ಮದ್ಯ ಬಾಟಲಿ, ಸಿಗರೇಟ್ ತುಂಡು-ಗುಟ್ಕಾ ಪ್ಯಾಕೆಟ್!
Team Udayavani, Dec 1, 2018, 1:05 PM IST
ಮಹಾನಗರ: ಅಲ್ಲಲ್ಲಿ ಬಿದ್ದಿರುವ ಬಿಯರ್ ಬಾಟಲ್ಗಳು, ಸಿಗರೇಟ್, ಗುಟ್ಕಾ ಪ್ಯಾಕೆಟ್ಗಳು, ತುಕ್ಕು ಹಿಡಿದಿರುವ ಕಬ್ಬಿಣದ ರಾಶಿ! ಇವುಗಳ ನಡುವೆ ಆಟವಾಡುತ್ತಿರುವ ಪುಟಾಣಿ ಮಕ್ಕಳು. ಇದು ನಗರದ ಕದ್ರಿ ಪಾರ್ಕ್ನ ವಾಸ್ತವ ಕಥೆ.
ಪ್ರತಿನಿತ್ಯ ನೂರಾರು ಮಕ್ಕಳು, ಹೆತ್ತವರು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ಬಂದು ಹೋಗುವ ನಗರದ ಬಹುದೊಡ್ಡ ಹಾಗೂ ಜನಪ್ರಿಯವಾಗಿರುವ ಈ ಪಾರ್ಕ್ ಇದೀಗ ಸುಮಾರು ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಆದರೆ ಕಿಡಿಗೇಡಿಗಳ ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿ ಸಫಲವಾಗಿಲ್ಲ.
ಅಕ್ರಮ ಚಟುವಟಿಕೆ
ಪಾರ್ಕ್ ಒಳಗಿರುವ ಗಂಗನಪಳ್ಳ ಕೊಳ ಮತ್ತು ಬಿದಿರು ಪಾರ್ಕ್ ಪಕ್ಕದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎನ್ನುವುದಕ್ಕೆ ಅಲ್ಲೇ ಬಿದ್ದಿರುವ ಬಿಯರ್ ಬಾಟಲ್ಗಳೇ ಸಾಕ್ಷಿ. ಇದರ ಕೂಗಳತೆ ದೂರದಲ್ಲಿ ಅಧಿಕಾರಿಗಳ ಕಚೇರಿ ಇದ್ದು, ಈ ಪ್ರದೇಶದ ಸುತ್ತ-ಮುತ್ತ ಬಿದಿರು, ಪೊದೆಗಳಿಂದ ಆವೃತ್ತವಾಗಿದೆ. ಹಾಗಾಗಿ ಪಾರ್ಕ್ಗೆ ಆಗಮಿಸುವ ಹೆಚ್ಚಿನ ಮಂದಿ ಅಲ್ಲಿಗೆ ಹೋಗುವುದಿಲ್ಲ. ಇದರಿಂದ ಕೆಲವು ಪುಂಡರು ಈ ಪ್ರದೇಶವನ್ನು ಅಕ್ರಮ ಚಟುವಟಿಕೆಗಳ ತಾಣವನ್ನಾಗಿಸುತ್ತಿದ್ದಾರೆ.
ಸಿಸಿ ಕೆಮರಾಗಳಿಲ್ಲ
ಪೋಲಿಗಳ ಕಾಟ ಹೆಚ್ಚುತ್ತಿದ್ದರೂ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಪಾರ್ಕ್ ಒಳಗೆ ಸಿಸಿ ಕೆಮರಾಗಳಿಲ್ಲ. ಕದ್ರಿ ಪಾರ್ಕ್ನೊಳಗೆ ಸದ್ಯ ಕೇವಲ ಎರಡು ಮಂದಿ ಸಿಬಂದಿಯಿದ್ದಾರೆ. ಇದೇ ಕಾರಣಕ್ಕೆ ಪಾರ್ಕ್ ಮೂಲೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆದರೆ ಯಾರಿಗೂ ತಿಳಿಯುತ್ತಿಲ್ಲ.
ಸ್ಥಳೀಯರೊಬ್ಬರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಗಂಗನಪಳ್ಳ ಕೊಳ ಪಕ್ಕದ ಲ್ಲಿರುವ ಪಾರ್ಕ್ನ ಆವರಣ ಗೋಡೆ ಇದ್ದು, ಅದು ಎತ್ತರವಾಗಿಲ್ಲ. ಹಾಗಾಗಿ ಅದನ್ನು ಹಾರಿ ಕೆಲವು ಮಂದಿ ಪಾರ್ಕ್ಗೆ ಪ್ರವೇಶಿಸುತ್ತಾರೆ. ಪಾರ್ಕ್ ಪ್ರವೇಶ ಸಮಯ ರಾತ್ರಿ 8 ಗಂಟೆಯವರೆಗೆ ಇದ್ದು, ಇದನ್ನು ಕಡಿತಗೊಳಿಸಬೇಕು ಎಂದಿದ್ದಾರೆ.
