ತುಳುನಾಡಿನ ಆಚರಣೆಗಳು ಮುಂದಿನ ಪೀಳಿಗೆಗೆ ಮಾದರಿ: ಪದ್ಮನಾಭ ಕೋಟ್ಯಾನ್
Team Udayavani, Jul 30, 2018, 12:13 PM IST
ಮೂಲ್ಕಿ: ತುಳು ನಾಡಿನ ಆಚರಣೆ, ಜೀವನ ಪದ್ಧತಿ ಹಾಗೂ ಸಂಸ್ಕೃತಿಯನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಆಟಿ ತಿಂಗಳ ವಿಶೇಷತೆಯನ್ನು ಸಾರುವ ಆಟಿಡೊಂಜಿ ದಿನ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.
ಅವರು ಮೂಲ್ಕಿ ಯುವವಾಹಿನಿಯಿಂದ ನಡೆದ 16ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ತರಕಾರಿ ಕೊಯ್ಯುವ ಮೂಲಕ ಉದ್ಘಾಟಿಸಿ, ಮಾತನಾಡಿದರು. ಆಟಿ ತಿಂಗಳು ಉದ್ಯೋಗವಿಲ್ಲದೆ ಆರ್ಥಿಕ ಮುಗ್ಗಟ್ಟಿನಿಂದ ಕೂಡಿದ ಕಷ್ಟದ ದಿನಗಳಿದ್ದ ತಿಂಗಳಾಗಿರಬಹುದು. ಆದರೆ ಅನಿಷ್ಟದ ದಿನಗಳು ಎಂಬ ಮಾತು ಸರಿಯಲ್ಲ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಯುವ ವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಸಸಿಹಿತ್ಲು ವಹಿಸಿದ್ದರು.
ಸಮ್ಮಾನ
ಕಾರ್ಯಕ್ರಮದಲ್ಲಿ ಆಟಿದ ತಮ್ಮಣ ವಿಶೇಷ ಸಮ್ಮಾನವನ್ನು ಹಳೆಯಂಗಡಿಯ ಸಮಾಜ ಸೇವಕ ಹಾಗೂ ಪ್ರಗತಿಪರ ಕೃಷಿಕ ತಿಮ್ಮಪ್ಪ ಅಮೀನ್ ನಾನಿಲ್ ಅವರಿಗೆ ನೀಡಿ ಗೌರವಿಸಲಾಯಿತು. ಅಭಿನಂದನಾ ಭಾಷಣವನ್ನು ರಾಜೀವಿ ವಿಶ್ವನಾಥ್ ಮಾಡಿದರು. ಸಮಾರಂಭದ ಉದ್ದಕ್ಕೂ ಮೊದಲು ಅರೆ ಪುದ ಅಡ್ಡೆ, ಚಾ, ಕಾಫಿ, ಉರಿ ಕಡ್ಲೆ, ಹಲಸಿನ ಹಪ್ಪಳ, ಓಲೆ ಬೆಲ್ಲ ನೀರು,
ಗೆಣಸಿನ ಪೂಲ್ ಅನ್ನು ಸಭೆಗೆ ವಿತರಣೆ ನಡೆಯಿತು.
ತುಳುನಾಡ ಖಾದ್ಯಗಳು
ಅನಂತರ ನಡೆದ ಊಟದ ವ್ಯವಸ್ಥೆಯಲ್ಲಿ ಆಟಿ ತಿಂಗಳ ವಿಶೇಷ ಖಾದ್ಯಗಳಾದ ತೇವು ಸಜಂಕ್, ನೀರುಪ್ಪಡ್, ಪದಂಗಿ ಗಸಿ, ತಿಮರೆ ಚಟ್ನಿ, ಕುಕ್ಕು ಚಟ್ನಿ, ಮೆಂತೆ ಗಂಜಿ, ಉರ್ಪೆಲ್ ನುಪ್ಪ, ಕುಡು ಸಾರ್ ಮತ್ತು ಚಟ್ನಿ, ಪೆಲಕಾಯಿದ ಗಾರಿಗಾ ಮತ್ತಿತರ ಹಲವಾರು ತಿಂಡಿ, ತಿನಸುಗಳನ್ನು ಬಡಿಸಲಾಯಿತು. ಸುಮಾರು ಎರಡು ಸಾವಿರ ಮಂದಿ ಪಾಲ್ಗೊಂಡಿದ್ದರು. ದಗಲ್ಬಾಜಿ ಚಿತ್ರದ ತಂಡ ಹಾಗೂ ಇತರ ಕಲಾವಿದರಾದ ವಿಸ್ಮಯ್ ವಿನಾ ಯಕ್, ಸೂರಜ್ ಬೋಳೂರು, ಸುದೀಪ್ ಪಣಿಯೂರು, ನೃತ್ಯ ಸಂಯೋಜಕಿ ಬಬಿತಾ, ಅರಣ್ ಕನ್ಯಾನ, ರೆಹಮಾನ್ ಉಡುಪಿ ಮತ್ತಿತರ ಕಲಾವಿದರು ಜನರನ್ನು ರಂಜಿಸಿದರು.
ಸಮಾರಂಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿದರು. ಏಕ್ಸ್ ಟ್ರೀಮ್ ಡಾನ್ಸ್ ತಂಡ ಮೂಲ್ಕಿ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ನಿರ್ದೇಶಕರಾದ ಭಾಸ್ಕರ ಪಿ. ಕೊಟ್ಯಾನ್, ರಾಜೇಶ್ವರೀ ನಿತ್ಯಾನಂದ, ದಿವಾಕರ ಕೋಟ್ಯಾನ್ ವೇದಿಕೆಯಲ್ಲಿದ್ದರು. ಮೂಲ್ಕಿ ಯುವಾಹಿನಿ ಘಟಕದ ಅಧ್ಯಕ್ಷೆ ಕುಶಲಾ ಶೇಖರ್ ಕುಕ್ಯಾನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಚರಿಶ್ಮಾ ಶ್ರೀನಿವಾಸ್ ವಂದಿಸಿದರು.
ಯುವ ಜನಾಂಗಕ್ಕೆ ಚ್ಚುಮೆಚ್ಚು
ಆಟಿ ತಿಂಗಳ ನೆನಪು ಮತ್ತು ಆಚರಣೆ ಇಂದಿನ ಯುವಕ, ಯುವತಿಯರಿಗೆ ಅತಿ ಮುಖ್ಯವಾಗಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ನಿತ್ಯವೂ ಕಷ್ಟ ಪಡಬೇಕಾದ ಅನಿವಾರ್ಯತೆಗಳು ಮಹಿಳೆಯರಿಗೆ ಅತಿಯಾಗಿತ್ತು ಎಂಬುವುದು ಸತ್ಯ ಆದರೆ ಇಂದು ಅದು ಹಾಗಿಲ್ಲ.
- ಪಮೀಳಾ ದೀಪಕ್
ಸಾಹಿತಿ