ಮಡಿವಾಳ ಕಟ್ಟೆ ಕೆರೆ ಗಡಿ ಗುರುತಿಗೆ ಗ್ರಾಮಸ್ಥರ ಒತ್ತಾಯ
Team Udayavani, Aug 22, 2019, 5:00 AM IST
ಅಜೆಕಾರು: ಕೆರ್ವಾಶೆ ಗ್ರಾ.ಪಂ. ವ್ಯಾಪ್ತಿಯ ಮಡಿವಾಳಕಟ್ಟೆ ಕೆರೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಭಿವೃದ್ಧಿಗೊಂಡಿದ್ದರೂ ಕಂದಾಯ ಇಲಾಖೆ ಗಡಿ ಗುರುತು ಇನ್ನೂ ಸಹ ಮಾಡಿಲ್ಲ. ಖಾಸಗಿ ಒತ್ತುವರಿಯಾಗಿದ್ದರೆ ಕೂಡಲೇ ತೆರವುಗೊಳಿಸಿ ಕೆರೆಯ ಗಡಿ ಗುರುತು ತುರ್ತಾಗಿ ಮಾಡುವಂತೆ ಗ್ರಾಮಸ್ಥರು ಕೆರ್ವಾಶೆ ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು.
ಕೆರ್ವಾಶೆ ಗ್ರಾ.ಚ.ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಅವರ ಅಧ್ಯಕ್ಷತೆಯಲ್ಲಿ ಕೆರ್ವಾಶೆ ಸಾಗರ್ ಸಭಾಭವನದಲ್ಲಿ ನಡೆಯಿತು. ಮಡಿವಾಳ ಕಟ್ಟೆ ಕೆರೆಯ ಸಮೀಪ ದಲ್ಲಿಯೇ ವಿದ್ಯುತ್ ಲೈನ್ ಹಾದು ಹೋಗಿದ್ದು ಇದನ್ನು ಬದಲಾಯಿಸುವಂತೆ ಹಲವು ಬಾರಿ ಮನವಿ ಮಾಡಿದರೂ ನಿಷ್ಪ್ರಯೋಜಕವಾಗಿದೆ ಎಂದು ಗ್ರಾಮಸ್ಥರು ದೂರಿದರು.
ಹಂದಿ ಸಾಕಾಣಿಕೆ ಕೇಂದ್ರದಿಂದ ಪರಿಸರ ಮಾಲಿನ್ಯ
ಪಂಚಾಯತ್ ವ್ಯಾಪ್ತಿಯ ಶೆಟ್ಟಿಬೆಟ್ಟು ಪರಿಸರದಲ್ಲಿ ಹಂದಿ ಸಾಕಾಣೆ ಕೇಂದ್ರದಿಂದ ಪರಿಸರ ದುರ್ನಾತದಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಬಗ್ಗೆ ಈ ಹಿಂದಿನ ಗ್ರಾಮ ಸಭೆಗಳಲ್ಲಿ ಪ್ರಸ್ತಾವ ಮಾಡಲಾಗಿತ್ತಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಹಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪಂಚಾಯತಕ್ಕೆ ವರದಿ ನೀಡಲಾಗಿದೆ ಎಂದರು.
ಅಪಾಯಕಾರಿ ಮರ ತೆರವಿಗೆ ಆಗ್ರಹ
ಪಂಚಾಯತ್ ವ್ಯಾಪ್ತಿಯ ರಸ್ತೆ ಅಂಚಿನಲ್ಲಿರುವ ಅಪಾಯಕಾರಿ ಮರ ಹಾಗೂ ರಸ್ತೆಗೆ ಬಾಗಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಸಭೆಯಲ್ಲಿ ಮೆಸ್ಕಾಂ, ಕೃಷಿ, ಆರೋಗ್ಯ, ಬ್ಯಾಂಕ್, ತೋಟಗಾರಿಕೆ, ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಉದಯ ಕೋಟ್ಯಾನ್, ಪಿಡಿಒ ಮಧು, ಪಂಚಾಯತ್ ಸದಸ್ಯರು ಉಪಸ್ಥಿತ ರಿದ್ದರು. ಕೃಷಿ ಅಧಿಕಾರಿ ಸಿದ್ದಪ್ಪ ಅವರು ನೋಡಲ್ ಅಧಿಕಾರಿಯಾಗಿ ಭಾಗ ವಹಿಸಿದ್ದರು.
ಸದಾನಂದ ಸಾಲ್ಯಾನ್ ಅವರು ಸ್ವಾಗತಿ ಸಿದರು. ಕಾರ್ಯದರ್ಶಿ ಅಂಬುಜಾ ಪಾಲ್ಕೆ ಅವರು ವರದಿ ವಾಚಿಸಿ, ವಂದಿಸಿದರು.
ವಿದ್ಯುತ್ ಪರಿವರ್ತಕ ಬದಲಾವಣೆಗೆ ಮನವಿಕೆರ್ವಾಶೆ 2ನೇ ವಾರ್ಡ್ನಲ್ಲಿರುವ ವಿದ್ಯುತ್ ಪರಿವರ್ತಕ ಬದಲಾಯಿಸುವಂತೆ ಹಲವು ಬಾರಿ ಮೆಸ್ಕಾಂಗೆ ಮನವಿ ಮಾಡಿದರೂ ನಿಷ್ಟ್ರಯೋಜಕವಾಗಿದೆ. ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಪಾಲ್ದಾಕ್ಯಾರು ಶಾಲೆ ಬಳಿ ಹೆಚ್ಚುವರಿ ಕಂಬವನ್ನು ಹಾಕುವಂತೆ ಸೂಚಿಸಿದರು.