ಕುಂತೂರಿನ ಹರೀಶ್ ಭಟ್ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ
Team Udayavani, Feb 26, 2022, 5:20 AM IST
ಕಡಬ: ಕುಂತೂರು ಗ್ರಾಮದ ನವ ಕೇವಳ ನಿವಾಸಿ ಹರೀಶ್ ಭಟ್ ಅವರು ಭಾರತ ಸರಕಾರದ ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ವಿದೇಶಗಳಲ್ಲಿರುವ ಭಾರತದ ರಾಯಭಾರ ಕಚೇರಿ ಗಳ ಅಧೀನದಲ್ಲಿರುವ ಸಾಂಸ್ಕೃತಿಕ ಕೇಂದ್ರಗಳ ಮೂಲಕ ಆ ದೇಶಗಳಲ್ಲಿ ಭಾರತದ ವಿವಿಧ ಪ್ರದೇಶಗಳ ಕಲೆ, ಪರಂಪರೆ, ಸಂಸ್ಕೃತಿ ಯನ್ನು ಪರಿಚಯಿಸುವ ಸಲುವಾಗಿ ಯೋಗ, ನೃತ್ಯ, ಸಂಗೀತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪರಿಣತಿ ಪಡೆದವರನ್ನು ಆಯ್ಕೆ ಮಾಡಿ ವಿದೇಶಗಳಿಗೆ ಕಳುಹಿಸುವ ಕಾರ್ಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಐಸಿಸಿಆರ್ (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್) ಸಂಸ್ಥೆಯು ನಡೆಸುತ್ತಿದ್ದು, ಅದರ ಅಂಗವಾಗಿ ಯೋಗದ ಪ್ರಚಾರಕ್ಕಾಗಿ ಹರೀಶ್ ಭಟ್ ಆಯ್ಕೆ ಯಾಗಿದ್ದಾರೆ.
12 ವರ್ಷಗಳ ಕಾಲ ದುಬಾೖ, ಮಾಲ್ಡೀವ್ಸ್ನಲ್ಲಿ ಯೋಗ ತರಬೇತು ದಾರರಾಗಿ ಕೆಲಸ ಮಾಡಿರುವ ಅವರು ಪ್ರಸ್ತುತ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾರ್ಚ್ನಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಿ ಬಳಿಕ ಐಸಿಸಿಆರ್ ನಿಗದಿಪಡಿಸಿದ ದೇಶಕ್ಕೆ ತೆರಳಿ ಅಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಬೇಕಿದೆ. ಹರೀಶ್ ಅವರು ದಿ| ಗೋವಿಂದ ಭಟ್ ಮತ್ತು ಕೃಷ್ಣ ಕುಮಾರಿ ದಂಪತಿಯ ಪುತ್ರ.