಿಂದ ಆಳವಾಗಿ ಹೇಗೆ ಮುಂದೆ ಸಾಗಬೇಕು ಎನ್ನುವುದನ್ನು ತೀರ್ಮಾನಿಸಿದ್ದೀರಿ’ಎಂದರು.
‘ಬರಲಿರುವ ಚುನಾವಣೆಗೆ ಹೇಗೆ ಸಿದ್ದವಾಗಬೇಕು, ಸರಕಾರದ ಕೆಲಸದ ಬಗ್ಗೆ ಹೇಗೆ ಜನರಿಗೆ ಮನವರಿಕೆ ಮಾಡುವುದು ಎನ್ನುವ ಕುರಿತು ತೀರ್ಮಾನಿಸಿದ್ದೀರಿ. ನಮಗೆ ಯಡಿಯೂರಪ್ಪ ಅವರ ಆಶೀರ್ವಾದ ದೊರಕಿದೆ’ ಎಂದರು.
‘ನಾವು ರೈತರಿಗೆ ಮಾಡಿದಷ್ಟು ಕೆಲಸ ಬೇರೆ ಯಾರೂ ಮಾಡಲೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ರೈತರ ಸಶಕ್ತೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿದೆ’ ಎಂದರು.
‘ಕೇಂದ್ರ ಸರಕಾರ ಕರ್ನಾಟಕದಲ್ಲಿ 10 ರೈಲ್ವೆ ಯೋಜನೆಗಳನ್ನು ಅನುಮೋದಿಸಿದೆ ಮತ್ತು ಅವುಗಳಿಗೆ ಹಣಕಾಸಿನ ನೆರವು ನೀಡಿದೆ. ಶೀಘ್ರದಲ್ಲೇ 10 ಹೊಸ ರೈಲು ಮಾರ್ಗಗಳು ಇಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ರಾಜ್ಯದಲ್ಲಿ 46.31 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದರು.
‘ಸಾಂಸ್ಕೃತಿಕ ನಗರಿಗೆ ಬಂದಿರುವುದು ನನ್ನ ಸೌಭಾಗ್ಯ ಎಂದರು. ಕರ್ನಾಟಕ ವಿಶ್ವದ ವೇಗವಾಗಿ ಬೆಳೆಯುವ ಟೆಕ್ನಿಕಲ್ ಹಬ್ ಆಗುತ್ತಿದೆ ಎಂದರು. ಹಂಪಿಯನ್ನು ನೋಡಿದೆ, ತಾಯಿ ಭುವನೇಶ್ವರಿಯ ಆಶೀರ್ವಾದ ಪಡೆಯುವ ಭಾಗ್ಯ ದೊರಕಿತು’ ಎಂದರು.