ಉಪ್ಪಿಗೂ ಭಾವನಾತ್ಮಕ ಬೆಲೆ ತಂದು ಕೊಟ್ಟ ಸತ್ಯಾಗ್ರಹ
Team Udayavani, Apr 12, 2021, 6:55 AM IST
1930ರ ಮಾ. 12ರಿಂದ ಎ. 5ರ ವರೆಗೆ ಗುಜರಾತಿನ ಸಾಬರಮತಿಯಿಂದ ದಾಂಡಿವರೆಗೆ ಉಪ್ಪಿನ ಕಾನೂನು ಮುರಿಯುವ ದಾಂಡೀ ಯಾತ್ರೆ ನಡೆಯಿತು. ಎ. 6ರಂದು ಗಾಂಧೀಜಿ ಅವರು ಉಪ್ಪಿನ ಕಾನೂನು ಮುರಿದರು. ಅನಂತರ ಒಂದು ವಾರ ಕಾಲ ದೇಶಾದ್ಯಂತ ವಿವಿಧೆಡೆ ಸತ್ಯಾಗ್ರಹ ನಡೆಸಲು ಮಾರ್ಗದರ್ಶನ ಕೊಡುವ ಶಿಬಿರಗಳು ನಡೆದವು. ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನವಾದ ಎ. 13ರಂದು ಕರ್ನಾಟಕದ ಕರಾವಳಿ ಸಹಿತ ರಾಜ್ಯದ 40 ಕಡೆ ಮತ್ತು ದೇಶಾದ್ಯಂತ ಉಪ್ಪಿನ ಸತ್ಯಾಗ್ರಹ ನಡೆಯಿತು. ಇದೇ ದಿನ ಸವಿನಯ ಕಾಯಿದೆ ಭಂಗ ಚಳವಳಿಯೂ ಆರಂಭಗೊಂಡಿತು.
“ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧು ವಿಲ್ಲ’ ಎಂಬ ಗಾದೆ ಮಾತು ಇದ್ದರೂ ಉಪ್ಪಿಗೆ ಎಲ್ಲ ಖಾದ್ಯಗಳಲ್ಲಿ ಅನಿವಾರ್ಯ ಪಟ್ಟವಿದ್ದರೂ ಉಪ್ಪಿಗೆ ಆಗಲೂ ಈಗಲೂ ಬೆಲೆ ಕಡಿಮೆಯೆ. “ತಾಯಿಗಿಂತ ಬಂಧುವಿಲ್ಲ’ ಎಂಬ ಗಾದೆ ಮಾತಿನ ಪ್ರಸ್ತುತತೆಯನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಉಪ್ಪಿನ ಮೇಲೂ ಬ್ರಿಟಿಷರು ತೆರಿಗೆ ಹೇರಿ ದುಬಾರಿ ಮಾಡಿದ್ದ ಕಾರಣ ಮತ್ತು ಉಪ್ಪಿನ ತಯಾರಿಕೆ ಮೇಲೆ ನಿರ್ಬಂಧ ಹೇರಿದ್ದ ಕಾರಣ ಗಾಂಧೀಜಿಯವರು ಇದನ್ನೇ ಪ್ರಬಲ ವಸ್ತುವಾಗಿರಿಸಿಕೊಂಡು ಮಾಡಿದ ಹೋರಾಟಕ್ಕೆ ಈಗ 91 ವರ್ಷಗಳಾಗಿವೆ.
ಗಾಂಧೀಜಿಯವರು 1930ರ ಮಾರ್ಚ್ 12ರಂದು ಸಾಬರಮತಿ ಆಶ್ರಮದಿಂದ ಹೊರಟು ಎ. 5 ರಂದು 240 ಮೈಲು ದೂರದ ದಾಂಡಿಯ ಸಮುದ್ರ ಕಿನಾರೆವರೆಗೆ ಕಾಲ್ನಡಿಗೆ ಯಾತ್ರೆಯನ್ನು 78 ಸತ್ಯಾಗ್ರಹಿಗಳೊಂದಿಗೆ ನಡೆಸಿದರು. ಇದುವೇ ದಂಡಿ ಯಾತ್ರೆ, ದಾಂಡಿ ಯಾತ್ರೆ, ಉಪ್ಪಿನ ಸತ್ಯಾಗ್ರಹವೆಂದು ಪ್ರಸಿದ್ಧಿಯಾಯಿತು.
