‘ತುಳು ಭಾಷೆ ಅಭಿವೃದಿಗೆ ಕಾರ್ಯಕ್ರಮಗಳು ನಡೆಯಲಿ’
Team Udayavani, Feb 16, 2019, 7:22 AM IST
ವಿಟ್ಲ : ತುಳು ಭಾಷೆ ಅಭಿವೃದ್ಧಿಗೆ ಕಾರ್ಯಕ್ರಮ ನಡೆಯುತ್ತಿರಬೇಕು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ಆಗಬೇಕಿದ್ದು, ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಕೆಲವು ರಾಜ್ಯಗಳ ಜನಪ್ರತಿನಿಧಿಗಳ ಒತ್ತಡಗಳಿಂದ ಬೇರೆ ಭಾಷೆಗಳಿಗೆ ಸ್ಥಾನಮಾನ ಸಿಕ್ಕಿವೆ. ಪರಿಣಾಮವಾಗಿ ತುಳುವಿನ ಸ್ಥಾನಮಾನ ಯೋಜನೆ ಕೈತಪ್ಪಿಹೋಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆದ ಶ್ರೀ ಒಡಿಯೂರು ರಥೋತ್ಸವ ತುಳುನಾಡª ಜಾತ್ರೆ 2019ರ ಅಂಗವಾಗಿ ಗುರುವಾರ ನಡೆದ ತುಳು ಭಾಷೆ-ಸಂಸ್ಕೃತಿ ಜಾಗೃತಿಗಾಗಿ ತುಳು ಬದ್ಕ್ ದ ನಿಲೆ-ಬಿಲೆ ಎಂಬ ಹೆಸರಿನ 19ನೇ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಂಶೋಧಕಿ ಡಾ| ಇಂದಿರಾ ಹೆಗ್ಡೆ ಮಾತನಾಡಿ, ಸಂಸ್ಕೃತಿಯಲ್ಲಿ ತುಳುವಿಗೆ ಅದರದ್ದೇ ಸ್ಥಾನಮಾನವಿದೆ. ತುಳುವಿನ ಹೆಸರಲ್ಲಿ ರಾಜಕೀಯ ಪಕ್ಷ ಇದ್ದಾಗ ಸ್ಥಾನಮಾನ ಪಡೆಯಲು ಸಹಕಾರಿಯಾಗ ಬಹುದು. ಒಡಿಯೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ತುಳುವಿನ ಕೆಲಸ ಶ್ಲಾಘನೀಯ ಎಂದರು.
ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ಮಾತನಾಡಿ, ತುಳು ಲಿಪಿಯನ್ನು ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ನಡೆಯಬೇಕು. ನಾಮಫಲಕಗಳಲ್ಲಿ ತುಳು ಲಿಪಿಯನ್ನೂ ಅಳವಡಿಸಬೇಕು. ಕರಾವಳಿಯಲ್ಲಿ ತುಳು ಉಳಿಸುವ ನಿಟ್ಟಿನಲ್ಲಿ ಕಂಬಳದ ಪಾತ್ರವೂ ಇದೆ ಎಂದು ಹೇಳಿದರು.
ಅದೃಷ್ಟ ತುಳುವೆ ಬಂಗಾರ್ ಪೆಜಿವೆ
ಆರಂಭದಿಂದ ಸಮಾರೋಪ ಸಮಾರಂಭದ ತನಕ ತುಳು ಸಮ್ಮೇಳನದಲ್ಲಿ ಭಾಗಿಯಾದವರಿಗೆ ಅದೃಷ್ಟ ತುಳುವೆ ಬಂಗಾರ್ ಪೆಜಿವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿತ್ತು. ಐವರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ನೀಡುವುದೆಂದು ಸ್ವಾಮೀಜಿ ಘೋಷಿಸಿದ್ದರು. ಯಶೋಧರ ಸಾಲ್ಯಾನ್, ಸುಂದರ್, ಚಂದಪ್ಪ ನಾಯ್ಕ ಕೆ., ಜಯಲಕ್ಷ್ಮೀ, ರಕ್ಷಿತ್ ಕಾಸರಗೋಡು ಅವರು ಒಂದು ಗ್ರಾಂ ಬಂಗಾರದ ಬಹುಮಾನ ಪಡೆದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ ಶರತ್ ಆಳ್ವ ಚನಿಲ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗ್ರಾಮ ಸಂಯೋಜಕಿ ಲೀಲಾ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಂಗಳೂರು ತಾಲೂಕು ವಿಸ್ತರಣಾಧಿಕಾರಿ ನವೀನ್ ಶೆಟ್ಟಿ, ಪುತ್ತೂರು ವಿಸ್ತರಣಾಧಿಕಾರಿ ಸುರೇಶ್ ಶೆಟ್ಟಿ ಮೊಗರೋಡಿ, ಕೇಂದ್ರ ಕಚೇರಿಯ ವೀಕ್ಷಾ ರೈ ಸಮ್ಮಾನಪತ್ರ ವಾಚಿಸಿದರು.
ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಪುತ್ತೂರು ಶಾಖೆಯ ವ್ಯವಸ್ಥಾಪಕ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಬಂಟ್ವಾಳ ವಿಸ್ತರಣಾ ಧಿಕಾರಿ ಸದಾಶಿವ ಅಳಿಕೆ ನಿರೂಪಿಸಿದರು.
ತುಳುಸಿರಿ ಮಾನಾದಿಗೆ
ಸಾಹಿತ್ಯ ಕ್ಷೇತ್ರದಲ್ಲಿ ಉಗ್ಗಪ್ಪ ಪೂಜಾರಿ, ಜಾನಪದ ಕ್ಷೇತ್ರದಲ್ಲಿ ಕೇಶವ ಶೆಟ್ಟಿ ಕೆ. ಆದೂರು, ವಕೀಲ ವೃತ್ತಿ ಮತ್ತು ಬೇಸಾಯ ಕ್ಷೇತ್ರದಲ್ಲಿ ಕೆ. ಎಸ್. ನಂಬಿಯಾರ್, ದೈವಾರಾಧನೆ ಕ್ಷೇತ್ರದಲ್ಲಿ ನಿಟ್ಟೋಣಿ ಬೆಳ್ಳೂರು, ಕುಲಕಸುಬು ಕ್ಷೇತ್ರದಲ್ಲಿ ಕೊರಗಪ್ಪ ಮೂಲ್ಯ ಕನ್ಯಾನ ಅವರಿಗೆ ತುಳುಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಮಲಾರು ಜಯರಾಮ ರೈ ಉಪಸ್ಥಿತರಿದ್ದರು.