ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Jun 28, 2019, 5:05 AM IST
ಮದ್ಯ, ಪಾನ್ ಉತ್ಪನ್ನ ಸಹಿತ ಬಂಧನ
ಉಪ್ಪಳ: ವಾಹನ ತಪಾಸಣೆಯ ಸಂದರ್ಭದಲ್ಲಿ ಕರ್ನಾಟಕ ಸಾರಿಗೆ ಬಸ್ನಿಂದ ವಿದೇಶಿ ಮದ್ಯ ಮತ್ತು ಪಾನ್ ಉತ್ಪ³ನ್ನಗಳ ಸಹಿತ ಯುವಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಮೂರು ಲೀಟರ್ ಮದ್ಯ ಮತ್ತು 2 ಕಿಲೋ ಪಾನ್ ಉತ್ಪನ್ನಗಳನ್ನು ವಶಪಡಿಸಿಕೊಂಡ ಅಬಕಾರಿ ದಳ ಈ ಸಂಬಂಧ ಕುತ್ತಿಕೋಲ್ ಬೇತೂರುಪಾರ ನಿವಾಸಿ ಚಂದ್ರನ್(28)ನನ್ನು ಬಂಧಿಸಿದೆ.
ವಿಷ ಸೇವಿಸಿ ಸಾವು
ಕಾಸರಗೋಡು: ವಿದ್ಯಾನಗರ ಜರ್ನಲಿಸ್ಟ್ ಕಾಲನಿಯಲ್ಲಿ ಒಲತ್ತಿರಿ ಮೂಲೆಯ ಅಶೋಕನ್ (59) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕನ ಕೊಲೆಯತ್ನ : ಹತ್ತು ವರ್ಷ ಕಠಿನ ಸಜೆ, 50 ಸಾ. ರೂ. ದಂಡ
ಕಾಸರಗೋಡು: ಪೂರ್ವದ್ವೇಷದಿಂದ 2013 ಜನವರಿ 26 ರಂದು ಅಡೂರು ಏವಂದೂರು ತಪಾಸಣ ಕೇಂದ್ರ ಬಳಿ ರಸ್ತೆಯಲ್ಲಿ ಏವಂದೂರು ವಸಂತ ಪಿ.(19) ಅವರಿಗೆ ಇರಿದು ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಡೂರು ಉರ್ಡೂರು ಎಡಪರಂಬದ ಗಿರೀಶ್ ವೈ.(27) ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ) ಐಪಿಸಿ ಸೆಕ್ಷನ್ 326 ಮತ್ತು 307 ರ ಪ್ರಕಾರ ತಲಾ ಐದು ವರ್ಷ ಕಠಿನ ಸಜೆ ಮತ್ತು ತಲಾ 25,000 ರೂ. ದಂಡ ಸಹಿತ ಒಟ್ಟು 10 ವರ್ಷ ಕಠಿನ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ದಂಡ ಪಾವತಿಸದಿದ್ದಲ್ಲಿ ತಲಾ ಮೂರು ತಿಂಗಳಂತೆ ಒಟ್ಟು ಆರು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಿದೆ.
ದಂಡ ಪಾವತಿಸಿದ್ದಲ್ಲಿ ಈ ಮೊತ್ತವನ್ನು ಗಾಯಾಳುವಿಗೆ ನಷ್ಟ ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯ ಹೇಳಿದೆ.
ಜೇಬು ಕಳ್ಳತನ : ಬಂಧನ
ಕುಂಬಳೆ: ಬಸ್ ಪ್ರಯಾಣಿಕ ಸೂರಂಬೈಲಿನ ಇಬ್ರಾಹಿಂ ಅವರ ಜೇಬಿನಿಂದ ಪರ್ಸ್ ಸಹಿತ 15 ಸಾವಿರ ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಿಕೋಟೆ ಪೆರುವಣ್ಣಾಮೂಲಿಯ ಶ್ರೀಜಿತ್ (44)ನನ್ನು ಕುಂಬಳೆ ಪೊಲೀಸರು ಕುಂಬಳೆ ಪೇಟೆಯಿಂದ ಬಂಧಿಸಿದ್ದಾರೆ. ಕುಂಬಳೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಜೇಬು ಕಳ್ಳತನ ನಡೆದಿತ್ತು.