ಕರ್ನಾಟಕದ ಏಕೈಕ ಪ್ರತಿನಿಧಿ
ಎಪ್ರಿಲ್ 6ರ ಮುಂಜಾನೆ ಸಮುದ್ರ ಸ್ನಾನ ಮಾಡಿ ಸತ್ಯಾಗ್ರಹಿಗಳು ಮತ್ತು ಅಲ್ಲಿ ನೆರೆದ ಜನಸಾಮಾನ್ಯರೂ ಸಣ್ಣ ಸಣ್ಣ ತಂಡಗಳಾಗಿ ಪಾತ್ರೆಗಳಲ್ಲಿ ಸಮುದ್ರದ ನೀರನ್ನು ಸಂಗ್ರಹಿಸಿ ಒಲೆ ಹಾಕಿ ನೀರನ್ನು ಕುದಿಸಿ ಉಪ್ಪನ್ನು ತಯಾರಿಸಿ ಉಪ್ಪಿನ ಕಾಯ್ದೆಯನ್ನು ಮುರಿದರು. ಇದರೊಂದಿಗೆ ಉಪ್ಪಿನ ಸತ್ಯಾಗ್ರಹವು ಆರಂಭವಾಗಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಹೋರಾಟದ ಮುಂದಿನ ಕಾರ್ಯಸೂಚಿಯನ್ನು ಒದಗಿಸಿತು. ದಾಂಡೀ ಯಾತ್ರೆಯು ವಿಶ್ವದ ಗಮನವನ್ನು ಸೆಳೆಯಿತು. ಈ ದಾಂಡೀ ಯಾತ್ರೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಏಕೈಕ ಸತ್ಯಾಗ್ರಹಿ ಹಾವೇರಿ ಜಿಲ್ಲೆಯ ಮೈಲಾರ ಮಹದೇವ ಮಾರ್ತಾಂಡ.
ಸಿದ್ಧತೆ ಶಿಬಿರ
ಎಪ್ರಿಲ್ 6ರಂದು ಉಪ್ಪಿನ ಸತ್ಯಾಗ್ರಹ ಆರಂಭ ಆದಂದಿನಿಂದ ಒಂದು ವಾರ ರಾಷ್ಟ್ರೀಯ ವಾರದಂತೆ ಸಿದ್ಧತೆ ಶಿಬಿರಗಳನ್ನು ದೇಶಾದ್ಯಂತ ಆಯೋಜಿ ಸಲಾಯಿತು. ಶಿಬಿರಗಳಲ್ಲಿ ಸಹಸ್ರಾರು ಸ್ವಯಂಸೇವಕರು ತರಬೇತಿ ಪಡೆದು ಸತ್ಯಾಗ್ರಹದ ಕ್ರಮ ಹಾಗೂ ಸಂದೇಶಗಳನ್ನು ಜನತೆಗೆ ಮುಟ್ಟಿಸಿದರು.
ಎ. 13: ದೇಶಾದ್ಯಂತ ಸತ್ಯಾಗ್ರಹ
ಎ. 13ರಂದು ಇಡೀ ದೇಶದಲ್ಲಿ ಅದರಲ್ಲಿಯೂ ವಿಶೇಷವಾಗಿ ಕಡಲ ಕಿನಾರೆಗಳಲ್ಲಿ ಉಪ್ಪಿನ ಸತ್ಯಾಗ್ರಹ ಹಾಗೂ ಕಾಯ್ದೆ ಭಂಗ ಚಳವಳಿ ಆರಂಭಗೊಂಡವು. ಹಳ್ಳಿ ,ಪಟ್ಟಣ, ಊರು ಕೇರಿಗಳಲ್ಲಿ ಉಪ್ಪನ್ನು ತಯಾರಿಸಿ ಮಾರುವ ಪ್ರಕ್ರಿಯೆಗಳು ಆರಂಭವಾದವು.
ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ದಿನ
ಎ. 13ನ್ನು ಆಯ್ದುಕೊಳ್ಳಲು ಕಾರಣ 1919ರ ಇದೇ ದಿನ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆದದ್ದು. ಈ ಘಟನೆಯಿಂದಾಗಿ ಬ್ರಿಟಿಷರ ಬಗ್ಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅಸಹ್ಯ ಉಂಟಾಗಿತ್ತು. ಸವಿನಯ ಕಾಯಿದೆ ಭಂಗ ಚಳವಳಿ (ಸಿವಿಲ್ ಡಿಸ್ಒಬೀಡಿಯನ್ಸ್ ಮೂಮೆಂಟ್) ಭಾಗವಾಗಿ ಉಪ್ಪಿನ ಸತ್ಯಾಗ್ರಹ ಆರಂಭವಾಗಿತ್ತು. ಹೀಗಾಗಿ ಸವಿನಯ ಕಾಯಿದೆ ಭಂಗ ಚಳವಳಿಗೂ ಇದು ನಾಂದಿ ಹಾಡಿತು.
