ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷ ಕೋಟೆಯ ಹೊರಗೆ!
Team Udayavani, Mar 11, 2021, 7:20 AM IST
ಥಾಲಿ ತಟ್ಟೆ ನೋಡಿರಬಹುದಲ್ವಾ? ಎರಡೆರಡು ಪಲ್ಯ, ಒಂದು ಚಟ್ನಿ, ಒಂದು ಗಸಿ, ಸಾರು, ಸಾಂಬಾರ್, ಒಂದು ಕಪ್ ಪಾಯಸ, ಅದರ ಮೇಲೆ ಎರಡು ಪೂರಿ-ಹೀಗೆ ತರಹೇವಾರಿ. ಇಡೀ ತಟ್ಟೆ ನೋಡಿದ ಕೂಡಲೇ ಏನೂ ಅರ್ಥವಾಗದವರಂತೆ ಎರಡು ಕ್ಷಣ ಮೌನ ಧರಿಸಬೇಕು. ಗೊಂದಲವೋ ಗೊಂದಲ. ಒಂದೊಂದೇ ಪದಾರ್ಥವನ್ನು ಹೊರಗಿಡುತ್ತಾ ಅಧ್ಯಯನ ಮಾಡಿದರೆ ತಟ್ಟೆಯೊಳಗಿನ ಜೀವಗಳು ತಿಳಿಯಬಹುದು.
ಹೀಗೇ ಆಗಿದೆ ತಮಿಳುನಾಡಿನ ರಾಜಕೀಯ. ಎಷ್ಟು ಪಕ್ಷ ? ಯಾರಿಗೆ ಯಾರು ಬೆಂಬಲ? ಯಾರು ಯಾರೊಂದಿಗೆ ಮೈತ್ರಿ? ಇನ್ಯಾರು ಇನ್ಯಾರೊಂದಿಗೆ ವಿರೋಧ? ಈ ತಂಡದಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು? ಆ ತಂಡದಲ್ಲಿರುವವರ ಸಂಖ್ಯೆ ಎಷ್ಟು? ಎಂದೆಲ್ಲ ಲೆಕ್ಕ ಹಾಕುವಾಗ ಇಡೀ ರಾಜ್ಯದ ರಾಜ ಕಾರಣವೇ ತಿಳಿಯುವುದಿಲ್ಲ.
ಯಾಕೆಂದರೆ ಅಲ್ಲಿ ಇ. ಪಳನಿಸ್ವಾಮಿ ಇದ್ದಾರೆ, ಪನ್ನೀರ್ಸೆಲ್ವಂ ಇದ್ದಾರೆ, ಸ್ಟಾಲಿನ್ ಇದ್ದಾರೆ, ಕಮಲ್ ಹಾಸನ್ ಸಹ ಟ್ರ್ಯಾಕ್ನಲ್ಲಿ ನಿಂತಿದ್ದಾರೆ, ವಿಜಯ ಕಾಂತ್, ಟಿಟಿವಿ ದಿನಕರನ್, ಸೀಮನ್ ಇತ್ಯಾದಿ. ಇವರೆಲ್ಲರದ್ದೂ ಪಕ್ಷಗಳಿವೆ. ಯಾವ ಗ್ರೂಪ್ ಫೋಟೋದಲ್ಲಿ ಯಾರ್ಯಾರು ಇರುತ್ತಾರೆ ಎಂಬುದು ಎಷ್ಟು ಕುತೂಹಲವೋ ಯಾರ ಜೇಬಿಗೆ (ಮತಬುಟ್ಟಿ) ಯಾರ ಕೈ ಎನ್ನುವುದೂ ಅಷ್ಟೇ ಕುತೂಹಲದ್ದು.
ಇಡೀ ದೇಶದಲ್ಲಿ ಒಂದು ಮೈತ್ರಿ, ಎರಡು ಮೈತ್ರಿ ಇರಬಹುದು. ತಮಿಳುನಾಡಿನಲ್ಲಿ ಹಾಗಲ್ಲ. ನಾಲ್ಕು ಮೈತ್ರಿ. ಅದರೊಳಗೆ ಮರು ಮೈತ್ರಿ. ಎನ್ಡಿಎ ಮೈತ್ರಿಕೂಟದಲ್ಲಿ 7 ಪಕ್ಷಗಳಿದ್ದರೆ, ಯುಪಿಎ ಮೈತ್ರಿ ಕೂಟದಲ್ಲಿ 13 ಪಕ್ಷಗಳಿವೆ. ಅದಲ್ಲದೇ ಎಎಂಎಂಕೆ ಮೈತ್ರಿಕೂಟದಲ್ಲಿ 6 ಪಕ್ಷಗಳಿದ್ದರೆ, ಕಮಲಹಾಸನ್ ನೇತೃತ್ವದ ಎಂಎನ್ಎಂ ಜತೆಗೆ ನಾಲ್ಕು ಪಕ್ಷಗಳು ಕೈ ಜೋಡಿಸುತ್ತಿವೆಯಂತೆ. ಇದೆಲ್ಲ ಮುಗಿದ ಮೇಲೆ ಯಾರ ಜತೆಗೂ ಮೈತ್ರಿಯೇ ಬೇಡ ಎನ್ನುವ 13 ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸಲಿವೆಯಂತೆ. ಹೀಗಿದೆ ಅಲ್ಲಿನ ಚುನಾವಣ ಥಾಲಿ !
