ಕೆಂಪುಕಲ್ಲು ಲಾರಿಗಳ ಸಂಚಾರ ನಿಷೇಧಿಸಿ ಫಲಕ ಅಳವಡಿಕೆ
Team Udayavani, Jun 20, 2018, 2:37 PM IST
ನಿಡ್ಪಳ್ಳಿ : ನಿಡ್ಪಳ್ಳಿ ದೈವಸ್ಥಾನ ಹಾಗೂ ಶಾಂತದುರ್ಗಾ ದೇವಸ್ಥಾನದ ರಸ್ತೆಯಲ್ಲಿ ಕೆಂಪುಕಲ್ಲು ಹೊತ್ತ ಲಾರಿಗಳು ಮಳೆಗಾಲದಲ್ಲಿ ಸಂಚರಿಸುವುದನ್ನು ನಿಷೇಧಿಸಿ ರಸ್ತೆ ಬದಿಯಲ್ಲಿ ಫಲಕ ಅಳವಡಿಸಿರುವ ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಲಾರಿ ಮಾಲಕರಲ್ಲೂ ಅರಿವು, ಜಾಗೃತಿ ಮೂಡಿಸಿದ್ದಾರೆ.
ನಿಡ್ಪಳ್ಳಿ ಪರಿಸರದಲ್ಲಿ ಕೆಂಪು ಕಲ್ಲು ಕೊರೆಗಳು ವರ್ಷವಿಡೀ ಕಾರ್ಯಾಚರಿಸುತ್ತಿದ್ದು, ಅಧಿಕ ಭಾರ ಹೊತ್ತ ಲಾರಿಗಳು ಚಲಿಸಿದರೆ ಮಳೆಗಾಲದಲ್ಲಿ ಡಾಮರು ಎದ್ದು ಹೋಗುತ್ತದೆ. ಕಚ್ಚಾ ರಸ್ತೆಗಳು ಹೊಂಡ, ಗುಂಡಿಗಳಿಂದ ಕೆಸರುಮಯವಾಗಿ ಜನರು ಸಂಕಷ್ಟ ಪಡಬೇಕಾಗಿದೆ. ಶಾಲೆ, ಕಾಲೇಜುಗಳ ಮಕ್ಕಳಿಗೂ ಸಮಸ್ಯೆಯಾಗುತ್ತದೆ. ಆದುದರಿಂದ ಮಳೆಗಾಲದಲ್ಲಾದರೂ ಈ ಲಾರಿಗಳು ಸಂಚಾರ ನಿಲ್ಲಿಸಿದರೆ ರಸ್ತೆ ಉಳಿಯಬಹುದು ಎಂಬ ನಿರೀಕ್ಷೆಯಲ್ಲಿ ರಸ್ತೆ ಬದಿ ಬೋರ್ಡು ಅಳವಡಿಸಲಾಗಿದೆ. ಇದಕ್ಕೆ ಲಾರಿಯವರು ಸಹಕಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಬೇಕಾದೀತು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.