ಅಂಕೋಲಾದಲ್ಲಿ ಪ್ರಧಾನ ಸತ್ಯಾಗ್ರಹ
ಅಖೀಲ ಕರ್ನಾಟಕ ಮಟ್ಟದ ಉಪ್ಪಿನ ಸತ್ಯಾಗ್ರಹ ಅಂಕೋಲಾದಲ್ಲಿ ಎಪ್ರಿಲ್ 13ರಂದು ಆಯೋಜ ನೆ ಗೊಂಡಿತು. ಅಂಕೋಲಾ ಪರಿಸರದಲ್ಲಿ ಉಪ್ಪಿನ ಉತ್ಪಾ ದನೆ ಒಂದು ವೃತ್ತಿಯಾಗಿ ನಡೆಯುತ್ತಿದ್ದ ಕಾರಣ ರಾಜ್ಯ ಮಟ್ಟದ ಕಾರ್ಯಕ್ರಮ ಅಲ್ಲಿ ಆಯೋಜನೆಗೊಂಡಿತ್ತು. ಈಗಲೂ ಅಂಕೋಲಾ, ಗೋಕರ್ಣ ಆಸುಪಾಸಿನಲ್ಲಿ ಉಪ್ಪಿನ ಉದ್ಯಮ ಸಹಕಾರಿ ವ್ಯವಸ್ಥೆಯಲ್ಲಿ ಮುಂದು ವರಿಯುತ್ತಿದೆ. ಅಂಕೋಲಾದಲ್ಲಿ ಎಂ.ಪಿ.ನಾಡಕರ್ಣಿ ನೇತೃತ್ವದಲ್ಲಿ ಉಪ್ಪಿನ ಕಾನೂನನ್ನು ಮುರಿದರೆ,
ಕಾರ್ನಾಡ್ ಸದಾಶಿವರಾವ್, ಡಾ| ನಾ.ಸು. ಹಡೀìಕರ್, ಕುಂದಾಪುರದ ಉಮಾಬಾಯಿ ಮೊದ ಲಾದರು ಭಾಗವಹಿಸಿದ್ದರು. ಕಾನೂನನ್ನು ಲೆಕ್ಕಿಸದೆ ಜನರು ಉಪ್ಪನ್ನು ತಯಾರಿಸಿ ಮಾರಾಟ ಮಾಡಿದರು.
ಮಂಗಳೂರು-ಉಡುಪಿಯಲ್ಲಿ ಚಳವಳಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಉಪ್ಪಿನ ಸತ್ಯಾಗ್ರಹದ ಪ್ರಧಾನ ಶಿಬಿರ ಮಂಗಳೂರಿನಲ್ಲಿ ನಡೆಯಿತು. ಅಂದು ಜಿಲ್ಲೆಯ ಎಲ್ಲ ತಾಲೂಕುಗಳನ್ನು ಪ್ರತಿನಿಧಿಸುವ ಸತ್ಯಾಗ್ರಹಿಗಳು ಸಮುದ್ರದ ನೀರಿನಿಂದ ಉಪ್ಪು ತಯಾರಿಸಿ ಮಾರಾಟ ಮಾಡಿದರು. ಅಲ್ಲಲ್ಲಿ ಪೊಲೀಸರಿಂದ ಲಾಠೀ ಏಟುಗಳು ಬೀಳುತ್ತಿದ್ದರೂ ಹಲವಾರು ಸತ್ಯಾಗ್ರಹಿಗಳು ಜೈಲು ಪಾಲಾಗುತ್ತಿದ್ದರೂ ಉತ್ಸಾಹ ಕುಗ್ಗಿರಲಿಲ್ಲ.
ಉಡುಪಿಯಲ್ಲಿಯೂ ಸೇವಾದಳದಿಂದ ಒಂದು ವಾರದ ಸತ್ಯಾಗ್ರಹ ಶಿಬಿರ ನಡೆದಿತ್ತು. ಎಸ್. ಯು. ಪಣಿಯಾಡಿ ನೇತೃತ್ವದಲ್ಲಿ ಶ್ರೀ ಕೃಷ್ಣ ಮಠದ ಹೆಬ್ಟಾಗಿಲಿ ನಿಂದ ಆರಂಭಿಸಿ ಶ್ರೀ ಕೃಷ್ಣ ಸೇವಾದಳದ ಯುವಕರ ತಂಡ ಮಂಗಳೂರಿನ ಸತ್ಯಾಗ್ರಹ ಶಿಬಿರಕ್ಕೆ ಪಾದಯಾತ್ರೆ ಮಾಡಿ ಜನ ಜಾಗೃತಿ ಮೂಡಿಸಿತು.
