“ಸ್ವಚ್ಛತಾ ಸೇನಾನಿಗಳ ಆರೋಗ್ಯ ರಕ್ಷಣೆ ನಮ್ಮ ಹೊಣೆ’
Team Udayavani, Apr 10, 2020, 12:07 PM IST
ಬೆಳ್ತಂಗಡಿ: ನಗರ ಸ್ವಚ್ಛತೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯ ರಕ್ಷಣೆಗೋಸ್ಕರ ಅಗತ್ಯವಿರುವ ಪರಿಕರಗಳನ್ನು ಉಪಯೋಗಿಸಿ ಆ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅಂತಹ ಪೌರಕಾರ್ಮಿಕರ ಆರೋಗ್ಯ ರಕ್ಷಣೆಯನ್ನು ಮಾಡುವಂತದ್ದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಶಶಿಕಾಂತ್ ಡೋಂಗ್ರೆ ಹೇಳಿದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಪೌರಕಾರ್ಮಿಕ ಸಿಬಂದಿಗೆ, ಇತರ ಸ್ವಚ್ಛತಾ ಕಾರ್ಮಿಕರಿಗೆ ವಿಶ್ವ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಕೊಡುಗೆಯಾಗಿ ನೀಡಿದ ಮುಖ ಗವಸು (ಮಾಸ್ಕ್)ಗಳನ್ನು ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೌರ ಕಾರ್ಮಿಕರು ಸರಿಯಾದ ರೀತಿ ಯಲ್ಲಿ ಆರೋಗ್ಯ ರಕ್ಷಾ ಕವಚಗಳನ್ನು ಉಪಯೋಗಿಸುವ ವಿಧಾನಗಳನ್ನು ತಿಳಿದುಕೊಳ್ಳವ ಅಗತ್ಯ ಇದೆ ಎಂದು ಈ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್, ಪ್ರಕಾಶ್ ತುಳುಪುಳೆ, ಯಶವಂತ ಪಟ ವರ್ಧನ್, ಬಿ.ಕೆ. ಧನಂಜಯ ರಾವ್, ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಎಂಜಿನಿಯರ್ ಮಹಾವೀರ್ ಆರಿಗ, ಸ್ವತ್ಛತಾ ಸಿಬಂದಿ ಉಪಸ್ಥಿತರಿದ್ದರು. ವಿಜಯ ಕುಮಾರ್ ಅವರು ನಿರೂಪಿಸಿ, ವಂದಿಸಿದರು.