ವಿಶ್ವ ಚದುರಂಗ ದಿನ: ಚತುರರ ಚದುರಂಗ ಭಾರತದ ಕೊಡುಗೆ
Team Udayavani, Jul 20, 2023, 7:27 AM IST
ಈ ಯುದ್ಧಕಣದ ಎರಡೂ ಕಡೆಯ ಸೈನ್ಯದಲ್ಲಿ ಸಮ ಬಲ. ಇದು ಕಪ್ಪು-ಬಿಳಿಯ ರಣರಂಗ. ಇಲ್ಲಿ ಗೆಲ್ಲಲು ಬೇಕಾ ಗಿರು ವುದು ಭುಜಬಲವಲ್ಲ; ಬುದ್ಧಿಬಲ. ಚತುರರದ್ದಷ್ಟೇ ದಿಗ್ವಿಜಯ. ಚೌಕಾಕಾರದ ಕಪ್ಪು-ಬಿಳಿ ಅಂಕಣದಲ್ಲಿ ನಮ್ಮ ಒಂದೊಂದು ನಡೆಯ ಮುನ್ನ ನೂರು ಬಾರಿ ಯೋಚಿಸಬೇಕು. ಚತುರರ ಆಟವೆಂಬ ಖ್ಯಾತಿಯ ಚದುರಂಗದ ವೈಖರಿಯೇ ಹೀಗೆ!
ಚದುರಂಗ ವಿಶ್ವದ ಅತ್ಯಂತ ಜನಪ್ರಿಯ ಒಳಾಂಗಣ ಕ್ರೀಡೆಗಳಲ್ಲಿ ಒಂದು. ಸಮೀಕ್ಷೆಯ ಪ್ರಕಾರ ಪ್ರತಿದಿನ 600 ಮಿಲಿಯನ್ಗೂ ಅಧಿಕ ಮಂದಿ ಚೆಸ್ ಆಡುತ್ತಾರೆ. ಈ ಕ್ರೀಡೆಗೆ ಮನೋ ಸಾಮರ್ಥ್ಯ ಪ್ರಾಥಮಿಕ ಅಗತ್ಯ. ಬುದ್ಧಿಗೆ ಕಸರತ್ತು ನೀಡುವ ಚದುರಂಗಕ್ಕೆ ಮಾರುಹೋಗದವರೇ ಇಲ್ಲ. ಇಷ್ಟಕ್ಕೂ ಚದುರಂಗಕ್ಕೆ ಸುಮಾರು 1,500 ವರ್ಷಗಳ ಇತಿಹಾಸವಿದೆ. ಈ ಚದುರಂಗವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಭಾರತದ್ದು.
ಪ್ರತೀ ವರ್ಷ ಜುಲೈ 20 ರಂದು ವಿಶ್ವ ಚೆಸ್ ದಿನ ಆಚರಿಸ ಲಾಗುತ್ತದೆ. 1924ರಲ್ಲಿ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಅಥವಾ ಎಫ್ಐಡಿಇ (ಫೆಡರೇಶನ್ ಇಂಟರ್ನ್ಯಾಶನಲ್ ಡೆಸ್ ಎಚೆಕ್ಸ್)ನ ಸ್ಥಾಪನೆ ಯಾಯಿತು. ಇದರ ನೆನಪಿಗಾಗಿ 1966ರಿಂದ ವಿಶ್ವ ಚೆಸ್ ದಿನವನ್ನು ಆಚರಿಸಲಾಗುತ್ತಿದೆ. ಎಫ್ಐಡಿಇ ಸ್ಥಾಪನೆಯಾಗಿ ಮುಂದಿನ ವರ್ಷಕ್ಕೆ ನೂರು ವರ್ಷ.
ಉಗಮ
ಕ್ರಿ.ಶ. ಆರನೇ ಶತಮಾನದಲ್ಲಿ ಭಾರತದಲ್ಲಿ ಚದು ರಂಗದ ಉಗಮವಾಯಿತು ಎನ್ನಲಾಗುತ್ತದೆ. ಚದುರಂಗ ಪದವು ಸಂಸ್ಕೃತದ “ಚತುರಂಗ” ಪದದಿಂದ ಬಂದದ್ದು, ಇದರ ಅರ್ಥ ನಾಲ್ಕು ಅಂಗಗಳು ಅಥವಾ ಭಾಗಗಳು. ಹಿಂದಿನ ಕಾಲದಲ್ಲಿ ಯುದ್ಧ ತಂತ್ರಗಳನ್ನು ಕಲಿಸುವ ಪಾಠವೇ ಕ್ರಮೇಣ ಈ ಆಟವಾಗಿರಬಹುದು ಎಂಬ ಅಭಿಪ್ರಾಯವೂ ಇದೆ. 10ನೇ ಶತಮಾನದ ಅನಂತರ ಚದುರಂಗ ಭಾರತದಿಂದ ಪರ್ಶಿಯಾ, ಸ್ಪೇನ್, ಯುರೋಪಿಯನ್ ದೇಶಗಳಿಗೂ ವ್ಯಾಪಿಸಿತು. 15ನೇ ಶತಮಾನದ ಬಳಿಕ ಇಂದಿನವರೆಗೂ ಆಟದ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪ್ರಸ್ತುತ ಚಾಲ್ತಿಯಲ್ಲಿರುವ ಚೆಸ್ನ ನಿಯಮವನ್ನು 1968ರಲ್ಲಿ ಪೋರ್ಟೊರಿಕೊದ ಗೇಬ್ರಿಯಲ್ ವಿಸೆಂಟ್ ಮೌರ ರೂಪಿಸಿದ್ದರು.