ಪುತ್ರನಿಗೆ ಕೊಲೆ ಬೆದರಿಕೆಯಿದ್ದುದಾಗಿ ತಂದೆಯ ದೂರು
ಬದಿಯಡ್ಕ: ಕಾಲೇಜಿನಿಂದ ಟಿ.ಸಿ. ನೀಡಿ ಕಳುಹಿಸಿದ ಕಾರಣದಿಂದ ಮನನೊಂದ ಪದವಿ ವಿದ್ಯಾರ್ಥಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈಯಲು ಕಾರಣ ಹತ್ಯೆ ಬೆದರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಜೂ. 28ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಸ್ಎಂಎಸ್ ಡಿವೈಎಸ್ಪಿಗೆ ದೂರು ನೀಡುವುದಾಗಿ ಸಾವಿಗೀಡಾದ ಪೆರ್ಲ ಪರ್ತಾಜೆಯ ಅಜಿತ್ (19) ಅವರ ತಂದೆ ಬಾಬು ತಿಳಿಸಿದ್ದಾರೆ. ಇದೇ ವೇಳೆ ಅಜಿತ್ ಆತ್ಮಹತ್ಯೆಗೈಯ್ಯುವ ಮುನ್ನ ಬರೆದಿಟ್ಟದ್ದು ಎನ್ನಲಾದ ಪತ್ರವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಹಲ್ಲೆ ಪ್ರಕರಣ: ಸಜೆ, ದಂಡ
ಕಾಸರಗೋಡು: 2012ರ ಡಿ.24ರಂದು ಆದೂರು ತಪಾಸಣಾ ಕೇಂದ್ರ ಪರಿಸರದ ಮಸೀದಿ ರಸ್ತೆಯಲ್ಲಿ ಆದೂರು ಸಿ.ಎ.ನಗರದ ಮೊಹಮ್ಮದ್ ಹನೀಫಾ (40) ಅವರಿಗೆ ಬೆತ್ತದಿಂದ ಹಲ್ಲೆ ಮಾಡಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಆದೂರು ಕೊಟ್ಟಚ್ಚಾಲ್ ಹೌಸ್ನ ಬಶೀರ್ ಕೆ. (30)ಗೆ ಕಾಸರಗೋಡು ಪ್ರಥಮ ದಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1) ಮೂರು ಸೆಕ್ಷನ್ಗಳಲ್ಲಿ ಒಟ್ಟು ಹತ್ತು ತಿಂಗಳ ಸಜೆ ಹಾಗೂ 7,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಯನ್ನು ಆರು ತಿಂಗಳು ಅನುಭವಿಸುವಂತೆ ತೀರ್ಪಿನಲ್ಲಿ ಹೇಳಿದೆ.
ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತಿಳಿಸಲಾಗಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ವಿದ್ಯುತ್ ಬೇಲಿ ಸ್ಪರ್ಶಿಸಿ ಯುವಕನ
ಸಾವು : ಆರೋಪಿ ಖುಲಾಸೆ
ಕಾಸರಗೋಡು: ಹೊಲಕ್ಕೆ ವನ್ಯ ಜೀವಿಗಳು ನುಗ್ಗಿ ಕೃಷಿ ನಾಶಗೊಳಿಸುವುದನ್ನು ತಡೆಗಟ್ಟಲು ಅಳವಡಿಸಿದ್ದ ವಿದ್ಯುತ್ ಚಾಲಿತ ಬೇಲಿಯಿಂದ ಶಾಕ್ ತಗಲಿ ಯುವಕ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ) ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಆದೂರು ಕುಂಟಾರ್ ಹಂಸತ್ತಡ್ಕ ನಿವಾಸಿ ವೀರೋಜಿ ರಾವ್(82) ಅವರನ್ನು ಖುಲಾಸೆಗೊಳಿಸಿದೆ.
ಕುಂಟಾರು ಉಮಿತ್ತಡ್ಕದ ಎಲ್ಲೋಜಿ ರಾವ್ ಅವರ ಪುತ್ರ ಕಿಶೋರ್ (28) ಅವರು 2014ರ ಅ. 7ರಂದು ರಾತ್ರಿ ಕುಂಟಾರು ಹಂಸತ್ತಡ್ಕದ ಹೊಲದ ಬಳಿ ಅಳವಡಿಸಿದ್ದ ವಿದ್ಯುತ್ ಚಾಲಿತ ಬೇಲಿ ಸ್ಪರ್ಶಗೊಂಡು ಶಾಕ್ ತಗಲಿ ಸಾವನ್ನಪ್ಪಿದ್ದರು. ಈ ಸಂಬಂಧ ಹೊಲದ ಒಡೆಯ ವೀರೋಜಿ ರಾವ್ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಹಲ್ಲೆ ಪ್ರಕರಣ : ಕೇಸು ದಾಖಲು
ಕಾಸರಗೋಡು: ವಿದ್ಯಾನಗರ ಚೆಟ್ಟುಂಗುಳಿಯಲ್ಲಿ ರಿಕ್ಷಾ ಚಾಲಕ ಚೆಟ್ಟುಂಗುಳಿಯ ಅಬ್ದುಲ್ ಅಸೀಸ್ (29), ಹೈದರ್ ಮತ್ತು ಅಮೀರ್ (30) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗುಲ್ಫಾನ್, ಸಿನಾನ್, ಖೈಸರ್, ಸಫಾÌನ್ ಸಹಿತ ಎಂಟು ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.