ಕುಂಬಳೆ: ರೈಲ್ವೇ ಟರ್ಮಿನಲ್ ಪರಿಗಣನೆಯಲ್ಲಿ
Team Udayavani, Sep 21, 2019, 5:58 AM IST
ಕಾಸರಗೋಡು: ರೈಲ್ವೇ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿರುವ ಕುಂಬಳೆ ರೈಲು ನಿಲ್ದಾಣವನ್ನು ರೈಲ್ವೇ ಟರ್ಮಿನಲ್ ಸ್ಟೇಶನ್ ಆಗಿ ಭಡ್ತಿಗೊಳಿಸುವ ಕುರಿತಾಗಿ ಪರಿಗಣನೆಯಲ್ಲಿದೆ. ಉತ್ತರ ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈಲು ಗಾಡಿಗಳು ಪ್ರಯಾಣ ಆರಂಭಿಸಲು ಸಾಧ್ಯತೆಯ ಕುರಿತು ದಕ್ಷಿಣ ರೈಲ್ವೇ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆ ರೈಲು ನಿಲ್ದಾಣ ಸೂಕ್ತ ಸ್ಥಳ ಎಂಬುದಾಗಿ ಕಂಡುಕೊಂಡಿದೆ. ಕುಂಬಳೆ ರೈಲು ನಿಲ್ದಾಣದಲ್ಲಿ ಈ ಯೋಜನೆಗೆ ಸಾಕಷ್ಟು ಸ್ಥಳಾವಕಾಶವಿದೆ ಎಂಬುದಾಗಿ ದಕ್ಷಿಣ ರೈಲ್ವೇ ಅಧಿಕಾರಿಗಳ ಅಂಬೋಣವಾಗಿದೆ.
ಪ್ರಸ್ತುತ ಕೇರಳಕ್ಕೆ ಪ್ರಮುಖ ಎಕ್ಸ್ ಪ್ರಸ್ ರೈಲುಗಾಡಿಗಳು ಮಂಗಳೂರಿನಿಂದ ಹೊರಡುತ್ತವೆ. ಪಾಲಾ^ಟ್ ವಿಭಾಗದ ಮಂಗಳೂರು ರೈಲು ನಿಲ್ದಾಣದಿಂದ ಕೇರಳಕ್ಕೆ ಹೆಚ್ಚಿನ ರೈಲುಗಾಡಿಗಳನ್ನು ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕರ್ನಾಟಕದ ವಿವಿಧೆಡೆಗೆ ಹೆಚ್ಚಿನ ರೈಲು ಗಾಡಿಗಳನ್ನು ಮಂಗಳೂರಿನಿಂದ ಆರಂಭಿಸಬೇಕೆಂಬ ಬೇಡಿಕೆ ಇದೆ. ಕಣ್ಣೂರಿನಿಂದ ಜನಶತಾಬ್ದಿ ಸಹಿತ ಕೆಲವು ರೈಲುಗಾಡಿಗಳು ದಕ್ಷಿಣ ಕೇರಳಕ್ಕೆ ಇದೆಯಾದರೂ, ಇದರಿಂದ ಕಾಸರಗೋಡು ಜಿಲ್ಲೆಯ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಿಲ್ಲ. ಈ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ 12 ಕಿ.ಮೀ. ದೂರದಲ್ಲಿರುವ ಕುಂಬಳೆ ರೈಲು ನಿಲ್ದಾಣವನ್ನು ಟರ್ಮಿನಲ್ ಸ್ಟೇಶನ್ ಆಗಿ ಭಡ್ತಿಗೊಳಿಸುವ ಬಗ್ಗೆ ಪರಿಗಣಿಸುತ್ತಿದೆ.
ಪ್ರಸ್ತುತ ಎರ್ನಾಕುಳಂ ಜಂಕ್ಷನ್, ತಿರುವನಂತಪುರ ಜಂಕ್ಷನ್, ಕೊಚ್ಚುವೇಲಿ ಕೇರಳದ ಪ್ರಮುಖ ಟರ್ಮಿನಲ್ ಸ್ಟೇಶನ್ಗಳಾಗಿವೆ. ತಿರುವನಂತಪುರದಲ್ಲಿ ನೇಮಂ ಟರ್ಮಿನಲ್ ಸ್ಟೇಶನ್ ಸ್ಥಾಪಿಸಲು ಸಮಗ್ರ ಯೋಜನೆಯ ವರದಿಯನ್ನು ಈ ತಿಂಗಳಾಂತ್ಯದಲ್ಲಿ ರೈಲ್ವೇ ಮಂಡಳಿಗೆ ದಕ್ಷಿಣ ರೈಲ್ವೇ ಸಲ್ಲಿಸಲಿದೆ.