ಚೆಸ್ ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆದಿದೆ. 1924ರಿಂದ ಎಫ್ಐಡಿಇ ಚೆಸ್ ಒಲಂಪಿ ಯಾಡ್ ಆಯೋಜಿಸುತ್ತಿದ್ದು, 1948ರಿಂದ ವಿಶ್ವ ಚಾಂಪಿಯನ್ ಶಿಪ್ ಅನ್ನು ನಡೆಸುತ್ತಿದೆ. ಅಲ್ಲದೆ ವಿವಿಧ ಪಂದ್ಯಾವಳಿ ಏರ್ಪಡಿಸಿ ಚೆಸ್ ಬೆಳವಣಿಗೆಗೆ ಶ್ರಮಿಸುತ್ತಿದೆ. ಗ್ಯಾರಿ ಕಾಸ್ಪರೋವ್, ಮ್ಯಾಗ್ನಸ್ ಕಾರ್ಲ್ಸನ್, ಬಾಬಿ ಫಿಶರ್, ಜೋಸ್ ರೌಲ್ ಕ್ಯಾಪಬ್ಲಾಂಕಾ, ಭಾರತದ ವಿಶ್ವನಾಥನ್ ಆನಂದ್, ಕೊನೇರು ಹಂಪಿ, ದ್ರೋಣವಲ್ಲಿ ಹರಿಕಾ ಅವರಂತಹ ದಿಗ್ಗಜ ಆಟಗಾರರು ಚೆಸ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ. ಆನ್ಲೈನ್ ಚೆಸ್ ಸ್ಪರ್ಧೆಗಳ ಮೂಲಕ ಮತ್ತಷ್ಟು ಜನರನ್ನು ತಲುಪುತ್ತಿದೆ.
ಭಾರತದ ಹೆಮ್ಮೆ ವಿಶ್ವನಾಥನ್ ಆನಂದ್
ಚೆಸ್ ಎಂದಾಕ್ಷಣ ಭಾರತೀಯರಿಗೆ ಮೊದಲು ನೆನಪಾಗುವುದೇ ವಿಶ್ವನಾಥನ್ ಆನಂದ್. ಐದು ಬಾರಿ ವಿಶ್ವ ಚಾಂಪಿ ಯನ್ ಪಟ್ಟವನ್ನು ಗಿಟ್ಟಿಸಿದ ಇವರು ಚೆಸ್ನ್ನು ಮತ್ತಷ್ಟು ಜನಪ್ರಿ ಯಗೊಳಿಸಿದರು ಎನ್ನಬಹುದು. ಒಬ್ಬ ಚೆಸ್ ಆಟಗಾರ ಗಳಿಸ ಬಹುದಾದ ಅತ್ಯುನ್ನತ ಸ್ಥಾನ ಗ್ರ್ಯಾಂಡ್ಮಾಸ್ಟರ್ ಪದವಿಯನ್ನು 1988ರಲ್ಲಿ ತಮ್ಮ 19ನೇ ವಯಸ್ಸಿನಲ್ಲೇ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಆನಂದ್ ಅವರದ್ದು. 2000, 2007, 2008, 2010, 2012ರಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆದ್ದ ಇವರು ಈ ಪ್ರಶಸ್ತಿ ಗೆದ್ದ ಮೊದಲ ಏಷ್ಯಾದ ಆಟಗಾರ.
ಚದುರಂಗವು ಯುವಜನರಲ್ಲಿ ಆಸಕ್ತಿಯನ್ನು ಮೂಡಿಸ ಬೇಕು. ಭಾರತದಲ್ಲೂ ಚದುರಂಗಕ್ಕೆ ಹಾಗೂ ಅದರ ಆಟ ಗಾರರಿಗೆ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ದರ್ಜೆಯ ಮನ್ನಣೆ ಸಿಗಲಿ. ಇನ್ನಷ್ಟು ಚೆಸ್ ಪ್ರವೀಣರು ದೇಶಕ್ಕೆ ಸಿಗಲಿ ಎಂಬುದೆ ಎಲ್ಲರ ಹಾರೈಕೆ.
ಸುಶ್ಮಿತಾ ನೇರಳಕಟ್ಟೆ