ಕಮಿಲ-ಮೊಗ್ರ ಸೇತುವೆ: ಹೊಂಡ, ಕುಸಿತ
Team Udayavani, Aug 2, 2018, 12:59 PM IST
ಸುಬ್ರಹ್ಮಣ್ಯ: ಕಮಿಲ ಮೊಗ್ರ ರಸ್ತೆಯ ಸೇತುವೆಯಲ್ಲಿ ಹೊಂಡ ಬಿದ್ದಿದ್ದು ಸಂಪರ್ಕ ಕುಸಿತದ ಭೀತಿ ಇದೆ. ಗುತ್ತಿಗಾರು ಗ್ರಾಮದ ಕಮಿಲ- ಮೊಗ್ರ-ಏರಣಗುಡ್ಡೆ ರಸ್ತೆ ಹದಗೆಟ್ಟಿದೆ. ಈ ರಸ್ತೆಯಲ್ಲಿ ಇರುವ ಸೇತುವೆ ಅನೇಕ ವರ್ಷಗಳಿಂದ ಶಿಥಿಲವಾಗಿದೆ. ಇದು ದುರಸ್ತಿಯಾಗಬೇಕು ಎಂಬ ಒತ್ತಾಯವಿದ್ದರೂ ರಿಪೇರಿಯಾಗೇ ಇಲ್ಲ. ಈ ಸೇತುವೆ ಮಳೆಯ ಕಾರಣದಿಂದ ಎರಡು ಕಡೆ ಕುಸಿತವಾಗಿದೆ. ಇದೇ ರಸ್ತೆಯಲ್ಲಿ ಇರುವ ಇನ್ನೊಂದು ಸೇತುವೆಯೂ ಕುಸಿದಿದ್ದು, ತಾತ್ಕಾಲಿ ದುರಸ್ತಿಗೊಂಡಿದೆ.
ನಿರ್ಮಾಣವಾದ ವರ್ಷವೇ ಕುಸಿತ
ಕಮಿಲ -ಏರಣಗುಡ್ಡೆ ರಸ್ತೆಯಲ್ಲಿ 10 ವರ್ಷ ಗಳ ಹಿಂದೆ ನಿರ್ಮಾಣವಾದ ಸೇತುವೆ ವರ್ಷದಲ್ಲೇ ಕುಸಿತವಾಗಿತ್ತು. ಕೇಂದ್ರ ಸರಕಾರದ ವಿಶೇಷ ಯೋಜನೆಯ ಅನ್ವಯ ಸಾರ್ವಜನಿಕರ ಸಹಭಾಗಿತ್ವದಲ್ಲಿ, ಆರ್ಥಿಕ ಸಹಕಾರದಲ್ಲಿ ಇಲ್ಲಿ ಸೇತುವೆ ನಿರ್ಮಾಣವಾಗಿತ್ತು. ಆದರೆ ಕೆಲವೇ ಸಮಯದಲ್ಲಿ ಕುಸಿತವೂ ಉಂಟಾಗಿತ್ತು. ಹೀಗೆ, ಸೇತುವೆ ಕುಸಿದು 9 ವರ್ಷ ಕಳೆದರೂ ಸಂಪೂರ್ಣ ದುರಸ್ತಿಯಾಗಿಲ್ಲ.
ಮರಳು ತುಂಬಿರುವ ಸೇತುವೆಯ ಮೇಲೆಯೇ ವಾಹನ ಓಡಾಟ ನಡೆಯುತ್ತಿದೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದರೂ ಸಮಸ್ಯೆ ಪರಿಹಾರ ಕಂಡಿಲ್ಲ. ಜನತೆ ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಇದೀಗ ಮತ್ತೆ ಕುಸಿತವಾಗಿದ್ದು, ಸಾರ್ವಜನಿಕರ ಸಂಚಾರ ಆತಂಕದಲ್ಲಿದೆ. ಏರಣಗುಡ್ಡೆ ಪ್ರದೇಶದಲ್ಲಿ ಬಹುಪಾಲು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಬಡವರೇ ಇದ್ದಾರೆ. ಈ ಸೇತುವೆ ಕುಸಿತವಾದರೆ ಸಂಕಷ್ಟ ಸ್ಥಿತಿ ನಿರ್ಮಾಣವಾಗಲಿದೆ. ಅಧಿಕಾರಿಗಳು ತತ್ ಕ್ಷಣವೇ ಸ್ಪಂದಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.