ದಕ್ಷಿಣ ಕೇರಳದಲ್ಲಿ ಕೊಲ್ಲಂನಿಂದ ಹೆಚ್ಚಿನ ರೈಲು ಗಾಡಿಗಳನ್ನು ಓಡಿಸುವ ಸಲುವಾಗಿ ಇಲ್ಲಿ ಪಿಟ್ ಲೈನ್ ಸ್ಥಾಪಿಸುವ ಸಾಧ್ಯತೆಯಿದೆ ಎಂದು ರೈಲ್ವೇ ಅಧಿಕಾರಿಗಳು ಸೂಚಿಸಿದ್ದಾರೆ. ದಕ್ಷಿಣ ರೈಲ್ವೇ ಈ ಬಗ್ಗೆ ಶೀಘ್ರವೇ ರೈಲ್ವೇ ಮಂಡಳಿಗೆ ಶಿಫಾರಸು ಮಾಡಲಿದೆ.
ಉಪ್ಪಳದಲ್ಲಿ ನಿಲುಗಡೆ
ಲೋಕಮಾನ್ಯ ತಿಲಕ್ ಮತ್ತು ಕುರ್ಲಾ ಎಕ್ಸ್ಪ್ರೆಸ್ಗೆ ಉಪ್ಪಳದಲ್ಲಿ ನಿಲುಗಡೆ ನೀಡುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಬೆಳಗ್ಗೆ 8.30 ರ ಬಳಿಕ ಮಧ್ಯಾಹ್ನ 12.30 ರ ವರೆಗೆ ಕಾಸರಗೋಡಿನಿಂದ ಕಲ್ಲಿಕೋಟೆಗೆ ರೈಲು ಸಂಚಾರ ಇಲ್ಲದಿರುವುದರಿಂದ ತಲೆದೋರುವ ಸಮಸ್ಯೆಯನ್ನು ಹೊರತುಪಡಿಸಲು ಮಂಗಳೂರು-ಕಲ್ಲಿಕೋಟೆ ಮೆಮು ಸರ್ವೀಸ್ ರೈಲು ಆರಂಭಿಸುವ ವಿಷಯವನ್ನು ರೈಲ್ವೇ ಪರಿಗಣಿಸುತ್ತಿದೆ.
ಜನಪ್ರತಿನಿಧಿಗಳ ಸಂದರ್ಶನ
ಕಾಸರಗೋಡು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 16 ರೈಲು ನಿಲ್ದಾಣಗಳಿವೆ. ಈ ಪೈಕಿ ಮೂರು ನಿಲ್ದಾಣಗಳು ಎ ಕ್ಲಾಸ್ಗಳಾಗಿವೆ. ಹತ್ತು ಆದರ್ಶ ರೈಲು ನಿಲ್ದಾಣಗಳಾಗಿವೆ. ಪ್ರಯಾಣಿಕರಿಗೆ ಅಗತ್ಯವುಳ್ಳ ಎಲ್ಲ ಆಧುನಿಕ ಮಾದರಿಯ ಸೌಲಭ್ಯಗಳನ್ನು ಜಾರಿಗೊಳಿಸುವುದರ ಅಂಗವಾಗಿ ರೈಲು ನಿಲ್ದಾಣಗಳನ್ನು ಪ್ರತ್ಯೇಕ ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಅದರ ಆಧಾರದಲ್ಲಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸಹಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್ಲ ರೈಲು ನಿಲ್ದಾಣಗಳನ್ನು ನೇರವಾಗಿ ಸಂದರ್ಶಿಸಲು ಹಾಗು ಮೂಲಭೂತ ಸೌಕರ್ಯಗಳನ್ನು ಅತ್ಯಗತ್ಯವಾಗಿ ಏರ್ಪಡಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ವಿವಿಧ ಬೇಡಿಕೆಗಳು
ಕಾಸರಗೋಡು ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್ಗಳನ್ನು ಸ್ಥಾಪಿಸಬೇಕು. ಹೊಸಂಗಡಿ, ಕೋಟಿಕುಳಂನಲ್ಲಿ ಮೇಲ್ಸೇತುವೆ ನಿರ್ಮಿಸಬೇಕು, ತೃಕ್ಕರಿಪುರ ಇಳಂಬಚ್ಚಿ, ತಲಾಡಲಂ, ಚಂದೇರ, ಮಯ್ಯಿàಚ, ಪಳ್ಳಂ, ಆರಿಕ್ಕಾಡಿ, ಕುಂಬಳೆ ರೈಲ್ವೇ ಸೇತುವೆಯಡಿ ಮಳೆ ನೀರು ತುಂಬಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು, ಮಂಜೇಶ್ವರದಲ್ಲಿ ಸಬ್ವೇ ಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಲಾಗಿದೆ.
