ವೇದಾಂತ ಅಧ್ಯಯನದಿಂದ ಉನ್ನತ ಸಾಧನೆ ಸಾಧ್ಯ: ಕನ್ಯಾಡಿ ಶ್ರೀ
Team Udayavani, Jul 28, 2018, 1:16 PM IST
ಬೆಳ್ತಂಗಡಿ : ಆಧ್ಯಾತ್ಮವು ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದ್ದು, ನಾವು ಪರಿಶುದ್ಧ ಮನಸ್ಸಿನಿಂದ ಧರ್ಮದ ಅನುಷ್ಠಾನ ಮಾಡಿದಾಗ ನೆಮ್ಮದಿ ಸಾಧ್ಯವಾಗುತ್ತದೆ. ಯಾವುದೇ ಕಾರ್ಯದಲ್ಲೂ ಮನಸ್ಸಿನ ನಿಯಂತ್ರಣ ಅತಿ ಮುಖ್ಯವಾಗಿದ್ದು, ವೇದಾಂತ ಅಧ್ಯಯನದಿಂದ ಉನ್ನತ ಸಾಧನೆ ಸಾಧ್ಯ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜನೆಗೊಂಡಿದ್ದ ಗುರುಪೂಜೆ ಹಾಗೂ ಗುರುವಂದನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮನುಷ್ಯ ಜೀವನದಲ್ಲಿ ತುಂಬಿರುವ ಅಂಧಕಾರವನ್ನು ದೂರ ಮಾಡಿ ಬೆಳಕಿನೆಡೆಗೆ ಸಾಗಲು ಮಾರ್ಗದರ್ಶನ ನೀಡುವುದೇ ಗುರುತತ್ತ್ವವಾಗಿದ್ದು, ಇದು ಇಂದಿನ ಮಕ್ಕಳಿಗೆ ಅನಿವಾರ್ಯವಾಗಿದೆ. ಶಾಲಾ-ಕಾಲೇಜುಗಳ ಶಿಕ್ಷಣ ಮಕ್ಕಳನ್ನು ಯಾಂತ್ರಿಕ ರೀತಿಯಲ್ಲಿ ಬೆಳೆಸುತ್ತಿದ್ದು, ಆಧ್ಯಾತ್ಮಿಕ, ನೈತಿಕ ಶಿಕ್ಷಣದ ಅಗತ್ಯವಿದೆ. ಇದೇ ಉದ್ದೇಶದಿಂದ ಸೆ. 3ರಂದು ಧರ್ಮ ಸಂಸದ್ ಆಯೋಜನೆಗೊಂಡಿದ್ದು, ಸನಾತನ ಧರ್ಮದ ಉದ್ದೀಪನದ ಚರ್ಚೆಗಳು ನಡೆಯಲಿವೆ. ಇಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಸರಕಾರಕ್ಕೆ ಮುಟ್ಟಿಸುವ ಕಾರ್ಯ ನಡೆಸಲಾಗುವುದು ಎಂದು ವಿವರಿಸಿದರು. ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ ಅವರು ಗುರುನಮನ ಸಲ್ಲಿಸಿ, ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು.
ಈ ಸಂದರ್ಭ ಗುರುಪೂಜೆ ಹಾಗೂ ಗುರುವಂದನೆ ನಡೆಯಿತು. ಶಾಸಕ ಹರೀಶ್ ಪೂಂಜ, ಚಿತ್ತರಂಜನ್ ಗರೋಡಿ, ಸುಜಿತಾ ವಿ. ಬಂಗೇರ, ಮೋಹನ್ಕುಮಾರ್ ಉಜ್ಜೋಡಿ, ತುಕಾರಾಮ ಪೂಜಾರಿ, ಲೋಹಿತ್, ಆರ್.ಜಿ. ನಾಯಕ್ ಉಪಸ್ಥಿತರಿದ್ದರು. ಕೃಷ್ಣಪ್ಪ ಪೂಜಾರಿ ಸ್ವಾಗತಿಸಿದರು.