ಗ್ಯಾಸ್, ಡೀಸೆಲ್ಗೆ ತೆರಿಗೆ ಮೂಲಕ 10 ಲಕ್ಷ ಕೋಟಿ ರೂ. ಲೂಟಿ
Team Udayavani, Apr 29, 2018, 6:00 AM IST
ಮಂಗಳೂರು: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಜಿಡಿಪಿ (ಗ್ಯಾಸ್, ಡೀಸೆಲ್, ಪೆಟ್ರೋಲ್) ಮೇಲೆ ತೆರಿಗೆ ವಿಧಿಸುವ ಮೂಲಕ ಕಳೆದ 4 ವರ್ಷಗಳಲ್ಲಿಜನಸಾಮಾನ್ಯರ 10 ಲಕ್ಷ ಕೋಟಿ ರೂ.ಗಳನ್ನು ಲೂಟಿ ಮಾಡಿದೆ ಎಂದು ಕೇಂದ್ರದ ಮಾಜಿ ಸಹಾಯಕ ಸಚಿವರಾದ ಪ್ರದೀಪ್ ಜೈನ್ ಮತ್ತು ದೀಪಾ ದಾಸ್ಮುನ್ಶಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಖಾತೆಯ ಮಾಜಿ ಸಹಾಯಕ ಸಚಿವ ಪ್ರದೀಪ್ ಜೈನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರಕಾರವು ಸೆಂಟ್ರಲ್ ಎಕ್ಸೈಸ್ ಡ್ನೂಟಿ 12 ಬಾರಿ ಹೆಚ್ಚಳ ಮಾಡಿದೆ. ಅದರೊಂದಿಗೆ ನೋಟು ಅಮಾನ್ಯಗೊಳಿಸುವ ಮೂಲಕ ಜನಸಾಮಾನ್ಯರ ಹಣವನ್ನು ಲೂಟಿ ಹೊಡೆದಿದ್ದು, ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಗಂಗೆಯನ್ನು ತಾಯಿ ಎಂದು ಆ ಪವಿತ್ರ ನದಿಯ ಹೆಸರಿನಲ್ಲಿ ಓಟು ಪಡೆದು ಗಂಗೆಯನ್ನು ಶುದ್ಧ ಮಾಡುವುದಾಗಿ ಹೇಳಿದವರು ಆ ಕಾರ್ಯವನ್ನು ಇನ್ನೂ ಮಾಡಿಲ್ಲ. ಆದರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ತಳಮಟ್ಟದ ಜನರನ್ನೂ ಮುಟ್ಟುವ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಕೇಂದ್ರ ಯೋಜನೆ ಕಸವೇ?
ರಾಜ್ಯ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಆರಂಭದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕರು ಅದನ್ನು ಕಸ ಎಂಬುದಾಗಿ ಪ್ರತಿಕ್ರಿಯಿಸಿದರು. ಇದಾಗಿ 24 ಗಂಟೆಗಳ ಬಳಿಕ ಕಾಂಗ್ರೆಸ್ ಪ್ರಣಾಳಿಕೆಗೆ ಕೇಂದ್ರ ಯೋಜನೆಗಳ ನಕಲು ಎಂದು ಹೇಳಿದರು. ಹಾಗಿದ್ದರೆ ಕೇಂದ್ರದ ಯೋಜನೆಗಳು ಕಸವೇ ಎಂಬುದು ನನ್ನ ಪ್ರಶ್ನೆ ಎಂದು ಕೇಂದ್ರದ ನಗರಾಭಿವೃದ್ಧಿ ಖಾತೆಯ ಮಾಜಿ ಸಹಾಯಕ ಸಚಿವೆ ದೀಪಾ ದಾಸಮುನ್ಶಿ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ನ ಯುವ ನಾಯಕ ಜೈವೀರ್ ಶೇರ್ಗಿಲ್ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.