ಅತ್ಯುತ್ತಮ ರೈಲು ಸೌಕರ್ಯ
ಕಾಸರಗೋಡು ಜಿಲ್ಲೆಯಲ್ಲಿ ರೈಲು ಸಾರಿಗೆ ಸೌಕರ್ಯವನ್ನು ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುವ ರೀತಿಯಲ್ಲಿ ಹೆಚ್ಚಿಸುವ ಯೋಜನೆಗಳು ಸಾರ್ಥಕತೆಯತ್ತ ಸಾಗುತ್ತಿವೆ. ಅದರಂತೆ ರಾಜ್ಯದ ಜಿಲ್ಲೆಯ ಅತ್ಯುತ್ತಮ ಪ್ರಧಾನ ರೈಲು ನಿಲ್ದಾಣವಾಗಿರುವ ಕಾಸರಗೋಡಿನಲ್ಲಿ ಪ್ರಯೋಗಾರ್ಥವಾಗಿ ಆರಂಭಿಸಲಾದ ದೀರ್ಘದೂರ ರಾಜಧಾನಿ ಎಕ್ಸ್ಪ್ರೆಸ್ ರೈಲುಗಾಡಿಗೆ ನಿಲುಗಡೆ ವ್ಯವಸ್ಥೆಯನ್ನು ಖಾಯಂಗೊಳಿಸುವುದಾಗಿ ತಿರುವನಂತಪುರದಲ್ಲಿ ನಡೆಸಲಾದ ರೈಲ್ವೇ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಅಲ್ಲದೆ ದೀರ್ಘ ಕಾಲದಿಂದ ಪ್ರಯಾಣಿಕರು ಬೇಡಿಕೆಯೊಡ್ಡುತ್ತಿರುವ ಚೆರ್ವತ್ತೂರು ನಿಲ್ದಾಣದಲ್ಲಿ ಪರಶುರಾಮ ಎಕ್ಸ್ಪ್ರೆಸ್ಗೆ ನಿಲುಗಡೆ ಮಂಜೂರು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಂಗಳೂರು ವರೆಗೆ ವಿಸ್ತರಣೆ
ಇದೀಗ ಕಣ್ಣೂರಿನಲ್ಲಿ ಸಂಚಾರ ಕೊನೆಗೊಳ್ಳುವ ಆಲಪ್ಪುಳ-ಕಣ್ಣೂರು ಎಕ್ಸ್ಪ್ರೆಸ್, ಎರ್ನಾಕುಳಂ – ಕಣ್ಣೂರು ಎಕ್ಸ್ಪ್ರೆಸ್, ಕಣ್ಣೂರು ಜನಶತಾಬ್ದಿ ಮುಂತಾದ ರೈಲುಗಳನ್ನು ಮಂಗಳೂರಿನ ವರೆಗೆ ವಿಸ್ತರಿಸಬೇಕು. ಹಾಗಿದ್ದಲ್ಲಿ ಮಾತ್ರವೇ ಕಾಸರಗೋಡು ಜಿಲ್ಲೆಯ ಜನರಿಗೆ ಪ್ರಯೋಜನವಾಗಲಿದೆ.