ಕೂಗಳತೆ ದೂರದಲ್ಲಿದೆ ಪೊಲೀಸ್ ಠಾಣೆ !
ಕದ್ರಿ ಪಾರ್ಕ್ನಿಂದ ಕೂಗಳತೆ ದೂರದಲ್ಲಿ ಕದ್ರಿ ಪೊಲೀಸ್ ಠಾಣೆ ಇದೆ. ಕೆಲವೊಂದು ಬಾರಿ ಪೊಲೀಸರು ಪಾರ್ಕ್ನೊಳಗೆ ಗಸ್ತು ತಿರುಗಲು ಬರುತ್ತಾರೆ. ಹಾಗಂತ ಪೊಲೀಸ್ ಇಲಾಖೆ ವತಿಯಿಂದ ಪಾರ್ಕ್ ಒಳಗಡೆ ಯಾವುದೇ ಭದ್ರತಾ ಸಿಬಂದಿಯಿಲ್ಲ. ಪಾರ್ಕ್ ಒಳಗಡೆ ಇರುವ ಇಬ್ಬರು ಕೆಲಸಗಾರರೇ ಪಾರ್ಕ್ ಡ್ನೂಟಿ ಕೂಡ ಮಾಡುತ್ತಾರೆ. ಅಲ್ಲದೆ, ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಓರ್ವ ಭದ್ರತಾ ಸಿಬಂದಿ ಕಾರ್ಯನಿರ್ವಹಿಸುತ್ತಾರೆ.
ಹೆಸರಿಗಷ್ಟೇ ಫಲಕ
ಪಾರ್ಕ್ ಒಳಗಡೆ ಮದ್ಯಪಾನ, ಧೂಮಪಾನಕ್ಕೆ ಅವಕಾಶವಿಲ್ಲ, ಪಾರ್ಕ್ ಒಳಗಡೆ ಕಸ-ಕಡ್ಡಿ, ಪ್ಲಾಸ್ಟಿಕ್ ಹಾಕಬಾರದು ಎಂದು ನಾಮಫಲಕಗಳನ್ನು ಹಾಕಲಾಗಿದೆ. ಆದರೆ ಈ ನಾಮಫಲಕಗಳ ಕೆಳಗೇ ಬಿಯರ್ ಬಾಟಲಿಗಳು, ಪ್ಲಾಸ್ಟಿಕ್, ಕಸ-ಕಡ್ಡಿಗಳು ಕಾಣುತ್ತಿರುವುದು ವಿಪರ್ಯಾಸ.
ಪ್ರವೇಶ ದ್ವಾರದ ಬಳಿ ಮತ್ತೊಂದು ಗೇಟ್
ಪ್ರವೇಶ ದ್ವಾರದ ಪಕ್ಕದಲ್ಲಿ ಅಂದರೆ ಪಾರ್ಕ್ ಒಳಗಡೆ ಹಳೆಯ ಗೇಟ್ ಇಡಲಾಗಿದ್ದು, ಅದು ತುಕ್ಕು ಹಿಡಿದು ಪಾರ್ಕ್ ಸೌಂದರ್ಯವನ್ನು ಹಾಳುಗೆಡವುದರ ಜತೆಗೆ ಅಪಾಯಕಾರಿಯಾಗಿದೆ.
ಕ್ರಮ ಕೈಗೊಳ್ಳುತ್ತೇನೆ
ಕದ್ರಿ ಪಾರ್ಕ್ ಒಳಗೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ. ಪಾರ್ಕ್ ಸುತ್ತಲೂ ಗಸ್ತು ತಿರುಗುವಂತೆ ಭದ್ರತಾ ಸಿಬಂದಿಗೆ ತಿಳಿಸಲಾಗಿದೆ.
– ಜಾನಕಿ,
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ
ಸೂಚನೆ ನೀಡಿದ್ದೇನೆ
ಕದ್ರಿ ಪಾರ್ಕ್ ಒಳಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎನ್ನುವುದರ ಬಗ್ಗೆ ಸ್ಥಳೀಯರು ನನ್ನ ಬಳಿ ಈಗಾಗಲೇ ಹೇಳಿದ್ದಾರೆ. ಕೂಡಲೇ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜತೆಗೆ ಭದ್ರತೆಯ ಬಗ್ಗೆ ಸ್ಥಳೀಯ ಕದ್ರಿ ಪೊಲೀಸ್ ಠಾಣೆ ಇನ್ಸ್ಪೆಪೆಕ್ಟರ್ ಜತೆ ಮಾತನಾಡಿದ್ದೇನೆ. ಮುಂದಿನ ಕೆಲ ದಿನದಲ್ಲಿಯೇ ಸಿ.ಸಿ. ಕೆಮರಾ ಅಳವಡಿಸಲು ನಿರ್ದೇಶನ ನೀಡುತ್ತೇನೆ.
– ಡಿ. ವೇದವ್ಯಾಸ
ಕಾಮತ್, ಶಾಸಕ