ಕೆಂಜಾರು ಗ್ರಾಮಕರಣಿಕ ಕಚೇರಿ ಗೋಡೆ ಕುಸಿತ; ಅಪಾಯದ ಭೀತಿ
Team Udayavani, Feb 1, 2019, 6:47 AM IST
ಮಳವೂರು: ಇಲ್ಲಿನ ಕೆಂಜಾರು ಅಂಬೇಡ್ಕರ್ ನಗರದಲ್ಲಿರುವ ಕೆಂಜಾರು ಗ್ರಾಮಕರಣಿಕರ ಕಚೇರಿ ಯ ಗೋಡೆ ಕುಸಿತಗೊಂಡು ಅಪಾಯ ದಲ್ಲಿದೆ. ಕಳೆದ ಮಳೆಗಾಲದಲ್ಲಿ ಕಟ್ಟಡದ ಎದುರು ಭಾಗದ ಗೋಡೆ ಕುಸಿದು ಬಿದ್ದಿತ್ತು. ಆದರೆ ಈಗ ಕಟ್ಟಡದ ಇನ್ನೊಂದು ಗೋಡೆ ಬೀಳುವ ಸ್ಥಿತಿಯ ಲ್ಲಿದೆ, ಜತೆಗೆ ಕಟ್ಟಡದ ಸಮೀಪದಲ್ಲೇ ರಸ್ತೆ ಇರುವುದರಿಂದ ಸಂಚರಿಸುವ ವಾಹನ, ಜನರಿಗೆ ಅಪಾಯ ಕಾದಿದೆ.
ಮಳವೂರು ಗ್ರಾಮದ ಗ್ರಾಮ ಕರಣಿಕರ ಕಚೇರಿ ಪಂಚಾಯತ್ ಕಟ್ಟಡದ ಒಂದನೇ ಅಂತಸ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ. ಕೆಂಜಾರಿನ ಗ್ರಾಮ ಕರಣಿಕರ ಕಚೇರಿ ಅಂಬೇಡ್ಕರ್ ನಗರದ ಕಟ್ಟಡದಲ್ಲಿತ್ತು. ಸುಮಾರು 35 ವರ್ಷಗಳ ಹಳೆಯ ಕಟ್ಟಡ ಇದಾಗಿದೆ. ಈ ಕಟ್ಟಡದ ಹಿಂಬದಿಯ ಗೋಡೆ, ಛಾವಣಿಗಳು ಈಗಾಗಲೇ ಬಿದ್ದು ಹೋಗಿದೆ. ಕಳೆದ ಬಾರಿಯ ಮಳೆಯಲ್ಲಿ ಕಚೇರಿಯ ಮುಂಭಾಗದ ಗೋಡೆ ಕುಸಿದು ಬಿದ್ದಿದೆ. ಕಚೇರಿಯ ಪಕ್ಕ ದಲ್ಲಿಯೇ ಅಂಬೇಡ್ಕರ್ ನಗರ, ಹತ್ತಿರದ ನಗರಕ್ಕೆ ಹೋಗುವ ರಸ್ತೆ ಇದೆ. ಕಚೇರಿಯ ಗೋಡೆಗಳು ಇನ್ನೂ ಕುಸಿತವಾದರೆ ಅದು ರಸ್ತೆಗೆ ಬೀಳಲಿವೆ. ಇದರಿಂದ ಆ ರಸ್ತೆಯಲ್ಲಿ ಹೋಗುವ ವಾಹನ ಮತ್ತು ಪಾದಚಾರಿಗಳಿಗೆ ಅಪಾಯವಿದೆ. ಇದರಿಂದ ರಸ್ತೆಯ ವಾಹನ ಸಂಚಾರಕ್ಕೂ ತಡೆಯಾಗಲಿದೆ.
2 ಗ್ರಾಮಕ್ಕೆ ಒಬ್ಬರೇ ಗ್ರಾಮಕರಣಿಕರು
ಮಳವೂರು, ಕೆಂಜಾರು ಗ್ರಾಮ ಗಳಿಗೆ ಒಬ್ಬರೇ ಗ್ರಾಮಕರಣಿಕರು. ವಾರದಲ್ಲಿ ಮೂರು ದಿನ ಮಳವೂರು ಕಚೇರಿ ಯಲ್ಲಿ, ಮೂರು ದಿನ ಕೆಂಜಾರು ಕಚೇರಿಯಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದಾರೆ.ಈ ಕಟ್ಟಡ ಗ್ರಾಮ ಕರಣಿಕರಿಗೆ ಮೀಸಲಿರಿಸಿದ 12 ಸೆಂಟ್ಸ್ ಜಾಗದಲ್ಲಿದೆ. ಕಟ್ಟಡ ಅಪಾಯದಲ್ಲಿರುವುದರಿಂದ ಗ್ರಾಮ ಕರಣಿಕರ ಕಚೇರಿಯನ್ನು ಪಂ.ಕಟ್ಟಡಕ್ಕೆ ಮತ್ತು ಪಂಚಾಯತ್ ಕಟ್ಟಡದಲ್ಲಿ ನಡೆಯುತ್ತಿದ್ದ ಮುಂದುವರಿಕಾ ಶಿಕ್ಷಣ ಇಲಾಖಾ ತರಬೇತಿ ಕೇಂದ್ರವನ್ನು ಅಂಬೇಡ್ಕರ್ ನಗರದ ಪಂ. ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ.
ಮನವಿ
ಈ ಕಟ್ಟಡದಿಂದ ಸಾರ್ವಜನಿಕರಿಗೆ ಅಪಾಯವನ್ನು ಗಮನಿಸಿ, ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆರವುಗೊಳಿಸಲು ನಿರ್ಣಯ ತೆಗೆದುಕೊಂಡು ತಹಶೀಲ್ದಾರರಿಗೆ ಈಗಾಗಲೇ ಮನವಿ ಮಾಡಲಾಗಿದೆ.
– ಗಣೇಶ್ ಅರ್ಬಿ,
ಅಧ್ಯಕ್ಷ , ಮಳವೂರು ಗ್ರಾ.ಪಂ.