30 ವರ್ಷ ಹಳೆಯ ಪ್ರಕರಣದ ಆರೋಪಿ ಸೆರೆ
Team Udayavani, Jun 22, 2023, 5:08 AM IST
ಕುಂದಾಪುರ/ಸಿದ್ದಾಪುರ: ಶಂಕರ ನಾರಾಯಣ ಠಾಣಾ ವ್ಯಾಪ್ತಿಯಲ್ಲಿ 30 ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣದ ಆರೋಪಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರು ಗ್ರಾಮದ ನಿವಾಸಿ ವಾರಂಟು ಅಸಾಮಿ ಹೊನ್ನ ಅಲಿಯಾಸ್ ಹೊನ್ನಪ್ಪ (55) ನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
1993ರಲ್ಲಿ ಶಂಕರನಾರಾಯಣ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನನ್ನು ಜೂ. 20ರಂದು ಗದಗ ಜಿಲ್ಲೆಯ ಲಕ್ಷೇ¾ಶ್ವರದಲ್ಲಿ ಶಂಕರನಾರಾಯಣ ಪೊಲೀಸರು ಬಂಧಿಸಿದ್ದು, ಜೂ. 21ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಂಕರನಾರಾಯಣ ಗ್ರಾಮದ ಕಾರೇಬೈಲು ಎಂಬಲ್ಲಿ 1993ರಲ್ಲಿ ಈತ ಟೆಲಿಫೋನ್ ಕಂಬಿಗಳ ಮಧ್ಯದಿಂದ ಸುಮಾರು 100 ಮೀಟರ್ ಉದ್ದದ ತಾಮ್ರದ ಕೇಬಲ್ ತಂತಿಯನ್ನು ತುಂಡರಿಸಿ ಕಳವು ಮಾಡಿದ್ದ. ಇದರ ಮೌಲ್ಯ 4 ಸಾವಿರ ರೂ. ಆಗಿದೆ.
ಈತನ ವಿರುದ್ಧ ಮಂಗಳೂರು ಬಂದರು, ಕುಂದಾಪುರ ಠಾಣೆ ಹಾಗೂ ಕಾರ್ಕಳ ಠಾಣೆಗಳಲ್ಲಿಯೂ ಕೇಸು ದಾಖಲಾಗಿದೆ.
ಶಂಕರನಾರಾಯಣ ಠಾಣೆಯ ಉಪ ನಿರೀಕ್ಷಕ ನಾಸೀರ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ಸಿಬಂದಿಗಳಾದ ನಾರಾಯಣ ಹಾಗೂ ರಾಕೇಶ್ ಶೆಟ್ಟಿ ಕಾರ್ಯಚರಣೆಯಲ್ಲಿ ಭಾಗವಹಿಸಿದರು.