ತಮಿಳುನಾಡು ಖಂಡಿತಾ ರಾಜಕೀಯವಾಗಿ ದಕ್ಷಿಣ ಭಾರತದಲ್ಲೇ ವಿಚಿತ್ರವಾದ ರಾಜ್ಯ. ರಾಷ್ಟ್ರೀಯ ಪಕ್ಷಗಳೆಂದರೆ ಅಲ್ಲಿನ ಮತದಾರರು ಮುಖ ಕಿವುಚು ವುದೇ ಹೆಚ್ಚು. ಇಲ್ಲಿ ಹೇಗೆ ಎಂದರೆ ಸಾಮಂತ ರಾಜರೇ ಅಖೈರು. ಬಾದಷಹರಿಗೆಲ್ಲ ಪ್ರವೇಶವೇ ಇರುವುದಿಲ್ಲ.
ಈಗ ಪರಿಸ್ಥಿತಿ ಹೇಗಿದೆ? ಆಡಳಿತ ಪಕ್ಷ ಎಐಎಡಿಎಂಕೆ ಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಹಾಗೆಯೇ ಡಿಎಂಕೆ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಬೇರೆ ರಾಜ್ಯಗಳಲ್ಲಿ ಈ ವರಸೆ ಬದಲಾಗಿರುತ್ತಿತ್ತು. ಬಿಜೆಪಿ ಜತೆ, ಕಾಂಗ್ರೆಸ್ ಜತೆ ಉಳಿದವರದ್ದು ಮೈತ್ರಿ ಎಂಬ ವ್ಯಾಖ್ಯಾನ. ಎರಡೂ ಪ್ರಾದೇಶಿಕ ಪಕ್ಷಗಳಿಗೆ ಮೈತ್ರಿಯೇ ಬೇಕಿಲ್ಲ. ಆದರೂ ಯುದ್ಧಕ್ಕೆ ಹೊರಡುವವನಿಗೆ ಕತ್ತಿ ಜತೆಗೆ ಚಾಕೂ ಇರಲಿ ಎಂದು ಇಟ್ಟುಕೊಳ್ಳುವ ಹಾಗೆ.
ತಮಿಳುನಾಡು ರಾಜಕೀಯದಲ್ಲಿ 1967 ರಲ್ಲೇ ರಾಷ್ಟ್ರೀಯ ಪಕ್ಷವನ್ನು ಕೋಟೆಯ ಬಾಗಿಲಲ್ಲೇ ಇರಿಸಿ ಆಗಿದೆ. ಬಾಗಿಲಲ್ಲಿ ಇಣುಕಿ ಯಾರಾದರೂ ಒಳಗೆ ಬನ್ನಿ ಎಂದರೆ ಓಡುವ ಸ್ಥಿತಿ ರಾಷ್ಟ್ರೀಯ ಪಕ್ಷಗಳದ್ದು.
2014 ರಲ್ಲಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪೊನ್ ರಾಧಾಕೃಷ್ಣನ್ ಗೆಲ್ಲುವ ಮೂಲಕ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಿತು. ಇನ್ನೇನಿದ್ದರೂ ಅಧಿಕಾರವೇ ಎಂದು ಹೇಳಲಾಗುತ್ತಿತ್ತು. ಆದರೆ 2019 ರಲ್ಲಿ ಪೊನ್ ರಾಧಾಕೃಷ್ಣನ್ ಸೋತರು. ಆಗ ಇಡೀ ದೇಶದಲ್ಲಿ ಮೋದಿ ಅಲೆ ಇತ್ತು. ಆದರೆ ಅದರ ಪ್ರಭಾವ ರಾಧಾಕೃಷ್ಣನ್ ಅವರ ಕೈ ಹಿಡಿದಿರಲಿಲ್ಲ. ಜತೆಗೆ 2014 ರಿಂದ 2019 ಕ್ಕೆ ಬಿಜೆಪಿ ಗಳಿಸಿದ ಒಟ್ಟೂ ಮತ ಪ್ರಮಾಣವೂ ಶೇ. 5.60 ರಿಂದ 3.70 ಕ್ಕೆ ಇಳಿಯಿತು. ಈಗ ಮತ್ತೆ ಪೊನ್ ರಾಧಾಕೃಷ್ಣನ್ ಕನ್ಯಾಕುಮಾರಿ ಉಪ ಚುನಾವಣೆಯಲ್ಲಿ ಸ್ಫರ್ಧಿಸಿದ್ದಾರೆ. ಅದನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಸಂಸದ ವಸಂತಕುಮಾರ್ ಇತ್ತೀಚೆಗೆ ನಿಧನ ಹೊಂದಿದ್ದ ಕಾರಣ ಉಪ ಚುನಾವಣೆ ನಡೆಯುತ್ತಿದೆ. ಪ್ರಮುಖ ಮೈತ್ರಿಕೂಟದ ನೇತೃತ್ವ ವಹಿಸಿರುವ ಎಐಎಡಿಎಂಕೆ ಹಾಗೂ ಡಿಎಂಕೆ ಎರಡಕ್ಕೂ ಅವುಗಳದ್ದೇ ಕಷ್ಟ-ಸಂಕಷ್ಟಗಳಿವೆ. ಇದರ ಮಧ್ಯೆ ಇತ್ತೀಚಿನ ಸಮೀಕ್ಷೆ ಡಿಎಂಕೆ ಗೆಲ್ಲುವ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಬೀಸಲಿರುವ ರಾಜಕೀಯ ಬಿರುಗಾಳಿ ಫಲಿತಾಂಶ ಬದಲಾಯಿಸುತ್ತದೋ ನೋಡಬೇಕು.
– ಅಶ್ವಘೋಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…