2 ಗ್ರಾಂ ಉಪ್ಪು ಎರಡಾಣೆಗೆ ಮಾರಾಟ
ಉಡುಪಿಯಲ್ಲಿ ಮುಂಜಾನೆ ರಥಬೀದಿಯಲ್ಲಿ ಜನರು ಒಟ್ಟು ಸೇರಿ ಮಲ್ಪೆ ವಡಭಾಂಡೇಶ್ವರ ಕಡಲ ಕಿನಾರೆಗೆ ಮೆರವಣಿಗೆ ಹೊರಟರು. ದಾರಿಯುದ್ದಕ್ಕೂ ಜನರು ಸೇರಿಕೊಂಡರು. ವಡಭಾಂಡೇಶ್ವರ ಬಲರಾಮ ದೇವಾಲಯದ ಮುಂದೆ ಒಂದು ಚಿಕ್ಕ ಸಭೆ ನಡೆದ ಬಳಿಕ ಜನರೆಲ್ಲರೂ ಗುಂಪುಗಳಲ್ಲಿ ಸಮುದ್ರದ ನೀರನ್ನು ಪಾತ್ರೆ, ಮಡಿಕೆಗಳಲ್ಲಿ ತಂದು ಕಿನಾರೆಯ ಹತ್ತಿರದ ತೋಟಗಳಲ್ಲಿ ಒಲೆ ಹಾಕಿ ಉಪ್ಪನ್ನು ತಯಾರಿಸಿದರು. ಮೆರವಣಿಗೆ ಮಾಡುತ್ತಾ ಉಪ್ಪನ್ನು ಉಡುಪಿಯ ತನಕವೂ ಮಾರುತ್ತಲೇ ಬಂದರು. ಆಗ ಬಾಲಕರಾಗಿದ್ದ ದಿ| ಎಂ.ವಿ. ಕಾಮತ್ (ಹಿರಿಯ ಪತ್ರಕರ್ತರು, ಪ್ರಸಾರ ಭಾರತಿ ಮಾಜಿ ಅಧ್ಯಕ್ಷರು, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸ್ಥಾಪಕ ಗೌರವ ನಿರ್ದೇಶಕರು) ಅವರೂ ಉಪ್ಪನ್ನು ತಯಾರಿಸಿ ಎರಡು ಗ್ರಾಮ್ ಉಪ್ಪನ್ನು ಎರಡು ಆಣೆಗೆ ಮಾರಾಟ ಮಾಡಿದ್ದ ನೆನಪನ್ನು ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯ ಯನ ಕೇಂದ್ರದ ಸಂಶೋಧಕ ಯು.ವಿನೀತ್ ರಾವ್ ಬಳಿ ಹೇಳಿದ್ದರು. ಆ ಕಾಲದಲ್ಲಿಯೂ ಎರಡು ಗ್ರಾಮ್ ಉಪ್ಪಿಗೆ ಎರಡಾಣೆ ಬೆಲೆ ದುಬಾರಿ. ಆದರೆ ಆಡಳಿತ ವಿರೋಧಿ ಮನೋಭಾವನೆಯಿಂದಾಗಿ ದುಬಾರಿ ಬೆಲೆ ಕೊಟ್ಟು ಜನರು ಖರೀದಿಸಿದ್ದರು ಮತ್ತು ಆಗ ಆಂದೋಲನದ ಭಾವನಾತ್ಮಕ ಬೆಲೆ ಉಪ್ಪಿಗೆ ಬಂದಿತ್ತು.
ತೋನ್ಸೆ ಉಪೇಂದ್ರ ಪೈ ಭಾಗಿ
ಉಡುಪಿಯಲ್ಲಿ ಮಣಿಪಾಲ ಪೈ ಕುಟುಂಬದ ಹಿರಿಯರಾದ ತೋನ್ಸೆ ಉಪೇಂದ್ರ ಪೈ, ಕೊಚ್ಚಿಕಾರ್ ಪಾಂಡುರಂಗ ಪೈ, ಎಂ.ವಿಠuಲ ಕಾಮತ್, ಸಾಂತ್ಯಾರು ಅನಂತಪದ್ಮನಾಭ ಭಟ್, ಮುಕುಂದ ಪೈ, ಆರ್.ಎಸ್.ಶೆಣೈ, ತೋನ್ಸೆ ರಘುನಾಥ ಪೈ, ಸತ್ಯಮಿತ್ರ ಬಂಗೇರ ಮೊದಲಾದವರು ಭಾಗವಹಿಸಿದ್ದರು. ಜೈಲು ಹಾಗೂ ಲಾಠಿಗಳಿಗೂ ಹೆದರದೆ ಜನರು ತಾವು ತಯಾರಿಸಿದ ಉಪ್ಪನ್ನು ಸ್ವಾಭಿಮಾನದ ಸಂಕೇತವಾಗಿ ನೋಡಿದರು.
– ಮಟಪಾಡಿ ಕುಮಾರಸ್ವಾಮಿ