Bantwala: ಪಡಿತರ ಚೀಟಿದಾರರ ಅಕ್ಕಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ
Team Udayavani, Aug 18, 2023, 12:15 PM IST
ಬಂಟ್ವಾಳ: ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗಲು ಭಾರತೀಯ ಆಹಾರ ಇಲಾಖೆ ನೀಡಿದ ಅಕ್ಕಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗೋಲ್ ಮಾಲ್ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸುಮಾರು 1 ಕೋಟಿ 32 ಲಕ್ಷದ 36 ಸಾವಿರದ 30 ರೂ ಮೌಲ್ಯದ 3892.95.450 ಕಿಂಟ್ವಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮದ ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹಾಂಡ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ. ಡಿಪೋ ದ ಮುಂಭಾಗದಲ್ಲಿರುವ ಗೊಡೌನ್ ನಲ್ಲಿ ದಾಸ್ತಾನು ಇಡಲಾಗಿದ್ದ ಅಕ್ಕಿಯ ಲೆಕ್ಕಾಚಾರದಲ್ಲಿ ಕೊರತೆ ಕಂಡ ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಪೋಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಡೌನ್ ಮೇಲ್ವಿಚಾರಕ ವಿಜಯ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಶಕ್ಕೆ ಪಡೆಯುವ ಅವಕಾಶಗಳಿವೆ. ಉಳಿದಂತೆ ವಿಜಯ್ ನೀಡಿದ ಮಾಹಿತಿ ಆಧರಿಸಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವ ಬಗ್ಗೆ ಕಾರ್ಯಚರಣೆ ಮುಂದುವರಿಸಿದ್ದಾರೆ.
ಜಿಲ್ಲಾಧಿಕಾರಿಗೆ ಶಾಸಕರ ಪತ್ರ: ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು
ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ವಿತರಣೆಯಾದ ಅಕ್ಕಿ ಅವ್ಯವಹಾರವಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ.
ಸಂಬಂಧಪಟ್ಟ ಬಂಟ್ವಾಳ ತಾಲೂಕಿನ ಪಡಿತರದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ಸರಬರಾಜಾದ ಪಡಿತರ ಅಕ್ಕಿಯು ಗೋದಾಮಿನಲ್ಲಿ ದುರುಪಯೋಗ, ಅವ್ಯವಹಾರ ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಮಾನಿ ಇದ್ದು ಈ ಕುರಿತು ನನಗೆ ದೂರುಗಳು ಬಂದಿರುತ್ತವೆ, ಆದುದರಿಂದ ತಾವು ತಕ್ಷಣ ಈ ಕುರಿತು ವೈಯಕ್ತಿಕ ಗಮನ ಹರಿಸಿ ಅಕ್ಕಿ ದಾಸ್ತಾನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.